ಆತ ಕೆಟ್ಟ ಪ್ರದರ್ಶನ ನೀಡುತ್ತಿದ್ದಾನೆ ಎಂದು ಗೊತ್ತಿದ್ದರೂ ಧೋನಿ ಬೇರೆಯವರಿಗೆ ಅವಕಾಶ ನೀಡಲ್ಲ: ಸೆಹ್ವಾಗ್

ಸದ್ಯ ಯುಎಇಯಲ್ಲಿ ಮುಂದುವರಿಯುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಧಿಕೃತವಾಗಿ ಪ್ಲೇ ಆಫ್ ಪ್ರವೇಶಿಸಿದ ಮೊಟ್ಟ ಮೊದಲ ತಂಡ ಎನಿಸಿಕೊಂಡಿದೆ. ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡುವುದರ ಮೂಲಕ ಇನ್ನೂ ತಮ್ಮಪಾಲಿನ 3 ಲೀಗ್ ಪಂದ್ಯಗಳು ಬಾಕಿ ಇರುವಾಗಲೇ ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಟ್ಟು ದೊಡ್ಡ ಮಟ್ಟದಲ್ಲಿ ಕಮ್ ಬ್ಯಾಕ್ ಮಾಡಿದೆ.
ಹೌದು, ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇದುವರೆಗೂ 11 ಪಂದ್ಯಗಳನ್ನಾಡಿದ್ದು 9 ಪಂದ್ಯಗಳಲ್ಲಿ ಜಯಗಳಿಸಿ, ಕೇವಲ 2 ಪಂದ್ಯಗಳಲ್ಲಿ ಮಾತ್ರ ಸೋತು, 18 ಅಂಕಗಳನ್ನು ಗಿಟ್ಟಿಸಿಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡು ತನ್ನ ಪಾರುಪತ್ಯವನ್ನು ಮುಂದುವರಿಸಿದೆ. ಸೆಪ್ಟೆಂಬರ್ 30ರ ಗುರುವಾರದಂದು ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಶಾರ್ಜಾ ಕ್ರೀಡಾಂಗಣದಲ್ಲಿ ನಡೆದ ತನ್ನ 11ನೇ ಪಂದ್ಯದಲ್ಲಿ 6 ವಿಕೆಟ್ಗಳ ಗೆಲುವನ್ನು ದಾಖಲಿಸುವುದರ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇ ಆಫ್ ಸುತ್ತಿಗೆ ಲಗ್ಗೆ ಇಟ್ಟಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವೇನೋ ಸಾಲು ಸಾಲು ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಸುತ್ತಿಗೆ ಪ್ರವೇಶವನ್ನು ಪಡೆದಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರನಾದ ಸುರೇಶ್ ರೈನಾ ಮಾತ್ರ ಟೂರ್ನಿಯಲ್ಲಿ ಅಕ್ಷರಶಃ ಮಂಕಾಗಿದ್ದು ಸಾಲುಸಾಲು ಕಳಪೆ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿ ಆರಂಭವಾದಾಗ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಚೊಚ್ಚಲ ಪಂದ್ಯದಲ್ಲಿ ಸುರೇಶ್ ರೈನಾ ಅರ್ಧ ಶತಕವನ್ನು ಸಿಡಿಸಿದ್ದು ಬಿಟ್ಟರೆ ಬೇರೆ ಯಾವುದೇ ಪಂದ್ಯದಲ್ಲಿಯೂ ಸಹ ಗಮನಾರ್ಹ ಪ್ರದರ್ಶನವನ್ನು ನೀಡಿಲ್ಲ. ಈ ಕುರಿತಾಗಿ ಇದೀಗ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮಾತನಾಡಿದ್ದು ಈ ಕೆಳಕಂಡಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

'ರೈನಾ ಫಾರ್ಮ್ನಲ್ಲಿಲ್ಲ ಎಂಬ ವಿಷಯ ಧೋನಿಗೂ ಗೊತ್ತು, ಆದರೂ ಬೇರೆಯವರನ್ನು ತೆಗೆದುಕೊಳ್ಳುವ ಕೆಲಸಕ್ಕೆ ಕೈಹಾಕುವುದಿಲ್ಲ'
ಹೀಗೆ ಸುರೇಶ್ ರೈನಾ ಸಾಲುಸಾಲು ಕಳಪೆ ಪ್ರದರ್ಶನ ನೀಡುತ್ತಿರುವುದರ ಕುರಿತಾಗಿ ಮಾತನಾಡಿರುವ ವಿರೇಂದ್ರ ಸೆಹ್ವಾಗ್ 'ಸುರೇಶ್ ರೈನಾ ಸಾಲುಸಾಲು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ ಎಂಬ ವಿಷಯ ಧೋನಿಗೆ ಗೊತ್ತಿದ್ದರೂ ಆತನನ್ನು ತಂಡದಿಂದ ಕೈಬಿಟ್ಟು ಬೇರೆ ಆಟಗಾರರಿಗೆ ಅವಕಾಶ ನೀಡುವ ಕೆಲಸಕ್ಕೆ ಧೋನಿ ಕೈ ಹಾಕುವುದಿಲ್ಲ' ಎಂದು ಹೇಳಿಕೆ ನೀಡಿದ್ದಾರೆ.

