ಈ ಬಾರಿಯ ಟ್ರೋಫಿಯನ್ನು ಗೆಲ್ಲಲು ಅರ್ಹವಾಗಿದ್ದ ತಂಡವಿದು
ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಎಂ ಎಸ್ ಧೋನಿ 'ಚೆನ್ನೈ ಸೂಪರ್ ಕಿಂಗ್ಸ್ ಕುರಿತು ಮಾತನಾಡುವ ಮುನ್ನ ನಾನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕುರಿತು ಮಾತನಾಡಲು ಇಚ್ಛಿಸುತ್ತೇನೆ. ಟೂರ್ನಿಯ ಮೊದಲಾರ್ಧದಲ್ಲಿ ತೀರಾ ಕೆಳಮಟ್ಟದಲ್ಲಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ದ್ವಿತೀಯಾರ್ಧದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ಪುಟಿದೆದ್ದದ್ದು ನಿಜಕ್ಕೂ ಶ್ಲಾಘನೀಯ, ಅವರು ಹೋರಾಟ ನಡೆಸಿದ ರೀತಿ ಅಮೋಘವಾಗಿತ್ತು. ಹೀಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಈ ಬಾರಿಯ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯಲು ಅರ್ಹವಾಗಿದ್ದ ತಂಡ ಎಂಬುದು ನನ್ನ ಅಭಿಪ್ರಾಯ' ಎಂದಿದ್ದಾರೆ.
ಬಹುಶಃ ವಿರಾಮ ಅವರಿಗೆ ಸಹಾಯ ಮಾಡಿರಬಹುದು
ಹೀಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ದ್ವಿತೀಯಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿರುವುದರ ಕುರಿತು ಪ್ರಶಂಸೆ ವ್ಯಕ್ತಪಡಿಸಿರುವ ಎಂಎಸ್ ಧೋನಿ ಟೂರ್ನಿಯ ಮೊದಲಾರ್ಧದ ನಂತರ ಸಿಕ್ಕ ವಿರಾಮ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸಹಾಯವಾಗಿರಬಹುದು ಎಂದಿದ್ದಾರೆ. ಹೌದು, ಕೋಲ್ಕತಾ ನೈಟ್ ರೈಡರ್ಸ್ ತಂಡ ಟೂರ್ನಿ ಸ್ಥಗಿತವಾಗುವ ಮುನ್ನ ತೀರಾ ಕಳಪೆ ಹಂತದಲ್ಲಿತ್ತು ಆದರೆ ದ್ವಿತೀಯಾರ್ಧದಲ್ಲಿ ಸಾಲು ಸಾಲು ಪಂದ್ಯಗಳನ್ನು ಗೆದ್ದು ಫೈನಲ್ ಹಂತದವರೆಗೂ ತಲುಪಿತು.
ದ್ವಿತೀಯ ಹಂತದಲ್ಲಿ ಕೆಕೆಆರ್ ಪರ ಮಿಂಚಿದ ಯುವ ಆಟಗಾರ ವೆಂಕಟೇಶ್ ಐಯ್ಯರ್
ಎಂಎಸ್ ಧೋನಿ ನೀಡಿದ ಹೇಳಿಕೆಗಳು ಅಕ್ಷರಶಃ ನಿಜ, ಯುಎಇ ಚರಣ ಆರಂಭವಾದ ನಂತರ ಕೋಲ್ಕತಾ ನೈಟ್ ರೈಡರ್ಸ್ ತಂಡ ನೀಡಿದ ಪ್ರದರ್ಶನ ಬೇರೆಯದೇ ಹಂತದ್ದು. ಕೆಕೆಆರ್ ತಂಡದ ಈ ಅಮೋಘ ಪ್ರದರ್ಶನಕ್ಕೆ ಕಾರಣರಾದವರಲ್ಲಿ ಪ್ರಮುಖ ಆಟಗಾರ ವೆಂಕಟೇಶ್ ಐಯ್ಯರ್. ಹೌದು, ದ್ವಿತೀಯಾರ್ಧದಲ್ಲಿ ಕೆಕೆಆರ್ ಪರ ಅಮೋಘ ಪ್ರದರ್ಶನ ನೀಡಿದ ವೆಂಕಟೇಶ್ ಐಯ್ಯರ್ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ 10 ಪಂದ್ಯಗಳನ್ನಾಡಿ ಬರೋಬ್ಬರಿ 370 ರನ್ ಬಾರಿಸಿ ಮಿಂಚಿದ್ದಾರೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿಯೂ ಅಬ್ಬರಿಸಿದ ವೆಂಕಟೇಶ್ ಐಯ್ಯರ್ 32 ಎಸೆತಗಳಲ್ಲಿ 50 ರನ್ ಬಾರಿಸಿ ಔಟ್ ಆದರು. ವೆಂಕಟೇಶ್ ಐಯ್ಯರ್ ವಿಕೆಟ್ ಬೀಳುವವರೆಗೂ ಕೋಲ್ಕತಾ ನೈಟ್ ರೈಡರ್ಸ್ ತಂಡ ಈ ಬಾರಿಯ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯಲಿದೆ ಎಂಬ ಅಭಿಪ್ರಾಯ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಮೂಡಿದ್ದು ಮಾತ್ರ ಸುಳ್ಳಲ್ಲ.