
ಈ ಬಾರಿಯ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ಆರು ಪಂದ್ಯಗಳಲ್ಲಿ ಐದು ಗೆಲುವು ಸಾಧಿಸಿ ಅದ್ಭುತ ಫಾರ್ಮ್ನಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ರೋಚಕ ಗೆಲುವು ಸಾಧಿಸುವಲ್ಲಿ ಆರ್ಸಿಬಿ ಯಶಸ್ವಿಯಾಗಿದೆ. ಈ ಗೆಲುವಿನ ಬಳಿಕ ಸ್ಯಾಂಡಲ್ವುಡ್ ಸ್ಟಾರ್ ಕಿಚ್ಚ ಸುದೀಪ್ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಈ ಗೆಲುವಿನೊಂದಿಗೆ ಆರ್ಸಿಬಿ ಫ್ಲೇಆಫ್ ಹಂತಕ್ಕೆ ಮತ್ತೊಂದು ಹೆಚ್ಚು ಹತ್ತಿರವಾಗಿದೆ ಎಂದು ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಸ್ಪೋಟಕ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಅವರ ಪ್ರದರ್ಶನದ ಬಗ್ಗೆ ವಿಶೇಷವಾಗಿ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
"ಆರ್ಸಿಬಿ ತಂಡಕ್ಕೆ ಅಭಿನಂದನೆಗಳು. ಪ್ಲೇಆಫ್ ಹಂತಕ್ಕೆ ಮತ್ತೊಂದು ಹೆಜ್ಜೆ. ನೀವಂತೂ ಅದ್ಭುತ ಎಬಿ ಡಿವಿಲಿಯರ್ಸ್. ಅದ್ಭುತವಾಗಿ ಯೋಜನೆಗಳನ್ನು ರೂಪಿಸಲಾಗಿತ್ತು. ಆದರೆ ಪಂದ್ಯ ಕೊನೆಯ ಎಸೆತದವರೆಗೂ ಹೋಗಬಹುದೆಂದು ಭಾವಿಸಿರಲಿಲ್ಲ. ಮುಂದಿನ ಪಂದ್ಯಕ್ಕೆ ಶುಭಹಾರೈಕೆಗಳು. ಆರ್ಸಿಬಿಯ ಅಭಿಮಾನಿಯಾಗಿ ಮತ್ತೊಂದು ಸಂಭ್ರಮಕ್ಕೆ ಸಜ್ಜಾಗಿದ್ದೇನೆ" ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಮಂಗಳವಾರ ನಡೆದ ಪಂದ್ಯದಲ್ಲಿ ಆರ್ಸಿಬಿ ಮೊದಲಿಗೆ ಬ್ಯಾಟಿಂಗ್ ಮಾಡಿ ಎಬಿ ಡಿವಿಲಿಯರ್ಸ್ ಸ್ಪೋಟಕ ಆಟದ ಪರಿಣಾಮವಾಗಿ 171 ರನ್ಗಳನ್ನು ಗಳಿಸಿತ್ತು. ಇದನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ಗಳಲ್ಲಿ 170 ರನ್ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಒಂದು ರನ್ಗಳ ಅಂತರದ ಗೆಲುವು ಸಾಧಿಸಿದ ವಿರಾಟ್ ಕೊಹ್ಲಿ ಬಳಗ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನವನ್ನು ಪಡೆದುಕೊಂಡಿದೆ.