ಬ್ಯಾಟಿಂಗ್ ನಿರಾಕರಿಸಿದರು ಮ್ಯಾಕ್ಸ್ವೆಲ್!; ಲಾಸ್ಟ್ ಬಾಲ್ ಸಿಕ್ಸ್ಗೂ ಮುನ್ನ ನಡೆದ ಘಟನೆ ಬಿಚ್ಚಿಟ್ಟ ಭರತ್

ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಅಕ್ಟೋಬರ್ 8ರ ಶುಕ್ರವಾರಕ್ಕೆ ಸಂಪೂರ್ಣವಾಗಿ ಮುಕ್ತಾಯಗೊಂಡಿವೆ. ಈ ಮೂಲಕ ಪ್ಲೇ ಆಫ್ ಪ್ರವೇಶಿಸಿರುವ ನಾಲ್ಕನೇ ತಂಡ ಯಾವುದು ಎಂಬ ಸ್ಪಷ್ಟ ಚಿತ್ರಣವೂ ಕೂಡ ಸಿಕ್ಕಿದೆ. ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಜತೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಪ್ಲೇ ಆಫ್ ಸುತ್ತಿಗೆ ಲಗ್ಗೆ ಇಟ್ಟಿದೆ.
ಅಕ್ಟೋಬರ್ 8ರ ಶುಕ್ರವಾರದಂದು ಏಕಕಾಲಕ್ಕೆ ನಡೆದ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯದ ನಂತರ ಈ ಸ್ಪಷ್ಟ ಚಿತ್ರಣ ಸಿಕ್ಕಿದೆ. ಒಂದೆಡೆ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ಜಯ ಸಾಧಿಸಿದರೂ ಕೂಡ ನೆಟ್ ರನ್ ರೇಟ್ ಕೊರತೆಯಿಂದ ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾಯಿತು. ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂತಿಮ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಷ್ಟೇ ಪಂದ್ಯಗಳನ್ನು ಗೆದ್ದರೂ ಕೂಡ ನೆಟ್ ರನ್ ರೇಟ್ ಕೊರತೆಯಿಂದ ದ್ವಿತೀಯ ಸ್ಥಾನವನ್ನು ಕೈ ತಪ್ಪಿಸಿಕೊಂಡಿದೆ.
ಆದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂತಿಮ ಓವರ್ನಲ್ಲಿ ಸಾಧಿಸಿದ ಗೆಲುವು ಮಾತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಲ್ಲಿ ಅನೇಕ ವರ್ಷಗಳ ಕಾಲ ಉಳಿದು ಬಿಡುವಂತಹ ಪಂದ್ಯವಾಗಿದೆ. ಇದಕ್ಕೆ ಕಾರಣ ಯುವ ಆಟಗಾರ ಕೆ ಎಸ್ ಭರತ್ ಅಂತಿಮ ಎಸೆತದಲ್ಲಿ ಗೆಲ್ಲಲು 5 ರನ್ ಬೇಕಾಗಿದ್ದಾಗ ಸಿಕ್ಸರ್ ಬಾರಿಸಿದ್ದು. ಹೌದು ಡೆಲ್ಲಿ ಕ್ಯಾಪಿಟಲ್ಸ್ ತಂಡ ನೀಡಿದ್ದ 165 ರನ್ಗಳ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಶ್ರೀಕರ್ ಭರತ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅವರ ಅಮೋಘ ಪ್ರದರ್ಶನದಿಂದ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ ರೋಚಕ ಜಯ ಸಾಧಿಸಿತು. ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಕೆಎಸ್ ಭರತ್ ಪಂದ್ಯದಲ್ಲಿ 52 ಎಸೆತಗಳಿಗೆ ಅಜೇಯ 78 ರನ್ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಹೀಗೆ ತಾವು ಬಾರಿಸಿದ ವಿಶೇಷ ಸಿಕ್ಸರ್ ಕುರಿತು ಕೆಎಸ್ ಭರತ್ ಪಂದ್ಯದ ನಂತರ ಮಾತನಾಡಿದ್ದು ಆ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಮತ್ತು ಮ್ಯಾಕ್ಸ್ವೆಲ್ ನಡುವೆ ನಡೆದ ಸಂಭಾಷಣೆಯನ್ನು ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ..

