
ಜೈಪುರ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ದೇಸಿ ಕ್ರಿಕೆಟ್ ಮತ್ತು ಕರೆ ಬಂದಾಗ ರಾಷ್ಟ್ರೀಯ ತಂಡದ ಪರ ಆಡುವ ರಾಜಸ್ಥಾನ್ ರಾಯಲ್ಸ್ ತಂಡದ ಎಡಗೈ ವೇಗಿ ಜಯದೇವ್ ಉನಾದ್ಕತ್ ಐಪಿಎಲ್ ದ್ವಿತೀಯ ಹಂತದಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ನೀಡಿದ್ದಾರೆ. ಐಪಿಎಲ್ನಲ್ಲಿ ತಾನಿರುವ ಆರ್ಆರ್ ಇನ್ನೂ ಬಲಿಷ್ಠ ತಂಡ ಅನ್ನಿಸಿಕೊಳ್ಳಬೇಕಾದರೆ ನಾನು ನನ್ನ ಫಾರ್ಮ್ ಇನ್ನೂ ಹೆಚ್ಚಿಸಿಕೊಳ್ಳಬೇಕು ಎಂದು ಉನಾದ್ಕತ್ ಹೇಳಿದ್ದಾರೆ.
ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಜಯದೇವ್ ಉನಾದ್ಕತ್ಗೆ ಅಷ್ಟೇನೂ ಅವಕಾಶಗಳು ಸಿಗುತ್ತಿಲ್ಲವಾದರೂ ದೇಸಿ ಕ್ರಿಕೆಟ್ನಲ್ಲಿ ಉನಾದ್ಕತ್ ಗಮನಾರ್ಹ ಬೌಲಿಂಗ್ ಸಾಧನೆ ತೋರಿದ್ದಾರೆ. ಉನಾದ್ಕತ್ ಹೆಸರಿನಲ್ಲಿ ಅದ್ಭುತ ಬೌಲಿಂಗ್ ಫಿಗರ್ ದಾಖಲೆಗಳಿವೆ.
2019-20ರ ರಣಜಿ ಸೀಸನ್ನಲ್ಲಿ ಅತ್ಯಧಿಕ ವಿಕೆಟ್ ಸರದಾರನಾಗಿ ದಾಖಲೆ ಪುಸ್ತಕದ ಪುಟ ಸೇರಿದ್ದ 29ರ ಹರೆಯದ ಉನಾದ್ಕತ್, ಕಳೆದ ಜುಲೈನನಲ್ಲಿ ಶ್ರೀಲಂಕಾಕ್ಕೆ ಟೀಮ್ ಇಂಡಿಯಾ ಪ್ರವಾಸ ಹೋಗಿದ್ದಾಗ ತಂಡದ ಜೊತೆಗೆ ಕಾಣಿಸಿಕೊಂಡಿದ್ದರು. ಉತ್ತಮ ಫಾರ್ಮ್ಗೋಸ್ಕರ ಸಾಮಾಜಿಕ ಜಾಲತಾಣದಿಂದ ದೂರ ಸರಿದಿರುವ ಉನಾದ್ಕತ್, ಐಪಿಎಲ್ನಲ್ಲಿ ಬೌಲಿಂಗ್ನಲ್ಲಿ ಬದಲಾವಣೆ ಮಾಡಿಕೊಳ್ಳಲಿದ್ದೇನೆ ಎಂದಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ ಉನಾದ್ಕತ್, "ನಾನು ನನ್ನ ಬೌಲಿಂಗ್ ಕೌಶಲದಲ್ಲಿ ಬದಲಾವಣೆ ಮಾಡಿಕೊಂಡಿದ್ದೇನೆ. ಐಪಿಎಲ್ ಆರಂಭಿಕ ಹಂತ ನಿಲ್ಲಿಸಲ್ಪಟ್ಟು ಬಿಡುವಿನ ಈ ಎರಡು ತಿಂಗಳ ಅವಧಿಯಲ್ಲಿ ನಾನೀ ಬದಲಾವಣೆ ಮಾಡಿಕೊಂದಿದ್ದೇನೆ. ಅದೇನೆಂದು ನಿಮಗೆ ಮೈದಾನದಲ್ಲಿ ಕಾಣ ಸಿಗಲಿದೆ," ಎಂದಿದ್ದಾರೆ.
ಸೆಪ್ಟೆಂಬರ್ 19ರಿಂದ ಅಕ್ಟೋಬರ್ 15ರ ವರಗೆ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಐಪಿಎಲ್ ದ್ವಿತೀಯ ಹಂತದ ಪಂದ್ಯಗಳು ನಡೆಯಲಿವೆ. ಎರಡನೇ ಹಂತದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಸೆಪ್ಟೆಂಬರ್ 21ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಮೊದಲ ಪಂದ್ಯ ಆಡಲಿದೆ.