
ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ನ ನಾಯಕ ಶ್ರೇಯಸ್ ಐಯ್ಯರ್ ಅವರ ಭುಜದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಸ್ವತಃ ಶ್ರೇಯಸ್ ಐಯ್ಯರ್ ಟ್ವಿಟರ್ನಲ್ಲಿ ಫೋಟೋ ಹಾಕಿ ಇದನ್ನು ತಿಳಿಸಿದ್ದಾರೆ. 26ರ ಹರೆಯದ ಐಯ್ಯರ್ ಭಾರತ-ಇಂಗ್ಲೆಂಡ್ ಏಕದಿನ ಸರಣಿ ವೇಳೆ ಗಾಯ ಮಾಡಿಕೊಂಡು ತಂಡದಿಂದ ಹೊರ ಬಿದ್ದಿದ್ದರು.
ಟ್ವೀಟ್ ಮಾಡಿರುವ ಶ್ರೇಯಸ್ ಐಯ್ಯರ್, ಶಸ್ತ್ರ ಚಿಕಿತ್ಸೆ ನೆರವೇರಿದ ಬಳಿಕ ಆಸ್ಪತ್ರೆಯಲ್ಲಿ ವಿಶ್ರಮಿಸುತ್ತಿರುವಾಗಿನ ಫೋಟೋ ಹಾಕಿಕೊಂಡಿದ್ದಾರೆ. 'ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಸಿಂಹದ ದೃಢ ನಿರ್ಣಯದೊಂದಿಗೆ ಶೀಘ್ರ ತಂಡಕ್ಕೆ ವಾಪಸ್ಸಾಗಲಿದ್ದೇನೆ. ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು' ಎಂದು ಐಯ್ಯರ್ ಬರೆದುಕೊಂಡಿದ್ದಾರೆ.
ಪುಣೆಯಲ್ಲಿ ಮಾರ್ಚ್ 23ರಂದು ನಡೆದಿದ್ದ ಭಾರತ-ಇಂಗ್ಲೆಂಡ್ ಮೊದಲನೇ ಏಕದಿನ ಪಂದ್ಯದ ವೇಳೆ ಐಯ್ಯರ್ ಗಾಯಕ್ಕೀಡಾಗಿದ್ದರು. ಶಾರ್ದೂಲ್ ಠಾಕೂರ್ ಓವರ್ನಲ್ಲಿ ಜಾನಿ ಬೇರ್ಸ್ಟೋವ್ ಹೊಡೆತದ ವೇಳೆ ಚೆಂಡನ್ನು ತೆಡೆಯುವ ಯತ್ನದಲ್ಲಿ ಐಯ್ಯರ್ ಭುಜಕ್ಕೆ ಗಾಯವಾಗಿತ್ತು. ಆದ್ದರಿಂದ ಭಾರತ ತಂಡದಿಂದ ಶ್ರೇಯಸ್ ಹೊರ ಬಿದ್ದಿದ್ದರು.
2021ರ ಐಪಿಎಲ್ ಸೀಸನ್ನಿಂದಲೂ ಐಯ್ಯರ್ ಹೊರಬಿದ್ದಿದ್ದಾರೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವದ ಜವಾಬ್ದಾರಿ ಯುವ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಹೊತ್ತುಕೊಂಡಿದ್ದಾರೆ. ಏಪ್ರಿಲ್ 9ಕ್ಕೆ ಐಪಿಎಲ್ ಆರಂಭಗೊಳ್ಳಲಿದೆ. ಏಪ್ರಿಲ್ 10ಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮಧ್ಯೆ ಪಂದ್ಯ ನಡೆಯಲಿದೆ.