ರೋಹಿತ್ ಶರ್ಮಾ ನಾಯಕನಾಗಿದ್ರೆ ಇಷ್ಟೆಲ್ಲ ಆಗ್ತಾ ಇರಲಿಲ್ಲ; ಅವಕಾಶ ಸಿಗದ ಕುಲ್ದೀಪ್ ಯಾದವ್ ಆಕ್ರೋಶ

ಒಂದು ತಂಡ ಯಶಸ್ವಿಯಾಗಬೇಕೆಂದರೆ ತಂಡದ ವಿವಿಧ ಆಟಗಾರರು ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಸಾಕಾಗುವುದಿಲ್ಲ, ಬದಲಾಗಿ ಆ ತಂಡದ ನಾಯಕ ತೆಗೆದುಕೊಳ್ಳುವ ನಿರ್ಧಾರಗಳು ಕೂಡ ಹಲವಾರು ಬಾರಿ ಆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಆಟಗಾರರು ತಂಡದ ಒಳಗಡೆ ಯಾವುದೇ ಸಮಸ್ಯೆ ಉಂಟಾದರೂ ಸಹ ಮೊದಲು ಹೋಗಿ ತನ್ನ ಸಮಸ್ಯೆಯನ್ನು ಹಂಚಿಕೊಳ್ಳುವುದು ಆ ತಂಡದ ನಾಯಕನ ಬಳಿ.
ಅಷ್ಟೇ ಅಲ್ಲದೆ ಪಂದ್ಯದ ವೇಳೆ ಯಾವ ಆಟಗಾರನಿಗೆ ಬೌಲಿಂಗ್ ನೀಡಬೇಕು ಮತ್ತು ತಂಡ ಇಕ್ಕಟ್ಟಿನಲ್ಲಿದ್ದಾಗ ಯಾವ ಬ್ಯಾಟ್ಸ್ಮನ್ಗೆ ಬ್ಯಾಟಿಂಗ್ ಮಾಡುವ ಅವಕಾಶವನ್ನು ನೀಡಬೇಕು ಎಂಬ ಸರಿಯಾದ ನಿರ್ಧಾರವನ್ನು ಆ ತಂಡದ ನಾಯಕ ಕೈಗೊಂಡಾಗ ಮಾತ್ರ ಪಂದ್ಯದಲ್ಲಿ ಜಯ ಸಿಗಲಿದೆ ಮತ್ತು ಆ ಅರ್ಹ ಆಟಗಾರರ ಪ್ರತಿಭೆ ಹೊರ ಬರಲಿದೆ.
ಹೀಗೆ ತನ್ನ ತಂಡದ ಆಟಗಾರರಲ್ಲಿ ಯಾರು ಉತ್ತಮರು, ಯಾರು ಪ್ರತಿಭಾವಂತರು ಮತ್ತು ಯಾರಿಗೆ ಅವಕಾಶವನ್ನು ನೀಡಿದರೆ ಪಂದ್ಯ ಗೆಲ್ಲುವಂತಹ ಪ್ರದರ್ಶನವನ್ನು ನೀಡಬಲ್ಲರು ಎಂಬುದನ್ನು ನಾಯಕನಾದವನು ಅರಿತಿದ್ದರೆ ಮಾತ್ರ ಆತ ಕೂಡ ಓರ್ವ ಯಶಸ್ವಿ ನಾಯಕನಾಗಬಲ್ಲ ಇಲ್ಲದೇ ಇದ್ದರೆ ಆ ನಾಯಕನ ಸಹ ಆಟಗಾರರೇ ಆತನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲಾರಂಭಿಸುತ್ತಾರೆ. ಇದಕ್ಕೆ ತಾಜಾ ಉದಾಹರಣೆಯೆಂದರೆ ಕುಲ್ ದೀಪ್ ಯಾದವ್.