ಅಂತಿಮವಾಗಿ 3 ಎಸೆತಗಳು ಬಾಕಿ ಇದ್ದಾಗ ರನ್ ಓಡಬೇಕಾ ಎಂದು ಮ್ಯಾಕ್ಸ್ವೆಲ್ ಬಳಿ ಕೇಳಿದ್ದ ಭರತ್
ಅಂತಿಮ ಎಸೆತದಲ್ಲಿ ಸಿಕ್ಸರ್ ಬಾರಿಸಿ ಜಯ ತಂದುಕೊಟ್ಟ ಕೆಎಸ್ ಭರತ್ ಆವೇಶ್ ಖಾನ್ ಎಸೆದ ಕೊನೆಯ ಓವರ್ನಲ್ಲಿ 3 ಎಸೆತಗಳಿಗೆ 8 ರನ್ಗಳನ್ನು ಬಾರಿಸಬೇಕಾದ ಅಗತ್ಯವಿತ್ತು. ಮೊದಲ 3 ಬಾಲ್ ಆಡಿದ್ದ ಮ್ಯಾಕ್ಸ್ವೆಲ್ ಆ ಓವರ್ನ ಮೂರನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡಿದ್ದರು. ಈ ಸಂದರ್ಭದಲ್ಲಿ ಮ್ಯಾಕ್ಸ್ವೆಲ್ ಜೊತೆ ನಡೆದ ಸಂಭಾಷಣೆಯನ್ನು ಕೆಎಸ್ ಭರತ್ ಬಿಚ್ಚಿಟ್ಟಿದ್ದಾರೆ. 'ಅಂತಿಮ 3 ಎಸೆತಗಳಿದ್ದಾಗ ರನ್ ಓಡಿ ನಿಮಗೆ ಸ್ಟ್ರೈಕ್ ನೀಡಬೇಕಾ ಎಂದು ಮ್ಯಾಕ್ಸ್ವೆಲ್ ಬಳಿ ಕೇಳಿದೆ. ಆದರೆ ಇದಕ್ಕೆ ಪ್ರತ್ಯುತ್ತರವಾಗಿ ಮ್ಯಾಕ್ಸ್ವೆಲ್ ಬೇಡ ಎಂದು ರನ್ ಓಡಲು ನಿರಾಕರಿಸಿದರು, ನೀನು ಮುನ್ನುಗ್ಗು, ನಿನ್ನಿಂದ ಇದು ಸಾಧ್ಯವಾಗುತ್ತದೆ, ಪಂದ್ಯವನ್ನು ಮುಗಿಸು ಎಂದು ಹೇಳಿದರು. ಮ್ಯಾಕ್ಸ್ವೆಲ್ ಅವರ ಈ ಮಾತುಗಳು ನನ್ನಲ್ಲಿನ ವಿಶ್ವಾಸವನ್ನು ಹೆಚ್ಚಿಸಿತು, ಹಾಗೆ ಬಾಲ್ ಮೇಲೆ ಸರಿಯಾದ ಗಮನವನ್ನಿಟ್ಟು ಬ್ಯಾಟ್ ಬೀಸಿದೆ ಹಾಗೂ ಅದಕ್ಕೆ ತಕ್ಕ ಫಲ ಕೂಡ ಸಿಕ್ಕಿತು' ಎಂದು ಕೆಎಸ್ ಭರತ್ ಮ್ಯಾಕ್ಸ್ವೆಲ್ ನೀಡಿದ ಧೈರ್ಯದ ಕುರಿತು ಮಾತನಾಡಿದ್ದಾರೆ.

ಅಂತಿಮ ಓವರ್ನಲ್ಲಿ ಮ್ಯಾಕ್ಸ್ವೆಲ್ ಕೂಡ ಅಬ್ಬರಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ 33 ಎಸೆತಗಳಿಗೆ ಅಜೇಯ 51 ರನ್ ಚಚ್ಚಿದ ಗ್ಲೆನ್ ಮ್ಯಾಕ್ಸ್ವೆಲ್ ಆವೇಶ್ ಖಾನ್ ಎಸೆದ ಅಂತಿಮ ಓವರ್ನ ಮೊದಲ 3 ಎಸೆತಗಳನ್ನು ಎದುರಿಸಿ ಕ್ರಮವಾಗಿ 4, 2 ಮತ್ತು 1 ರನ್ ಬಾರಿಸಿದರು. ಹೀಗೆ ಅಂತಿಮ ಓವರ್ನ 3 ಎಸೆತಗಳಲ್ಲಿ ಒತ್ತಡದ ನಡುವೆಯೂ ಮ್ಯಾಕ್ಸ್ವೆಲ್ 7 ರನ್ ಬಾರಿಸಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ರೋಚಕ ಜಯ ಸಾಧಿಸಲು ಪ್ರಮುಖ ಕಾರಣವಾಯಿತು.

ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತ್ತಾ ಜೊತೆ ರಾಯಲ್ ಚಾಲೆಂಜರ್ಸ್ ಸೆಣಸಾಟ
ಹೀಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲುವುದರ ಮೂಲಕ ಹುಮ್ಮಸ್ಸಿನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಸುತ್ತಿನ ಎಲಿಮಿನೇಟರ್ ಪಂದ್ಯದಲ್ಲಿ ಅಕ್ಟೋಬರ್ 11ರ ಸೋಮವಾರದಂದು ಸಂಜೆ 7.30ಕ್ಕೆ ಶಾರ್ಜಾ ಕ್ರೀಡಾಂಗಣದಲ್ಲಿ ಸೆಣಸಾಡಲಿದೆ. ಈ ಪಂದ್ಯದಲ್ಲಿ ಜಯ ಗಳಿಸಿದರೆ ಕ್ವಾಲಿಫೈಯರ್ 1ರಲ್ಲಿ ಸೋತ ತಂಡದ ಜೊತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೆಣಸಾಡಲಿದೆ ಅಥವಾ ಎಲಿಮಿನೇಟರ್ ಪಂದ್ಯದಲ್ಲಿ ಸೋತರೆ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications