
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಗೆ ಕೊರೊನಾ ಭೀತಿ ಎದುರಾಗಿದೆ. ಪ್ರಮುಖ ತಂಡಗಳ ಪ್ರತಿಭಾನ್ವಿತ ಆಟಗಾರರಿಗೆ ಕೋವಿಡ್-19 ಸೋಂಕು ತಗುಲಿರುವುದು ವರದಿಯಾಗಿದೆ. ಇತ್ತೀಚೆಗಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ಗೂ ಕೊರೊನಾ ಪಾಸಿಟಿವ್ ಬಂದಿತ್ತು.
ಏಪ್ರಿಲ್ 3ರ ಭಾನುವಾರ ದೇವದತ್ ಪಡಿಕ್ಕಲ್ಗೆ ಕೊರೊನಾವೈರಸ್ ಪಾಸಿಟಿವ್ ಬಂದಿರುವುದಾಗಿ ವರದಿಯಾಗಿತ್ತು. ಅಸಲಿಗೆ ಪಡಿಕ್ಕಲ್ಗೆ ಮಾರ್ಚ್ 22ರಂದೇ ಸೋಂಕು ತಗುಲಿದ್ದಾಗಿ ತಿಳಿದು ಬಂದಿದೆ. ಆರ್ಸಿಬಿ ಫ್ರಾಂಚೈಸಿ ಇದನ್ನು ತಿಳಿಸಿದೆ. ಅಲ್ಲದೆ ಪಡಿಕ್ಕಲ್ ಶೀಘ್ರ ತಂಡ ಸೇರಿಕೊಳ್ಳಲಿರುವ ಮುನ್ಸೂಚನೆ ನೀಡಿದೆ.
ಎಎನ್ಐ ಜೊತೆ ಮಾತನಾಡಿದ ಆರ್ಸಿಬಿ, 'ಮಾರ್ಚ್ 22ರಂದು ಕೋವಿಡ್-19 ಪಾಸಿಟಿವ್ ಬಂದಿರುವ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಅವರ ಆರ್ಟಿ-ಪಿಸಿಆರ್ ಪರೀಕ್ಷೆ ನೆಗೆಟಿವ್ ಬಂದರೆ ಅವರು ಆರ್ಸಿಬಿ ಬಯೋಬಬಲ್ ಸೇರಿಕೊಳ್ಳಲು ಫಿಟ್ ಆಗಲಿದ್ದಾರೆ. ಅವರು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಮುಂಬರಲಿರುವ ಐಪಿಎಲ್ಗಾಗಿ ಆರ್ಸಿಬಿ ತಂಡದಲ್ಲಿ ಶೀಘ್ರ ಕಾಣಿಸಿಕೊಳ್ಳಲಿದ್ದಾರೆ,' ಎಂದು ಮಾಹಿತಿ ನೀಡಿದೆ.
20ರ ಹರೆಯದ ದೇವದತ್ ಪಡಿಕ್ಕಲ್ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ತಂಡದ ಪರ ಭರ್ಜರಿ ಬ್ಯಾಟಿಂಗ್ ಮಾಡಿ ಗಮನ ಸೆಳೆದಿದ್ದರು. ಸತತ 4-5 ಪಂದ್ಯಗಳಲ್ಲಿ 50+ ರನ್ ಬಾರಿಸಿ ದಾಖಲೆ ನಿರ್ಮಿಸಿದ್ದರು. ಏಪ್ರಿಲ್ 9ರಂದು 2021ರ ಐಪಿಎಲ್ ಆರಂಭಗೊಳ್ಳಲಿದ್ದು ಈ ದಿನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳಿಗೆ ಪಂದ್ಯ ನಡೆಯಲಿದೆ.