
ಕೊಲ್ಕತ್ತಾ ನೈಟ್ ರೈಡರ್ಸ್ ಮಾಜಿ ನಾಯಕ ದಿನೇಶ್ ಕಾರ್ತಿಕ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ. ನಾಯಕತ್ವದಿಂದ ಕೆಳಗಿಳಿದ ಬಳಿಕ ದಿನೇಶ್ ಕಾರ್ತಿಕ್ ಅವರನ್ನು ಮುಂದಿನ ಆವೃತ್ತಿಯಿಂದ ಕೈಬಿಡುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಆ ಮಾತನ್ನು ಕೆಕೆಆರ್ ಫ್ರಾಂಚೈಸಿ ಸುಳ್ಳಾಗಿಸಿದೆ.
ದಿನೇಶ್ ಕಾರ್ತಿಕ್ ಜೊತೆಗೆ ಟೀಮ್ ಇಂಡಿಯಾದ ಆಟಗಾರ ಕುಲ್ದೀಪ್ ಯಾದವ್ ಅವರನ್ನು ಕೂಡ ಕೆಕೆಆರ್ ಫ್ರಾಂಚೈಸಿ ಉಳಿಸಿಕೊಳ್ಳುವ ನಿರ್ಧಾರ ಮಾಡಿದೆ. ಐಪಿಎಲ್ನಲ್ಲಿ ಕಳೆದ ಎರಡು ಆವೃತ್ತಿಗಳಲ್ಲಿ ಕುಲ್ದೀಪ್ ಯಾದವ್ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಕಳೆದ ಆವೃತ್ತಿಯಲ್ಲಿ ಕುಲ್ದೀಪ್ ಆಡುವ ಬಳಗದಲ್ಲಿ ಸ್ಥಾನ ಪಡೆಯಲೂ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಕುಲ್ದೀಪ್ ಸ್ಥಾನದ ಬಗ್ಗೆಯೂ ಅನುಮಾನಗಳಿದ್ದವು.
ಕೊಲ್ಕತ್ತಾ ನೈಟ್ ರೈಡರ್ಸ್ ಈ ಬಾರಿ ಕ್ಯಾಪ್ಡ್ ಆಟಗಾರರ ಪೈಕಿ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಟಾಮ್ ಬಾಂಟನ್ ಅವರನ್ನು ಮಾತ್ರ ಬಿಡುಗಡೆಗೊಳಿಸಿದೆ. ಇವರ ಜೊತೆಗೆ ಅನ್ಕ್ಯಾಪ್ಡ್ ಆಟಗಾರರಾದ ಆಸ್ಟ್ರೇಲಿಯಾದ ಕ್ರಿಸ್ ಗ್ರೀನ್, ಎಂ ಸಿದ್ಧಾರ್ಥ್, ನಿಖಿಲ್ ನಾಯ್ಕ್ ಹಾಗೂ ಸಿದ್ಧೇಶ್ ಲಾಡ್ ಈ ನಾಲ್ವರು ಆಟಗಾರರನ್ನು ಕೂಡ ಬಿಡುಗಡೆಗೊಳಿಸಿದೆ.
ಕಳೆದ ಐಪಿಎಲ್ ಆವೃತ್ತಿಯಲ್ಲಿ ಎರಡು ಬಾರಿಯ ಐಪಿಎಲ್ ಚಾಂಪಿಯನ್ ಕೆಕೆಆರ್ ತಂಡವನ್ನು ಇಬ್ಬರು ನಾಯಕರು ಮುನ್ನಡೆಸಿದ್ದರು. ಮೊದಲಾರ್ಧದಲ್ಲಿ ದಿನೇಶ್ ಕಾರ್ತಿಕ್ ನಾಯಕತ್ವ ವಹಿಸಿದ್ದರೆ ದ್ವಿತಿಯಾರ್ಧದಲ್ಲಿ ನಾಯಕತ್ವವನ್ನು ಇಯಾನ್ ಮಾರ್ಗನ್ಗೆ ಒಪ್ಪಿಸಿ ಕೇವಲ ಆಟಗಾರನಾಗಿ ಕಾರ್ತಿಕ್ ಮುಂದುವರಿದಿದ್ದರು.