ಹೌದು, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು ವಿವಿಧ ತಂಡಗಳ ಆಟಗಾರರು ತಮ್ಮ ತಂಡ ಹಾಗೂ ತಮ್ಮ ನಾಯಕರುಗಳ ಕುರಿತಾಗಿ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು, ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಕುಲದೀಪ್ ಯಾದವ್ ಕೂಡ ತಮ್ಮ ತಂಡ ಹಾಗೂ ತಮ್ಮ ತಂಡದ ನಾಯಕ ಇಯಾನ್ ಮಾರ್ಗನ್ ಕುರಿತಾಗಿ ಈ ಕೆಳಕಂಡಂತೆ ಮಾತನಾಡಿದ್ದಾರೆ.

ತಂಡದಲ್ಲಿದೆ ಪರಸ್ಪರ ಸಂಪರ್ಕದ ಸಮಸ್ಯೆ
ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಆರಂಭವಾಗಿ ಕೊರೋನಾವೈರಸ್ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇದೇ ಸೆಪ್ಟೆಂಬರ್ 19ರಿಂದ ಪುನಾರಂಭವಾಗುತ್ತಿದ್ದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಕುಲ್ ದೀಪ್ ಯಾದವ್ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರರಲ್ಲಿ ಸರಿಯಾದ ಸಂಪರ್ಕವಿಲ್ಲ ಎಂದು ತಂಡದೊಳಗಿನ ಸಮಸ್ಯೆಯನ್ನು ಬಿಚ್ಚಿಟ್ಟಿದ್ದಾರೆ. ತಂಡಕ್ಕೆ ಆಯ್ಕೆಯಾದ ನಂತರ ಇದುವರೆಗೂ ಕೂಡ ಯಾವುದೇ ಪಂದ್ಯಕ್ಕೂ ಮುನ್ನ ಅಥವಾ ಪಂದ್ಯದ ನಂತರ ತಂಡದ ನಾಯಕ ಇಯಾನ್ ಮಾರ್ಗನ್ ತನ್ನ ಬಳಿ ಯಾವುದೇ ಚರ್ಚೆಯನ್ನೂ ನಡೆಸಿಲ್ಲ ಎಂದು ಕುಲ್ ದೀಪ್ ಯಾದವ್ ಹೇಳಿಕೊಂಡಿದ್ದಾರೆ. ಆಟಗಾರ ಮತ್ತು ನಾಯಕನ ನಡುವೆ ಯಾವುದೇ ಅಂತರವಿರಬಾರದು ಹಾಗೂ ತಂಡದಲ್ಲಿ ಯಾವುದೇ ಬದಲಾವಣೆಯಾದರೂ ಸಹ ತಂಡದ ಆಟಗಾರರ ಜೊತೆ ನಾಯಕ ಚರ್ಚೆಯನ್ನು ನಡೆಸಬೇಕು, ಆದರೆ ಇಯಾನ್ ಮಾರ್ಗನ್ ಇದುವರೆಗೂ ಕೂಡ ಈ ರೀತಿಯ ಯಾವುದೇ ಚರ್ಚೆಗಳನ್ನು ಇತರ ಆಟಗಾರರ ಜೊತೆ ನಡೆಸಿಯೇ ಇಲ್ಲ ಎಂದು ಕುಲ್ ದೀಪ್ ಯಾದವ್ ಆರೋಪ ಮಾಡಿದ್ದಾರೆ.

