
ಮುಂಬೈ: ಕೊರೊನಾ ವೈರಸ್ ಭೀತಿಯಿಂದಾಗಿ ಕಳೆದ ವರ್ಷ ಭಾರತದಲ್ಲಿ ನಡೆಯಬೇಕಾಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ನಡೆದಿತ್ತು. ಈ ಬಾರಿ ಭಾರತದಲ್ಲೇ ಅದ್ದೂರಿ ಟೂರ್ನಿ ನಡೆಸಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ನಿರ್ಧರಿಸಿತ್ತಾದರೂ ಟೂರ್ನಿ ಆರಂಭದಲ್ಲೇ ಸವಾಲಿನ ಸನ್ನಿವೇಶಗಳು ಎದುರಾಗುತ್ತಿವೆ.
ಈ ಬಾರಿಯ ಐಪಿಎಲ್ ಪಂದ್ಯಗಳನ್ನು ಮುಂಬೈ, ಬೆಂಗಳೂರು, ಕೋಲ್ಕತ್ತಾ, ಅಹ್ಮದಾಬಾದ್, ನವದೆಹಲಿ ಮತ್ತು ಚೆನ್ನೈ ತಾಣಗಳಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿತ್ತು. ಈ ಆರು ತಾಣಗಳಲ್ಲೇ ಈ ಸೀಸನ್ ಪಂದ್ಯಗಳು ನಡೆಯಲಿವೆ ಎಂದು ಭಾರತೀಯ ಕ್ರಿಕೆಟ್ ಬೋರ್ಡ್ ಹೇಳಿತ್ತು. ಆದರೆ ಸದ್ಯ ಮುಂಬೈಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇರುವುದು ಬಿಸಿಸಿಐಗೆ ತಲೆ ನೋವು ಉಂಟಾಗಿದೆ.
ಮುಂಬೈಯಲ್ಲಿ 8 ಮಂದಿ ಮೈದಾನ ಸಿಬ್ಬಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿತ್ತು. ಅಲ್ಲದೆ ಕೋಲ್ಕತ್ತಾ ನೈಟ್ ರೈಡರ್ಸ್ನ ನಿತೀಶ್ ರಾಣಾ ಮತ್ತು ಡೆಲ್ಲಿ ಕ್ಯಾಪಿಟಲ್ಸ್ನ ಅಕ್ಷರ್ ಪಟೇಲ್ಗೂ ಕೋವಿಡ್-19 ಸೋಂಕು ತಗುಲಿತ್ತು. ಹೀಗಾಗಿ ಮುಂಬೈಗೆ ಬದಲಾಗಿ ಹೈದರಾಬಾದ್ ಮತ್ತು ಮಧ್ಯಪ್ರದೇಶದ ಇಂದೋರ್ ತಾಣಗಳತ್ತ ಬಿಸಿಸಿಐ ಯೋಚಿಸುತ್ತಿದೆ.
ಮುಂಬೈ ತಾಣದಲ್ಲಿ ಕೊರೊನಾ ಪ್ರಕರಣಗಳು ಮಿತಿಮೀರಿ ಐಪಿಎಲ್ಗೆ ಅಡ್ಡಿಯಾಗುವುದಾದರೆ ಮುಂಬೈನಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಒಂದೋ ಹೈದರಾಬಾದ್ ಅಥವಾ ಇಂದೋರ್ ಸ್ಟೇಡಿಯಂಗೆ ಸ್ಥಳಾಂತರಿಸಲು ಬಿಸಿಸಿಐ ಯೋಚಿಸುತ್ತಿದೆ. ಹೀಗಾಗಿ ಎರಡು ತಾಣಗಳನ್ನು ಬಿಸಿಸಿಐ 2021ರ ಐಪಿಎಲ್ ಸೀಸನ್ಗೆ ಸ್ಟ್ಯಾಂಡ್ಬೈ ತಾಣಗಳಾಗಿ ಇಟ್ಟುಕೊಂಡಿದೆ ಎಂದು ತಿಳಿದು ಬಂದಿದೆ.