ಏಪ್ರಿಲ್ 9ರಂದು ಆರಂಭವಾಗಿದ್ದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಧ್ಯದಲ್ಲಿಯೇ ಮೊಟಕುಗೊಂಡಿದೆ. ಟೂರ್ನಿಯಲ್ಲಿ ಇದುವರೆಗೂ 29 ಪಂದ್ಯಗಳು ಯಶಸ್ವಿಯಾಗಿ ನಡೆದಿದ್ದು ಕೆಲ ಆಟಗಾರರಲ್ಲಿ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡ ಕಾರಣ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಮುಂದೂಡಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಉಳಿದ 31 ಪಂದ್ಯಗಳನ್ನು ಮುಂದುವರಿಸುವ ಯೋಜನೆಯಲ್ಲಿದೆ ಬಿಸಿಸಿಐ.
ಇಲ್ಲಿಯವರೆಗೂ ನಡೆದಿರುವ ಐಪಿಎಲ್ ಪಂದ್ಯಗಳ ಪೈಕಿ ರಾಜಸ್ಥಾನ್ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದೇವದತ್ ಪಡಿಕ್ಕಲ್ ಈ ಮೂವರು ಆಟಗಾರರು ಶತಕವನ್ನು ಸಿಡಿಸಿದ್ದಾರೆ. ಜೋಸ್ ಬಟ್ಲರ್ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಪಂದ್ಯದಲ್ಲಿ 64 ಎಸೆತಗಳಿಗೆ 124 ರನ್ ಬಾರಿಸುವುದರ ಮೂಲಕ ಭರ್ಜರಿ ಶತಕವನ್ನು ಸಿಡಿಸಿ ಮಿಂಚಿದ್ದರು. ಇದೀಗ ಜೋಸ್ ಬಟ್ಲರ್ ತಮ್ಮನ್ನೂ ಒಳಗೊಂಡಂತೆ ಸಾರ್ವಕಾಲಿಕ ಐಪಿಎಲ್ ತಂಡವನ್ನು ರಚಿಸಿದ್ದಾರೆ.
ಈ ಬಾರಿಯ ಐಪಿಎಲ್ ಮುಂದುವರೆದರೆ ಕಪ್ ಆರ್ಸಿಬಿಯದ್ದೇ ; ಇಲ್ಲಿವೆ 5 ಪ್ರಮುಖ ಕಾರಣಗಳು
ಬಟ್ಲರ್ ರಚಿಸಿರುವ ಸಾರ್ವಕಾಲಿಕ ಐಪಿಎಲ್ ತಂಡ : ಜೋಸ್ ಬಟ್ಲರ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಎಬಿ ಡಿವಿಲಿಯರ್ಸ್, ಕೀರನ್ ಪೊಲಾರ್ಡ್, ರವೀಂದ್ರ ಜಡೇಜಾ, ಹರ್ಭಜನ್ ಸಿಂಗ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ ಹಾಗೂ ಲಸಿತ್ ಮಾಲಿಂಗ. ಜೋಸ್ ಬಟ್ಲರ್ ರಚಿಸಿರುವ ಈ ಸಾರ್ವಕಾಲಿಕ ಐಪಿಎಲ್ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಐಪಿಎಲ್ ಸ್ಪೆಷಲಿಸ್ಟ್ ಸುರೇಶ್ ರೈನಾ ಹೆಸರಿಲ್ಲದೇ ಇರುವುದು ತೀರಾ ಅಚ್ಚರಿಯನ್ನು ಮೂಡಿಸಿದೆ ಹಾಗೂ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅವರ ಹೆಸರು ಇಲ್ಲದಿರುವುದು ಕೂಡ ಚರ್ಚೆಗೀಡಾಗಿದೆ.