
14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 16ನೇ ಪಂದ್ಯ ಗುರುವಾರ ( ಏಪ್ರಿಲ್ 22 ) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ 20 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 177 ರನ್ ಗಳಿಸಿತು. 178 ರನ್ಗಳ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದೇವದತ್ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕೇವಲ 16.3 ಓವರ್ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 181 ರನ್ ಗಳಿಸಿ 10 ವಿಕೆಟ್ಗಳ ಅಮೋಘ ಜಯವನ್ನು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಈ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ 52 ಎಸೆತಗಳಿಗೆ 101 ರನ್ ಬಾರಿಸಿ ದಾಖಲೆಯ ಶತಕವನ್ನು ನಿರ್ಮಿಸಿದರು. ದೇವದತ್ ಪಡಿಕ್ಕಲ್ ಅವರ ಈ ಶತಕದಾಟದ ಬಗ್ಗೆ ಸಾಕಷ್ಟು ಮಂದಿ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮತ್ತು ಪ್ರಸ್ತುತ ರಾಜಸ್ಥಾನ್ ರಾಯಲ್ಸ್ ತಂಡದ ಕ್ರಿಕೆಟ್ ನಿರ್ದೇಶಕ ಕುಮಾರ್ ಸಂಗಕ್ಕಾರ ಅವರು ಕೂಡ ದೇವದತ್ ಪಡಿಕ್ಕಲ್ ಬ್ಯಾಟಿಂಗ್ ವೈಖರಿ ಕುರಿತು ಪ್ರಶಂಸೆಯ ಸುರಿಮಳೆಗೈದಿದ್ದಾರೆ.
ದೇವದತ್ ಪಡಿಕ್ಕಲ್ ನಿಜಕ್ಕೂ ಅಸಾಧಾರಣವಾದ ಇನ್ನಿಂಗ್ಸ್ ಆಡಿದ್ದು, ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ತನಗೆ ಯಾವ ಎಸೆತವನ್ನು ಹೊಡೆಯಬಹುದೆಂಬ ವಿಶ್ವಾಸವನ್ನು ಹೊಂದಿದ್ದರೋ ಅಂತಹ ಎಸೆತವನ್ನು ಸರಿಯಾಗಿ ಉಪಯೋಗಿಸಿ ಬ್ಯಾಟಿಂಗ್ ಮಾಡಿದರು, ಅವರ ಬ್ಯಾಟಿಂಗ್ ವೈಖರಿಯಲ್ಲಿ ಬಹಳ ಪ್ರಬುದ್ಧತೆ ಕಂಡುಬಂತು. ವಿರಾಟ್ ಕೊಹ್ಲಿ ಅವರ ಜೊತೆ ಬ್ಯಾಟಿಂಗ್ ಮಾಡುತ್ತಿದ್ದ ಕಾರಣ ಅವರಿಬ್ಬರ ನಡುವೆ ಸಾಕಷ್ಟು ಸಂಭಾಷಣೆಗಳು ನಡೆದವು, ಏನು ಮಾಡಬೇಕು ಮತ್ತು ಹೇಗೆ ಮಾಡಬೇಕು ಎಂಬುದರ ಕುರಿತು ಸಾಕಷ್ಟು ಮಾತುಕತೆ ನಡೆದಿದ್ದು ತುಂಬಾ ಪ್ರಭಾವಶಾಲಿಯಾಗಿತ್ತು ಎಂದು ಸಂಗಕ್ಕಾರ ಪಡಿಕ್ಕಲ್ ಅವರ ಶತಕದಾಟವನ್ನು ಹೊಗಳಿದ್ದಾರೆ.