ತಂಡದಲ್ಲಿದೆ ಪರಸ್ಪರ ಸಂಪರ್ಕದ ಸಮಸ್ಯೆ
ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಆರಂಭವಾಗಿ ಕೊರೋನಾವೈರಸ್ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇದೇ ಸೆಪ್ಟೆಂಬರ್ 19ರಿಂದ ಪುನಾರಂಭವಾಗುತ್ತಿದ್ದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಕುಲ್ ದೀಪ್ ಯಾದವ್ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರರಲ್ಲಿ ಸರಿಯಾದ ಸಂಪರ್ಕವಿಲ್ಲ ಎಂದು ತಂಡದೊಳಗಿನ ಸಮಸ್ಯೆಯನ್ನು ಬಿಚ್ಚಿಟ್ಟಿದ್ದಾರೆ. ತಂಡಕ್ಕೆ ಆಯ್ಕೆಯಾದ ನಂತರ ಇದುವರೆಗೂ ಕೂಡ ಯಾವುದೇ ಪಂದ್ಯಕ್ಕೂ ಮುನ್ನ ಅಥವಾ ಪಂದ್ಯದ ನಂತರ ತಂಡದ ನಾಯಕ ಇಯಾನ್ ಮಾರ್ಗನ್ ತನ್ನ ಬಳಿ ಯಾವುದೇ ಚರ್ಚೆಯನ್ನೂ ನಡೆಸಿಲ್ಲ ಎಂದು ಕುಲ್ ದೀಪ್ ಯಾದವ್ ಹೇಳಿಕೊಂಡಿದ್ದಾರೆ. ಆಟಗಾರ ಮತ್ತು ನಾಯಕನ ನಡುವೆ ಯಾವುದೇ ಅಂತರವಿರಬಾರದು ಹಾಗೂ ತಂಡದಲ್ಲಿ ಯಾವುದೇ ಬದಲಾವಣೆಯಾದರೂ ಸಹ ತಂಡದ ಆಟಗಾರರ ಜೊತೆ ನಾಯಕ ಚರ್ಚೆಯನ್ನು ನಡೆಸಬೇಕು, ಆದರೆ ಇಯಾನ್ ಮಾರ್ಗನ್ ಇದುವರೆಗೂ ಕೂಡ ಈ ರೀತಿಯ ಯಾವುದೇ ಚರ್ಚೆಗಳನ್ನು ಇತರ ಆಟಗಾರರ ಜೊತೆ ನಡೆಸಿಯೇ ಇಲ್ಲ ಎಂದು ಕುಲ್ ದೀಪ್ ಯಾದವ್ ಆರೋಪ ಮಾಡಿದ್ದಾರೆ.
ತಂಡದಿಂದ ಯಾಕೆ ಹೊರ ಹಾಕುತ್ತಾರೆ ಎನ್ನುವುದೇ ಅರ್ಥವಾಗುವುದಿಲ್ಲ
ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ ನಡೆದಿರುವ ಪಂದ್ಯಗಳಲ್ಲಿ ಸರಿಯಾದ ಅವಕಾಶ ಸಿಗದ ಕುಲದೀಪ್ ಯಾದವ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಕಿಡಿಕಾರಿದ್ದಾರೆ. ಉತ್ತಮ ಪ್ರದರ್ಶನವನ್ನು ನೀಡುವ ಆತ್ಮವಿಶ್ವಾಸವನ್ನು ಹೊಂದಿದ್ದರೂ ಸಹ ಆಡುವ ಅವಕಾಶವನ್ನು ನೀಡದೇ ತಂಡದಿಂದ ಹಲವಾರು ಬಾರಿ ಹೊರಗಿಟ್ಟಿದ್ದಾರೆ, ಆದರೆ ಆಡುವ ಅವಕಾಶವನ್ನು ಯಾಕೆ ನೀಡಲಿಲ್ಲ ಎಂಬ ಕಾರಣವನ್ನು ಮಾತ್ರ ಯಾರೂ ಹೇಳಲು ಮುಂದೆ ಬರುವುದಿಲ್ಲ. ಇದೇ ರೀತಿ ಟೀಮ್ ಇಂಡಿಯಾದಲ್ಲಿ ನಡೆದಿದ್ದರೆ ತಂಡದ ನಾಯಕ ಬಂದು ತನ್ನ ಬದಲು ಬೇರೆ ಆಟಗಾರರಿಗೆ ಅವಕಾಶವನ್ನು ಯಾಕೆ ನೀಡಲಾಯಿತು ಎಂಬುದನ್ನು ತಿಳಿಸುತ್ತಾರೆ, ಇದರಿಂದ ತಂಡದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ. ಆದರೆ ಇಯಾನ್ ಮಾರ್ಗನ್ ಮಾತ್ರ ಅವಕಾಶ ಸಿಗದೇ ಇದ್ದಾಗ ಆ ವಿಷಯದ ಕುರಿತು ಚರ್ಚಿಸುವುದಿರಲಿ ತನ್ನ ಹತ್ತಿರ ಕೂಡ ಸುಳಿಯುವುದಿಲ್ಲ ಎಂದು ಕುಲ್ ದೀಪ್ ಯಾದವ್ ಮಾರ್ಗನ್ ವಿರುದ್ಧ ದನಿ ಎತ್ತಿದ್ದಾರೆ.
ರೋಹಿತ್ ಶರ್ಮಾ ರೀತಿಯ ನಾಯಕ ಇದ್ದರೆ ಈ ರೀತಿಯ ಸಮಸ್ಯೆಗಳಿರುವುದಿಲ್ಲ
ಇನ್ನು ಇಯಾನ್ ಮಾರ್ಗನ್ ನಾಯಕತ್ವದ ವಿರುದ್ಧ ಅಸಮಾಧಾನ ಹೊರಹಾಕಿರುವ ಕುಲ್ ದೀಪ್ ಯಾದವ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ರೀತಿಯ ನಾಯಕ ಎಲ್ಲಾ ತಂಡಗಳಲ್ಲೂ ಇದ್ದರೆ ತಂಡದಲ್ಲಿ ಉತ್ತಮ ಬಾಂಧವ್ಯವಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಯಾನ್ ಮಾರ್ಗನ್ ಓರ್ವ ವಿದೇಶಿ ಆಟಗಾರ ಹೀಗಾಗಿ ತಂಡದಿಂದ ಹೊರಹಾಕಿದಾಗ ನಾವು ಆತನ ಬಳಿ ಹೋಗಿ ಯಾಕೆ ತಂಡದಿಂದ ಕೈ ಬಿಟ್ಟಿದ್ದೀರಾ ಎಂದು ಕೇಳಲು ಆಗುವುದಿಲ್ಲ, ಅದೇ ಜಾಗದಲ್ಲಿ ರೋಹಿತ್ ಶರ್ಮಾ ಇದ್ದರೆ ಯಾವುದೇ ಮುಜುಗರವಿಲ್ಲದೆ ತಂಡದಲ್ಲಿ ಸ್ಥಾನ ನೀಡದೆ ಇರುವುದರ ಕುರಿತು ಮಾತನಾಡಬಹುದು ಎಂದು ಕುಲ್ ದೀಪ್ ಯಾದವ್ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಯಾರಿಗೂ ಸಹ ತನ್ನ ಮೇಲೆ ಮತ್ತು ತನ್ನ ಆಟದ ಮೇಲೆ ನಂಬಿಕೆಯೇ ಇಲ್ಲ ಎಂದು ಕುಲ್ ದೀಪ್ ಯಾದವ್ ಬೇಸರ ವ್ಯಕ್ತಪಡಿಸಿದ್ದಾರೆ.