ಈ ಬಾರಿಯ ಐಪಿಎಲ್ ಟೂರ್ನಿಯ ಪಂದ್ಯವೊಂದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೀಲಿ ಜೆರ್ಸಿ ತೊಟ್ಟು ಆಡುವ ಮೂಲಕ ಕೊರೊನಾವೈರಸ್ ವಿರುದ್ಧ ಹೋರಾಡುತ್ತಿರುವವರಿಗೆ ವಿಶೇಷ ಗೌರವ ಸಲ್ಲಿಸಲು ಮುಂದಾಗಿದೆ.
ಮ್ಯಾಚ್ ಕಿಟ್ ಮೇಲೆ ಕೊರೊನಾ ವಾರಿಯರ್ಸ್ ಕುರಿತು ವಿಶೇಷವಾದ ಸಂದೇಶವನ್ನು ಬರೆದು, ಪಂದ್ಯ ಮುಗಿದ ನಂತರ ಅವುಗಳ ಮೇಲೆ ಆಟಗಾರರ ಸಹಿಯನ್ನು ಹಾಕಿ ಹರಾಜಿನಲ್ಲಿ ಮಾರುವುದರ ಮೂಲಕ ಬರುವ ಹಣವನ್ನು ಕೊರೊನಾ ವಿರುದ್ಧದ ಹೋರಾಟಕ್ಕೆ ನೀಡುವ ಕಾರ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾಡಲು ಮುಂದಾಗಿದೆ. ಹಾಗೂ ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಒದಗಿಸುವ ಕೆಲಸವನ್ನು ಸಹ ಆರ್ಸಿಬಿ ಮಾಡಲು ಮುಂದಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾಡಲು ಮುಂದಾಗಿರುವ ಈ ಒಳ್ಳೆಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದ ತುಂಬಾ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ. ಐಪಿಎಲ್ ಟೂರ್ನಿಯ ಯಾವ ತಂಡವೂ ಮಾಡದ ಈ ಕೆಲಸವನ್ನು ಬೆಂಗಳೂರು ತಂಡ ಮಾಡುತ್ತಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ವಲಯದಲ್ಲಿ ಹೆಮ್ಮೆಯ ವಾತಾವರಣವನ್ನು ಸೃಷ್ಟಿ ಮಾಡಿದೆ.
ಇದೀಗ ಕರ್ನಾಟಕ ರಾಜ್ಯ ಸರ್ಕಾರದ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವರಾದ ಕೆ.ಸುಧಾಕರ್ ಅವರು ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈ ನಡೆಯನ್ನು ಟ್ವಿಟರ್ ಮೂಲಕ ಹೊಗಳಿದ್ದಾರೆ. ಕೊರೊನಾ ವಾರಿಯರ್ಸ್ ಪಟ್ಟ ಶ್ರಮಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೌರವ ತೋರಿಸುತ್ತಿರುವ ಈ ನಡೆ ನಿಜಕ್ಕೂ ಪ್ರಶಂಸನೀಯ, ಪ್ಲೇ ಬೋಲ್ಡ್ ಆರ್ಸಿಬಿ ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.