
ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಯೋಜನೆಯಂತೆ ನಡೆಯುತ್ತಿಲ್ಲ. ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಆಡಿದ್ದ ಮೊದಲ 6 ಪಂದ್ಯಗಳಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಕೇವಲ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿ ಬರೋಬ್ಬರಿ 5 ಪಂದ್ಯಗಳಲ್ಲಿ ಸೋಲುಂಡು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಹೀಗಾಗಿ ಸನ್ ರೈಸರ್ಸ್ ಹೈದರಾಬಾದ್ ನಾಯಕತ್ವದಿಂದ ಡೇವಿಡ್ ವಾರ್ನರ್ ಅವರನ್ನು ವಜಾಗೊಳಿಸಿ ಕೇನ್ ವಿಲಿಯಮ್ಸನ್ ಅವರನ್ನು ಹೊಸ ನಾಯಕ ಎಂದು ಘೋಷಣೆ ಮಾಡಲಾಯಿತು.
ಕೇನ್ ವಿಲಿಯಮ್ಸನ್ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವವನ್ನು ವಹಿಸಿಕೊಂಡ ನಂತರ ಭಾನುವಾರ (ಮೇ 2) ರಾಜಸ್ಥಾನ್ ರಾಯಲ್ಸ್ ಜೊತೆ ಹೈದರಾಬಾದ್ ತಂಡ ಸೆಣಸಾಡಿತು. ಡೇವಿಡ್ ವಾರ್ನರ್ ಅವರನ್ನು ನಾಯಕತ್ವದಿಂದ ತೆಗೆದದ್ದು ಮಾತ್ರವಲ್ಲದೆ ರಾಜಸ್ಥಾನ್ ವಿರುದ್ಧದ ಪಂದ್ಯದ ಆಡುವ ಬಳಗದಿಂದ ಸಹ ವಾರ್ನರ್ ಅವರನ್ನು ಕೈಬಿಡಲಾಗಿತ್ತು, ಹೀಗಾಗಿ ಡೇವಿಡ್ ವಾರ್ನರ್ ತಂಡದಿಂದ ಹೊರಗುಳಿದಿದ್ದರು. ಕೇನ್ ವಿಲಿಯಮ್ಸನ್ ನಾಯಕತ್ವದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಉತ್ತಮ ಪ್ರದರ್ಶನ ನೀಡಿ ಪಂದ್ಯವನ್ನು ಗೆಲ್ಲಲಿದೆ ಎಂದು ಕಾಯುತ್ತಿದ್ದ ಪ್ರತಿಯೊಬ್ಬರಿಗೂ ನಿರಾಸೆಯುಂಟಾಯಿತು, ಏಕೆಂದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧ 55 ರನ್ಗಳ ಹೀನಾಯ ಸೋಲನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ಅನುಭವಿಸಿತು.
ಈ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ನಾಯಕನಾಗಿ ಮಾತ್ರವಲ್ಲದೆ ಓರ್ವ ಆಟಗಾರನಾಗಿಯೂ ಸಹ ವಿಫಲರಾದರು. ವಾರ್ನರ್ ಜಾಗಕ್ಕೆ ಕರೆತಂದಿದ್ದ ಮೊಹಮ್ಮದ್ ನಬಿ ಕೂಡ ಮಿಂಚಲಿಲ್ಲ. ಡೇವಿಡ್ ವಾರ್ನರ್ ನಾಯಕತ್ವಕ್ಕಿಂತ ವಿಲಿಯಮ್ಸನ್ ನಾಯಕತ್ವದಲ್ಲಿ ಹೈದರಾಬಾದ್ ಹೀನಾಯ ಸೋಲನ್ನು ಕಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭವಾದವು. ಪಂದ್ಯ ಮುಗಿದ ಬಳಿಕ ಪಂದ್ಯದ ಕುರಿತು ಮಾತನಾಡಿದ ಕೇನ್ ವಿಲಿಯಮ್ಸನ್ ಡೇವಿಡ್ ವಾರ್ನರ್ ಅವರ ಹಿಂತಿರುಗುವಿಕೆಯ ಕುರಿತು ಮಾತನಾಡಿದರು. ಡೇವಿಡ್ ವಾರ್ನರ್ ಒಬ್ಬ ವರ್ಲ್ಡ್ ಕ್ಲಾಸ್ ಪ್ಲೇಯರ್ ಮತ್ತು ಈ ಪಂದ್ಯದ ಬಳಿಕ ಅವರ ಹಿಂತಿರುಗುವಿಕೆಯ ಬಗ್ಗೆ ದೊಡ್ಡ ಮಟ್ಟದಲ್ಲಿಯೇ ಚರ್ಚೆಯಾಗುತ್ತದೆ ಎಂದು ನನಗೆ ತಿಳಿದಿದೆ ಎಂದು ಹೇಳುವುದರ ಮೂಲಕ ವಿಲಿಯಮ್ಸನ್ ವಾರ್ನರ್ ಹಿಂತಿರುಗುವಿಕೆಯ ಸುಳಿವು ನೀಡಿದರು.