ಪ್ಲೇ ಆಫ್ ಸಲುವಾಗಿ ಸುರೇಶ್ ರೈನಾಗೆ ಸಾಲುಸಾಲು ಅವಕಾಶ
ಸಾಲು ಸಾಲು ಕಳಪೆ ಪ್ರದರ್ಶನ ನೀಡುತ್ತಿರುವ ಸುರೇಶ್ ರೈನಾರನ್ನು ತಂಡದಿಂದ ಧೋನಿ ಕೈಬಿಟ್ಟು ಬೇರೆ ಆಟಗಾರರಿಗೆ ಅವಕಾಶವನ್ನು ನೀಡುವುದಿಲ್ಲ ಎಂದಿರುವ ವಿರೇಂದ್ರ ಸೆಹ್ವಾಗ್ ಧೋನಿ ಈ ರೀತಿ ಮಾಡುತ್ತಿರುವುದಕ್ಕೆ ಕಾರಣವನ್ನು ಕೂಡ ತಿಳಿಸಿದ್ದಾರೆ. 'ಎಂಎಸ್ ಧೋನಿ ತನಗಿಂತ ಮೊದಲು ಸುರೇಶ್ ರೈನಾರನ್ನು ಕಣಕ್ಕಿಳಿಸುತ್ತಿದ್ದಾರೆ ಎಂಬ ವಿಷಯವನ್ನು ಈ ಹಿಂದೆಯೇ ಹೇಳಿದ್ದೆ. ಆದರೂ ಸಹ ಸುರೇಶ್ ರೈನಾ ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಧೋನಿ ಸುರೇಶ್ ರೈನಾ ಮೇಲಿನ ಕಾಳಜಿಯಿಂದ ಈ ಕೆಲಸವನ್ನು ಮಾಡುತ್ತಿಲ್ಲ, ಬದಲಾಗಿ ಸುರೇಶ್ ರೈನಾ ಪ್ಲೇ ಆಫ್ ಹಂತದಲ್ಲಿ ತಂಡದ ಪರ ಉತ್ತಮ ಆಟವನ್ನು ಆಡಬಲ್ಲ ಆಟಗಾರ ಎಂಬುದನ್ನು ಅರಿತು ಧೋನಿ ಪದೇಪದೆ ಸುರೇಶ್ ರೈನಾಗೆ ಆಡುವ ಅವಕಾಶಗಳನ್ನು ನೀಡುತ್ತಿದ್ದಾರೆ' ಎಂದು ವಿರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ.

ಟೂರ್ನಿಯಲ್ಲಿ ಸುರೇಶ್ ರೈನಾ ನೀರಸ ಪ್ರದರ್ಶನ
ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸುರೇಶ್ ರೈನಾ 11 ಪಂದ್ಯಗಳನ್ನಾಡಿದ್ದು 127.64 ಸ್ಟ್ರೈಕ್ ರೇಟ್ನೊಂದಿಗೆ ಕೇವಲ 157 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೊದಲನೇ ಪಂದ್ಯದಲ್ಲಿ 36 ಎಸೆತಗಳಿಗೆ ಸುರೇಶ್ ರೈನಾ 54 ರನ್ ಬಾರಿಸಿದ್ದು ಬಿಟ್ಟರೆ ಉಳಿದ ಯಾವುದೇ ಪಂದ್ಯಗಳಲ್ಲಿಯೂ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಲೇ ಇಲ್ಲ. ಸುರೇಶ್ ರೈನಾ ಅರ್ಧ ಶತಕವನ್ನು ಬಾರಿಸಿದ ಪಂದ್ಯವನ್ನು ಬಿಟ್ಟರೆ ಉಳಿದ 10 ಪಂದ್ಯಗಳಲ್ಲಿ ಗಳಿಸಿರುವುದು ಕೇವಲ 101 ರನ್ ಮಾತ್ರ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications