
ಐಪಿಎಲ್ 14ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದ್ದು ಎಲ್ಲಾ ತಂಡಗಳ ಸದಸ್ಯರು ಕೂಡ ತಂಡದ ಕ್ಯಾಂಪ್ ಸೇರಿಕೊಳ್ಳಲು ಆಗಮಿಸುತ್ತಿದ್ದಾರೆ. ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಖಾಯಂ ನಾಯಕನ ಸೇವೆಯಿಂದ ವಂಚಿತವಾಗಿದ್ದು ಹೊಸ ನಾಯಕನನ್ನು ಮಂಗಳವಾರವೇ ಘೋಷಿಸುವ ಸಾಧ್ಯತೆಯಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಈಗಾಗಲೇ ಆಗಮಿಸಿದ್ದು ನಾಯಕನ ಸ್ಥಾನಕ್ಕೆ ಹೆಸರು ಕೇಳಿ ಬರುತ್ತಿರುವ ರಿಷಭ್ ಪಂತ್, ಆರ್ ಅಶ್ವಿನ್ ಸಹಿತ ಪ್ರಮುಖ ಆಟಗಾರರೆಲ್ಲರೂ ಶಿಬಿರ ತಲುಪಿದ್ದಾರೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಂದೇ(ಮಂಗಳವಾರ) ಚರ್ಚಿಸಿ ನಾಯಕನ ಹೆಸರು ಘೋಷಿಸುವ ಸಾಧ್ಯತೆಯಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿಯ ಐಪಿಎಲ್ ಆವೃತ್ತಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಏಪ್ರಿಲ್ 10ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕಣಕ್ಕಿಳಿಯುವ ಮೂಲಕ ಆರಂಭಿಸಲಿದೆ. ಆದರೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದ ಶ್ರೇಯಸ್ ಐಯ್ಯರ್ ಸ್ಥಾನಕ್ಕೆ ನಾಯಕನ್ನು ಇನ್ನಷ್ಟೇ ಘೋಷಿಸಬೇಕಿದೆ.
ಈಗ ದೊರೆತಿರುವ ಮಾಹಿತಿಯ ಪ್ರಕಾರ ಡೆಲ್ಲಿ ಫ್ರಾಂಚೈಸಿಯ ಸಹಮಾಲೀಕರಾದ ಕಿರಣ್ ಕುಮಾರ್ ಗಾಂಧಿ, ಪಾರ್ಥ್ ಜಿಂದಾಲ್ ಅವರು ರಿಕಿ ಪಾಂಟಿಂಗ್ ಜೊತೆಗೆ ಚರ್ಚಿಸಿ ಅಂತಿಮ ನಿರ್ಧಾರವನ್ನು ತೆಗದುಕೊಳ್ಳಲಿದ್ದಾರೆ. ಈಗಾಗಲೇ ವರದಿಯಾಗಿರುವಂತೆ ನಾಯಕ ಸ್ಥಾನಕ್ಕೆ ರಿಷಭ್ ಪಂತ್ ಹೆಸರು ಜೋರಾಗಿ ಕೇಳಿ ಬರುತ್ತಿದೆ.
ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಸಾಕಷ್ಟು ಅನುಭವಿ ಆಟಗಾರರ ಹೆಸರು ಕೂಡ ನಾಯಕತ್ವಕ್ಕೆ ಪರಿಗಣನೆಯಾದರೆ ಅಚ್ಚರಿಯಿಲ್ಲ. ಐಪಿಎಲ್ನಲ್ಲಿ ತಂಡವನ್ನು ಮುನ್ನಡೆಸಿದ ಅನಯಭವ ಹೊಂದಿರುವ ಅಜಿಂಕ್ಯ ರಹಾನೆ, ಆರ್ ಅಶ್ವಿನ್ ಜೊತೆಗೆ ಈ ಬಾರಿ ಸ್ಟೀವ್ ಸ್ಮಿತ್ ಕೂಡ ಡೆಲ್ಲಿ ನಾಯಕತ್ವಕ್ಕೆ ಪೈಪೋಟಿ ನೀಡಲಿದ್ದಾರೆ.