ನಾಯಕತ್ವದಿಂದ ಕೊಹ್ಲಿ ಕೆಳಗಿಳಿಯಲು ಇದು ಸಕಾಲ
"ವಿರಾಟ್ ಕೊಹ್ಲಿ ಫೀಲ್ಡಿಂಗ್, ಬ್ಯಾಟಿಂಗ್, ಕ್ಯಾಪ್ಟನಿಂಗ್ ಎಲ್ಲದರಲ್ಲೂ ತನ್ಮಯತೆಯಿಂದ ತೊಡಗಿಕೊಳ್ಳುತ್ತಾರೆ. ಆದರೆ ಇಂಥ ಕೋವಿಡ್ ಪಿಡುಗಿನಂಥ ಸಮಯದಲ್ಲಿ ಬಹುಶಃ ಪಾರ್ಥಿವ್ ಪಟೇಲ್ ಹೇಳಿದಂತೆ ಬಯೋ ಬಬಲ್ ಬದುಕು, ಅವರ ಕುಟುಂಬ ಇವೆಲ್ಲ ಸೇರಿ ಕೊಹ್ಲಿ ಬಹಳಷ್ಟು ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನೀವು ಕೊಹ್ಲಿಯನ್ನು ನೋಡಬಹುದು, ಅವರು ಜಾಹೀರಾತುಗಳು, ಸಭೆಗಳು ಎಲ್ಲದರಲ್ಲೂ ತೊಡಗಿರುತ್ತಾರೆ. ಹೀಗಾಗಿ ಅವರು ಸಹಜವಾಗಿಯೇ ತುಂಬಾ ಬ್ಯುಸಿ ಇರುತ್ತಾರೆ. ಹೀಗಾಗಿ ಟಿ20 ನಾಯಕತ್ವದಿಂದ ಕೆಳಗಿಳಿದು ಸಂಪೂರ್ಣವಾಗಿ ಕೊಹ್ಲಿ ಗಮನ ಹರಿಸಲು ಇದು ಸಕಾಲ," ಎಂದು ಸ್ಟಾರ್ಸ್ಪೋರ್ಟ್ಸ್ನ ಡಗೌಟ್ನಲ್ಲಿ ಮಾತನಾಡುತ್ತ ಡೇಲ್ ಸ್ಟೇನ್ ಹೇಳಿಕೊಂಡಿದ್ದಾರೆ.
'ವಿರಾಟ್ ಕೊಹ್ಲಿ ಖುಷಿಗಿಂತ ಬೇಜಾರಿನಲ್ಲಿದ್ದರು'
ಟಿ20ಐ ಮತ್ತು ಆರ್ಸಿಬಿ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿಯುವ ನಿರ್ಧಾರ ಪ್ರಕಟಿಸಿರುವ ಬಗ್ಗೆ ತನ್ನ ಅಭಿಪ್ರಾಯ ಹಂಚಿಕೊಂಡಿರುವ ಆರ್ಸಿಬಿ ಮಾಜಿ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್, "ನಾಯಕತ್ವ ತ್ಯಜಿಸುವ ನಿರ್ಧಾರ ಪ್ರಕಟಿಸುವಾಗ ಕೊಹ್ಲಿ ಖುಷಿಯಲ್ಲಿದ್ದಿದ್ದಕ್ಕಿಂತ ಬೇಜಾರಿನಲ್ಲಿದ್ದುದು ಕಾಣಿಸಿತು. ನನಗನ್ನಿಸುತ್ತದೆ; ನೀವು ಹಲವಾರು ವರ್ಷಗಳಿಂದ ಒಂದೇ ಫ್ರಾಂಚೈಸಿಗೆ ಆಡುತ್ತಿದ್ದರೆ ಇಂಥ ಭಾವನೆ ನಿಮ್ಮಲ್ಲಿ ಮೂಡುತ್ತದೆ. ಕೊಹ್ಲಿಗೆ ಆರ್ಸಿಬಿ ಬಗ್ಗೆ ಅಷ್ಟು ಭಾವನಾತ್ಮಕ ಸಂಬಂಧವಿದೆ. 2008ರಲ್ಲೇ ಆರ್ಸಿಬಿ ಫ್ರಾಂಚೈಸಿ ಕೊಹ್ಲಿಯ ಪ್ರತಿಭೆಗಾಗಿ ಅಷ್ಟೆಲ್ಲ ಹೂಡಿಕೆ ಮಾಡಿತು. ಆತನ ಮೇಲೆ ಬಹಳ ನಂಬಿಕೆ ಇಟ್ಟಿತು. ಯಾಕೆಂದರೆ ನೀವು ಆರ್ಸಿಬಿಯಲ್ಲಿ ಕೊಹ್ಲಿ ಪಯಣ ನೋಡಿದರೆ ಅವರ ಕೊಹ್ಲಿಯ ಭಾವನೆಗಳು ಯಾಕೆಂದು ಅರ್ಥವಾಗುತ್ತದೆ," ಎಂದಿದ್ದಾರೆ.
ಕೆಕೆಆರ್ ವಿರುದ್ಧ ಆರ್ಸಿಬಿಗೆ ಹೀನಾಯ ಸೋಲು
ಸೆಪ್ಟೆಂಬರ್ 16ರ ಗುರುವಾರ ಕೊಹ್ಲಿ, ತಾನು ಟಿ20 ವಿಶ್ವಕಪ್ ಬಳಿಕ ಟಿ20 ನಾಯಕತ್ವದಿಂದ ಕೆಳಗಿಳಿಯುವುದಾಗಿ ನಿರ್ಧಾರ ಪ್ರಕಟಿಸಿದ್ದರು. ಅಕ್ಟೋಬರ್-ನವೆಂಬರ್ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಓಮನ್ನಲ್ಲಿ ಅಕ್ಟೋಬರ್ 17ರಿಂದ ನವೆಂಬರ್ 14ರ ವರೆಗೆ ನಡೆಯಲಿರುವ ಟಿ20 ವಿಶ್ವಕಪ್ ಬಳಿಕ ಕೊಹ್ಲಿ ಭಾರತದ ಟಿ20 ನಾಯಕತ್ವ ಬಿಟ್ಟು ಕೊಡಲಿದ್ದಾರೆ. ಸೆಪ್ಟೆಂಬರ್ 20ರಂದು ಕೊಹ್ಲಿ ಆರ್ಸಿಬಿ ನಾಯಕತ್ವದಿಂದಲೂ ಕೆಳಗಿಳಿಯುವುದಾಗಿ ಹೇಳಿಕೊಂಡಿದ್ದರು. ಆರ್ಸಿಬಿ ನಾಯಕನಾಗಿ ಇದು ನನ್ನದು ಕೊನೇ ಸೀಸನ್ ಎಂದು ಕೊಹ್ಲಿ ತಿಳಿಸಿದ್ದರು. ಆರ್ಸಿಬಿ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದಾಗಲೇ ಕೊಹ್ಲಿ ಈ ನಿರ್ಧಾರ ಪ್ರಕಟಿಸಿ ಆಘಾತ ನೀಡಿದ್ದರು. ಪಂದ್ಯದಲ್ಲಿ ಆರ್ಸಿಬಿ 9 ವಿಕೆಟ್ಗಳ ಹೀನಾಯ ಸೋಲನುಭವಿಸಿತ್ತು.