
ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಪ್ರಮುಖ ಆಟಗಾರ ದೇವದತ್ ಪಡಿಕ್ಕಲ್ ಆರ್ಸಿಬಿ ಕ್ಯಾಂಪ್ ಸೇರಿಕೊಂಡಿದ್ದಾರೆ. ಕೋವಿಡ್-19ಗೆ ತುತ್ತಾಗಿದ್ದ ದೇವದತ್ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಅವರ ಕೊರೊನಾ ವರದಿ ನೆಗೆಟಿವ್ ಬಂದಿರುವುದರಿಂದ ಸದ್ಯ ಅಭ್ಯಾಸ ಆರಂಭಿಸಿದ್ದಾರೆ. ಮುಂಬೈ ವಿರುದ್ಧದ ಆರಂಭಿಕ ಪಂದ್ಯದಿಂದಲೇ ಪಡಿಕ್ಕಲ್ ಲಭ್ಯರಿರಲಿದ್ದಾರೆ ಎಂದು ಆರ್ಸಿಬಿ ಹೆಡ್ ಕೋಚ್ ಸೈಮನ್ ಕಟಿಚ್ ಹೇಳಿದ್ದಾರೆ.
ಕೊರೊನಾವೈರಸ್ನಿಂದ ಸಂಪೂರ್ಣ ಚೇತರಿಸಿಕೊಂಡು ಆರ್ಸಿಬಿ ಕ್ಯಾಂಪ್ ಸೇರಿಕೊಂಡಿರುವುದಾಗಿ ಸ್ವತಃ ದೇವದತ್ ಪಡಿಕ್ಕಲ್ ಹೇಳಿಕೊಂಡಿದ್ದರು. ಆರ್ಸಿಬಿ ಒಂದು ವಿಡಿಯೋ ಟ್ವೀಟ್ ಹಾಕಿಕೊಂಡಿದ್ದು, ಈ ವಿಡಿಯೋದಲ್ಲಿ ಪಡಿಕ್ಕಲ್ ಮಾತನಾಡಿದ್ದರು. ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ, ಆಪದ್ಭಾಂಧವ ಎಬಿ ಡಿ ವಿಲಿಯರ್ಸ್, ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಕೂಡ ಕ್ವಾರಂಟೈನ್ ಮುಗಿಸಿ ಕ್ಯಾಂಪ್ ಸೇರಿಕೊಂಡಿದ್ದಾರೆ.
ವಿಡಿಯೋದಲ್ಲಿ ಪಡಿಕ್ಕಲ್, 'ಗುಣಮುಖನಾಗಲು ಹಾರೈಸಿದ, ಆಶೀರ್ವದಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು. ನಿಮ್ಮ ಹಾರೈಕೆ ನನಗೆ ತುಂಬಾ ಅಗತ್ಯವಿತ್ತು. ನಿಮಗೆ ಗೊತ್ತಿರುವಂತೆ ಎರಡು ವಾರಗಳ ಹಿಂದೆ ನನಗೆ ಕೋವಿಡ್-19 ಪಾಸಿಟಿವ್ ಬಂದಿತ್ತು. ಆ ಬಳಿಕ ಬಿಸಿಸಿಐ ಸೂಚನೆಯಂತೆ ಎರಡು ವಾರಗಳ ಕ್ವಾರಂಟೈನ್ ಪಾಲಿಸಿದೆ. ಈಗ ನನ್ನ ಕೋವಿಡ್ ಫಲಿತಾಂಶ ನೆಗೆಟಿವ್ ಬಂದಿದೆ. ನಾನೀಗ ಆರ್ಸಿಬಿ ಕ್ಯಾಂಪ್ ಸೇರಿಕೊಂಡಿದ್ದೇನೆ,' ಎಂದಿದ್ದರು.
ವಿಜಯ್ ಹಜಾರೆ ಟ್ರೋಫಿಯಲ್ಲಿ ದೇವದತ್ ಪಡಿಕ್ಕಲ್ ದಾಖಲೆಯ ಸ್ಥಿರ ಆಟ ಪ್ರದರ್ಶಿಸಿ ಗಮನ ಸೆಳೆದಿದ್ದರು. ಆರ್ಸಿಬಿಯಲ್ಲೂ ಪಡಿಕ್ಕಲ್ ಈ ಬಾರಿ ಅದೇ ಬ್ಯಾಟಿಂಗ್ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಏಪ್ರಿಲ್ 9ರ ಶುಕ್ರವಾರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿವೆ.