
ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಈ ಬಾರಿಯ ಆವೃತ್ತಿ ಮೊದಲ ಮೂರು ಪಂದ್ಯಗಳಲ್ಲಿಯೂ ಬೌಲಿಂಗ್ ದಾಳಿಗೆ ಇಳಿದಿಲ್ಲ. ಅವರು ಆದರೆ ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಶೀಘ್ರವಾಗಿ ಬೌಲಿಂಗ್ ದಾಳಿಗೆ ಇಳಿಯಲಿದ್ದಾರೆ ಎಂದು ಕೋಚ್ ಜಯವರ್ಧನೆ ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯ ಈ ಬಾರಿಯ ಐಪಿಎಲ್ನ ಮೊದಲ ಮೂರು ಪಂದ್ಯಗಳಲ್ಲಿ ಬೌಲಿಂಗ್ ಮಾಡದಿರಲು ಕಾರಣವೇನೆಂಬುದನ್ನು ಜಯವರ್ಧನೆ ವಿವರಿಸಿದ್ದಾರೆ. ಭುಜದ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಾಂಡ್ಯ ಬೌಲಿಂಗ್ ಮಾಡಿಲ್ಲ. ಆದರೆ ಆದಷ್ಟು ಬೇಗನೆ ಬೌಲಿಂಗ್ ಮೂಲಕ ಮಿಂಚಲಿದ್ದಾರೆ ಎಂದಿದ್ದಾರೆ.
ಭುಜದ ನೋವಿನ ಹಿನ್ನೆಲೆಯಲ್ಲಿ ಕಳೆದ ಬಾರಿಯ ಐಪಿಎಲ್ನಲ್ಲಿ ಸಂಪೂರ್ಣವಾಗಿ ಬೌಲಿಂಗ್ ಮಾಡದೆ ಬ್ಯಾಟಿಂಗ್ ಸ್ಪೆಶಲಿಸ್ಟ್ ಆಗಿ ಮುಂಬೈ ಪರವಾಗಿ ಮಿಂಚಿದ್ದರು. ಬಳಿಕ ಆಸ್ಟ್ರೇಲಿಯಾ ಪ್ರವಾಸದಲ್ಲಿಯೂ ಸೀಮಿತ ಓವರ್ಗಳ ಸರಣಿಯಲ್ಲಿ ಪೂರ್ಣ ಕಾಲಿಕ ಬ್ಯಾಟ್ಸ್ಮನ್ ಆಗಿದ್ದರು.
ನಂತರ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಪಾಂಡ್ಯ ಮತ್ತೆ ಬೌಲಿಂಗ್ ದಾಳಿಗೆ ಇಳಿದು ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಪರವಾಗಿ ಹಾರ್ದಿಕ್ ಬೌಲಿಂಗ್ ಮಾಡುವ ನಿರೀಕ್ಷೆಯಿತ್ತು. ಆದರೆ ಭುಜದ ನೋವು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹಾರ್ದಿಕ್ ಪಾಂಡ್ಯ ಬೌಲಿಂಗ್ನಿಂದ ದೂರವಿದ್ದಾರೆ.
"ಈ ಆವೃತ್ತಿಯಲ್ಲಿ ಹಾರ್ದಿಕ್ ಬೌಲಿಂಗ್ ಮಾಡುವುದನ್ನು ನೋಡಲು ನಾವು ಕಾದಿದ್ದೇವೆ. ಅವರು ಭುಜದ ನೋವಿನಿಂದ ವಾಪಾಸಾಗಿದ್ದಾರೆ. ಆದರೆ ಕಳೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭುಜದ ನೋವು ಕಾಣಿಸಿಕೊಂಡಿತ್ತು. ಹಾಗಾಗಿ ಅವರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ" ಎಂದು ವರ್ಚುವಲ್ ಪ್ರೆಸ್ ಕಾನ್ಫರೆನ್ಸ್ನಲ್ಲಿ ಜಯವರ್ಧನೆ ಹೇಳಿದ್ದಾರೆ.