ತಂಡದಿಂದ ಯಾಕೆ ಹೊರ ಹಾಕುತ್ತಾರೆ ಎನ್ನುವುದೇ ಅರ್ಥವಾಗುವುದಿಲ್ಲ
ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ ನಡೆದಿರುವ ಪಂದ್ಯಗಳಲ್ಲಿ ಸರಿಯಾದ ಅವಕಾಶ ಸಿಗದ ಕುಲದೀಪ್ ಯಾದವ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಕಿಡಿಕಾರಿದ್ದಾರೆ. ಉತ್ತಮ ಪ್ರದರ್ಶನವನ್ನು ನೀಡುವ ಆತ್ಮವಿಶ್ವಾಸವನ್ನು ಹೊಂದಿದ್ದರೂ ಸಹ ಆಡುವ ಅವಕಾಶವನ್ನು ನೀಡದೇ ತಂಡದಿಂದ ಹಲವಾರು ಬಾರಿ ಹೊರಗಿಟ್ಟಿದ್ದಾರೆ, ಆದರೆ ಆಡುವ ಅವಕಾಶವನ್ನು ಯಾಕೆ ನೀಡಲಿಲ್ಲ ಎಂಬ ಕಾರಣವನ್ನು ಮಾತ್ರ ಯಾರೂ ಹೇಳಲು ಮುಂದೆ ಬರುವುದಿಲ್ಲ. ಇದೇ ರೀತಿ ಟೀಮ್ ಇಂಡಿಯಾದಲ್ಲಿ ನಡೆದಿದ್ದರೆ ತಂಡದ ನಾಯಕ ಬಂದು ತನ್ನ ಬದಲು ಬೇರೆ ಆಟಗಾರರಿಗೆ ಅವಕಾಶವನ್ನು ಯಾಕೆ ನೀಡಲಾಯಿತು ಎಂಬುದನ್ನು ತಿಳಿಸುತ್ತಾರೆ, ಇದರಿಂದ ತಂಡದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ. ಆದರೆ ಇಯಾನ್ ಮಾರ್ಗನ್ ಮಾತ್ರ ಅವಕಾಶ ಸಿಗದೇ ಇದ್ದಾಗ ಆ ವಿಷಯದ ಕುರಿತು ಚರ್ಚಿಸುವುದಿರಲಿ ತನ್ನ ಹತ್ತಿರ ಕೂಡ ಸುಳಿಯುವುದಿಲ್ಲ ಎಂದು ಕುಲ್ ದೀಪ್ ಯಾದವ್ ಮಾರ್ಗನ್ ವಿರುದ್ಧ ದನಿ ಎತ್ತಿದ್ದಾರೆ.

ರೋಹಿತ್ ಶರ್ಮಾ ರೀತಿಯ ನಾಯಕ ಇದ್ದರೆ ಈ ರೀತಿಯ ಸಮಸ್ಯೆಗಳಿರುವುದಿಲ್ಲ
ಇನ್ನು ಇಯಾನ್ ಮಾರ್ಗನ್ ನಾಯಕತ್ವದ ವಿರುದ್ಧ ಅಸಮಾಧಾನ ಹೊರಹಾಕಿರುವ ಕುಲ್ ದೀಪ್ ಯಾದವ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ರೀತಿಯ ನಾಯಕ ಎಲ್ಲಾ ತಂಡಗಳಲ್ಲೂ ಇದ್ದರೆ ತಂಡದಲ್ಲಿ ಉತ್ತಮ ಬಾಂಧವ್ಯವಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಯಾನ್ ಮಾರ್ಗನ್ ಓರ್ವ ವಿದೇಶಿ ಆಟಗಾರ ಹೀಗಾಗಿ ತಂಡದಿಂದ ಹೊರಹಾಕಿದಾಗ ನಾವು ಆತನ ಬಳಿ ಹೋಗಿ ಯಾಕೆ ತಂಡದಿಂದ ಕೈ ಬಿಟ್ಟಿದ್ದೀರಾ ಎಂದು ಕೇಳಲು ಆಗುವುದಿಲ್ಲ, ಅದೇ ಜಾಗದಲ್ಲಿ ರೋಹಿತ್ ಶರ್ಮಾ ಇದ್ದರೆ ಯಾವುದೇ ಮುಜುಗರವಿಲ್ಲದೆ ತಂಡದಲ್ಲಿ ಸ್ಥಾನ ನೀಡದೆ ಇರುವುದರ ಕುರಿತು ಮಾತನಾಡಬಹುದು ಎಂದು ಕುಲ್ ದೀಪ್ ಯಾದವ್ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಯಾರಿಗೂ ಸಹ ತನ್ನ ಮೇಲೆ ಮತ್ತು ತನ್ನ ಆಟದ ಮೇಲೆ ನಂಬಿಕೆಯೇ ಇಲ್ಲ ಎಂದು ಕುಲ್ ದೀಪ್ ಯಾದವ್ ಬೇಸರ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications