ಈ ಬಾರಿಯ ಐಪಿಎಲ್ ಗೆಲ್ಲಲು ಅರ್ಹ ತಂಡ ಸಿಎಸ್ಕೆ ಅಲ್ಲ; ಚಾಂಪಿಯನ್ಸ್ ಆಗಬೇಕಿದ್ದ ತಂಡವನ್ನು ಹೆಸರಿಸಿದ ಧೋನಿ

ಜಗತ್ತಿನ ಅತ್ಯಂತ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ ಹದಿನಾಲ್ಕನೇ ಆವೃತ್ತಿಗೆ ಅಕ್ಟೋಬರ್ 15ರಂದು ತೆರೆ ಬಿದ್ದಿದೆ. ಭಾರತ ನೆಲದಲ್ಲಿ ಆರಂಭವಾಗಿದ್ದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊರೋನಾ ವೈರಸ್ ಕಾರಣದಿಂದಾಗಿ ಟೂರ್ನಿ ಮಧ್ಯದಲ್ಲಿಯೇ ತಾತ್ಕಾಲಿಕವಾಗಿ ಸ್ಥಗಿತಗೊಂಡು ಯುಎಇಗೆ ಸ್ಥಳಾಂತರಿಸಲ್ಪಟ್ಟಿತ್ತು. ಹೀಗೆ ಟೂರ್ನಿ ಮಧ್ಯದಲ್ಲಿ ಅಡೆತಡೆಗಳನ್ನು ಎದುರಿಸಿದ್ದ ಈ ಬಾರಿಯ ಐಪಿಎಲ್ ಆವೃತ್ತಿ ಯುಎಇ ನೆಲದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಇನ್ನು ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯ ಅಕ್ಟೋಬರ್ 15ರ ಶುಕ್ರವಾರದಂದು ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಇಯಾನ್ ಮಾರ್ಗನ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ರಾಬಿನ್ ಉತ್ತಪ್ಪ ಮತ್ತು ಮೊಯಿನ್ ಅಲಿ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ನಂತರ ಬ್ಯಾಟಿಂಗ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿತು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ 27 ರನ್ಗಳ ಜಯ ಸಾಧಿಸುವುದರ ಮೂಲಕ ನಾಲ್ಕನೇ ಬಾರಿ ಐಪಿಎಲ್ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಈ ಮೂಲಕ ಎಂಎಸ್ ಧೋನಿ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆ ಕೊಟ್ಟಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ. ಕಳೆದ ಸಾಲಿನ ಐಪಿಎಲ್ ಆವೃತ್ತಿಯಲ್ಲಿ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕುರಿತು ಟೂರ್ನಿಯ ಕೊನೆಯ ಪಂದ್ಯ ಮುಗಿದ ಸಂದರ್ಭದಲ್ಲಿ ಮಾತನಾಡಿದ್ದ ಎಂ ಎಸ್ ಧೋನಿ ಮುಂಬರಲಿರುವ ಐಪಿಎಲ್ ಟೂರ್ನಿಯಲ್ಲಿ ನಮ್ಮ ತಂಡ ಪುಟಿದೇಳಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಧೋನಿ ಅವರ ಮಾತಿನ ರೀತಿಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಟ್ರೋಫಿ ಎತ್ತಿ ಹಿಡಿಯುವ ಮೂಲಕ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಂಡಿದೆ.
ಇನ್ನು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಪಂದ್ಯೋತ್ತರ ಸಂದರ್ಶನದಲ್ಲಿ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯನ್ನು ಗೆಲ್ಲಲು ಅರ್ಹವಾಗಿದ್ದ ತಂಡವನ್ನು ಹೆಸರಿಸಿದ್ದು, ಈ ಕೆಳಕಂಡಂತೆ ಪ್ರತಿಕ್ರಿಯಿಸಿದ್ದಾರೆ.

ಈ ಬಾರಿಯ ಟ್ರೋಫಿಯನ್ನು ಗೆಲ್ಲಲು ಅರ್ಹವಾಗಿದ್ದ ತಂಡವಿದು
ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಎಂ ಎಸ್ ಧೋನಿ 'ಚೆನ್ನೈ ಸೂಪರ್ ಕಿಂಗ್ಸ್ ಕುರಿತು ಮಾತನಾಡುವ ಮುನ್ನ ನಾನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕುರಿತು ಮಾತನಾಡಲು ಇಚ್ಛಿಸುತ್ತೇನೆ. ಟೂರ್ನಿಯ ಮೊದಲಾರ್ಧದಲ್ಲಿ ತೀರಾ ಕೆಳಮಟ್ಟದಲ್ಲಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ದ್ವಿತೀಯಾರ್ಧದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ಪುಟಿದೆದ್ದದ್ದು ನಿಜಕ್ಕೂ ಶ್ಲಾಘನೀಯ, ಅವರು ಹೋರಾಟ ನಡೆಸಿದ ರೀತಿ ಅಮೋಘವಾಗಿತ್ತು. ಹೀಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಈ ಬಾರಿಯ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯಲು ಅರ್ಹವಾಗಿದ್ದ ತಂಡ ಎಂಬುದು ನನ್ನ ಅಭಿಪ್ರಾಯ' ಎಂದಿದ್ದಾರೆ.

ಬಹುಶಃ ವಿರಾಮ ಅವರಿಗೆ ಸಹಾಯ ಮಾಡಿರಬಹುದು
ಹೀಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ದ್ವಿತೀಯಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿರುವುದರ ಕುರಿತು ಪ್ರಶಂಸೆ ವ್ಯಕ್ತಪಡಿಸಿರುವ ಎಂಎಸ್ ಧೋನಿ ಟೂರ್ನಿಯ ಮೊದಲಾರ್ಧದ ನಂತರ ಸಿಕ್ಕ ವಿರಾಮ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸಹಾಯವಾಗಿರಬಹುದು ಎಂದಿದ್ದಾರೆ. ಹೌದು, ಕೋಲ್ಕತಾ ನೈಟ್ ರೈಡರ್ಸ್ ತಂಡ ಟೂರ್ನಿ ಸ್ಥಗಿತವಾಗುವ ಮುನ್ನ ತೀರಾ ಕಳಪೆ ಹಂತದಲ್ಲಿತ್ತು ಆದರೆ ದ್ವಿತೀಯಾರ್ಧದಲ್ಲಿ ಸಾಲು ಸಾಲು ಪಂದ್ಯಗಳನ್ನು ಗೆದ್ದು ಫೈನಲ್ ಹಂತದವರೆಗೂ ತಲುಪಿತು.

ದ್ವಿತೀಯ ಹಂತದಲ್ಲಿ ಕೆಕೆಆರ್ ಪರ ಮಿಂಚಿದ ಯುವ ಆಟಗಾರ ವೆಂಕಟೇಶ್ ಐಯ್ಯರ್
ಎಂಎಸ್ ಧೋನಿ ನೀಡಿದ ಹೇಳಿಕೆಗಳು ಅಕ್ಷರಶಃ ನಿಜ, ಯುಎಇ ಚರಣ ಆರಂಭವಾದ ನಂತರ ಕೋಲ್ಕತಾ ನೈಟ್ ರೈಡರ್ಸ್ ತಂಡ ನೀಡಿದ ಪ್ರದರ್ಶನ ಬೇರೆಯದೇ ಹಂತದ್ದು. ಕೆಕೆಆರ್ ತಂಡದ ಈ ಅಮೋಘ ಪ್ರದರ್ಶನಕ್ಕೆ ಕಾರಣರಾದವರಲ್ಲಿ ಪ್ರಮುಖ ಆಟಗಾರ ವೆಂಕಟೇಶ್ ಐಯ್ಯರ್. ಹೌದು, ದ್ವಿತೀಯಾರ್ಧದಲ್ಲಿ ಕೆಕೆಆರ್ ಪರ ಅಮೋಘ ಪ್ರದರ್ಶನ ನೀಡಿದ ವೆಂಕಟೇಶ್ ಐಯ್ಯರ್ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ 10 ಪಂದ್ಯಗಳನ್ನಾಡಿ ಬರೋಬ್ಬರಿ 370 ರನ್ ಬಾರಿಸಿ ಮಿಂಚಿದ್ದಾರೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿಯೂ ಅಬ್ಬರಿಸಿದ ವೆಂಕಟೇಶ್ ಐಯ್ಯರ್ 32 ಎಸೆತಗಳಲ್ಲಿ 50 ರನ್ ಬಾರಿಸಿ ಔಟ್ ಆದರು. ವೆಂಕಟೇಶ್ ಐಯ್ಯರ್ ವಿಕೆಟ್ ಬೀಳುವವರೆಗೂ ಕೋಲ್ಕತಾ ನೈಟ್ ರೈಡರ್ಸ್ ತಂಡ ಈ ಬಾರಿಯ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯಲಿದೆ ಎಂಬ ಅಭಿಪ್ರಾಯ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಮೂಡಿದ್ದು ಮಾತ್ರ ಸುಳ್ಳಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications