
ಮುಂಬೈ ಉತ್ತಮ ಆರಂಭದ ಬಳಿಕ ಕುಸಿದ ಮುಂಬೈ
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ಗೆ ಇಳಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ ಮೊದಲ ವಿಎಕಟ್ಗೆ 78 ರನ್ಗಳ ಜೊತೆಯಾಟವನ್ನು ನೀಡಿದರು. ಈ ಮೂಲಕ ಕೆಕೆಆರ್ಗೆ ಕಠಿಣ ಗುರಿ ನೀಡುವ ಮುನ್ಸೂಚನೆ ನೀಡಿತ್ತು. ಆದರೆ ಮುಂಬೈನ ಲೆಕ್ಕಾಚಾರಕ್ಕೆ ಕೆಕೆಆರ್ ಬೌಲರ್ಗಳು ಅಡ್ಡಿಯಾಗಿದ್ದರು. ಆರಂಭಿಕ ಜೋಡಿಯನ್ನು ಬೇರ್ಪಡಿಸಿದ ಬಳಿಕ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಲು ಆರಂಭಿಸಿದ್ದರು. ಬಳಿಕ ಯಾವ ಜೋಡಿಯಿಂದಲೂ ಉತ್ತಮ ಜೊತೆಯಾಟ ಬಾರದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್, ಕೃನಾಲ್ ಪಾಂಡ್ಯ ವಿಫಲವಾದರು. ಪೊಲಾರ್ಡ್ ಕೂಡ 21 ರನ್ಗಳಿಸಿ ರನೌಟ್ ಆದರು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡ 155 ರನ್ಗಳನ್ನು ಗಳಿಸಲು ಮಾತ್ರವೇ ಸಾಧ್ಯವಾಯಿತು.

ಮಿಂಚಿದ ಕೆಕೆಆರ್ ಬೌಲರ್ಗಳು
ಕೆಕೆಆರ್ ತಂಡದ ಬೌಲರ್ಗಳು ಮುಂಬೈನ ಅಪಾಯಕಾರಿ ಬ್ಯಾಟ್ಸ್ಮನ್ಗಳ ವಿರುದ್ಧ ಅದ್ಭುತವಾದ ಯಶಸ್ಸು ಸಾಧಿಸಿದರು. ಅದರಲ್ಲೂ ಲೂಕಿ ಫರ್ಗೂಸನ್, ಪ್ರಸಿದ್ಧ್ ಕೃಷ್ಣ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರೆ ಸುನಿಲ್ ನರೈನ್ 1 ವಿಕೆಟ್ ಪಡೆದಿದ್ದಲ್ಲದೆ ರನ್ ನಿಯಂತ್ರಿಸುವಲ್ಲಿಯೂ ನಿರ್ಣಾಯಕ ಪಾತ್ರವಹಿಸಿದರು. ಸುನಿಲ್ ನರೈನ್ ಹಾಗೂ ವರುಣ್ ಚಕ್ರವರ್ತಿ 4 ಓವರ್ಗಳ ಕೋಟಾ ಭರ್ತಿ ಮಾಡಿಯೂ 6ಕ್ಕಿಂತ ಕಡಿಮೆ ಎಕಾನಮಿಯಲ್ಲಿ ಬೌಲಿಂಗ್ ದಾಳಿ ಮಾಡಿದ್ದು ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿತ್ತು. ಇದೇ ಕಾರಣಕ್ಕೆ ಸುನಿಲ್ ನರೈನ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು.

ಬ್ಯಾಟಿಂಗ್ನಲ್ಲಿಯೂ ಕೆಕೆಆರ್ ಆರ್ಭಟ
156 ರನ್ಗಳ ಗುರಿ ಪಡೆದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಡೀಸೆಂಟ್ ಆರಂಭ ದೊರೆತಿತ್ತು. ಶುಬ್ಮನ್ ಗಿಲ್ ಹಾಗೂ ವೆಂಕಟೇಶ್ ಐಯ್ಯರ್ ಜೋಡಿ ಮೊದಲ ವಿಕೆಟ್ಗೆ 40 ರನ್ಗಳ ಜೊತೆಯಾಟವನ್ನು ನೀಡಿದರು. ಶುಬ್ಮನ್ ಗಿಲ್ ವಿಕೆಟ್ ಕಳೆದುಕೊಮಡ ನಂತರ ವೆಂಕಟೇಶ್ ಐಯ್ಯರ್ಗೆ ರಾಹುಲ್ ತ್ರಿಪಾಠಿ ಜೊತೆಯಾದರು. ಐಯ್ಯರ್ ಹಾಗೂ ತ್ರಿಪಾಠಿ ಜೋಡಿ ಮುಂಬೈ ಬೌಲರ್ಗಳ ಮೇಲೆ ಅಕ್ಷರಶಃ ಸವಾರಿ ಮಾಡಿದರು. ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಲು ಯಾವುದೇ ಅವಕಾಶವಿಲ್ಲದಂತೆ ಈ ಇಬ್ಬರು ಯುವ ದಾಂಡಿಗರು ಸ್ಪೋಟಕ ಪ್ರದರ್ಶನ ನೀಡುತ್ತಾ ಸಾಗಿದರು.
ಈ ಇಬ್ಬರು ಆಟಗಾರರು ಕೂಡ ಅರ್ಧ ಶತಕದ ಗಡಿದಾಟಿದರು. ಯುವ ಆಟಗಾರ ವೆಂಕಟೇಶ್ ಐಯ್ಯರ್ ಐಪಿಎಲ್ನಲ್ಲಿ ತಮ್ಮ ಚೊಚ್ಚಲ ಅರ್ಧಶತಕವನ್ನು ಬಾರಿಸಿದರು. ಕೇವಲ 25 ಎಸೆತಗಳಲ್ಲಿ ಈ ಸಾಧನೆ ಮಾಡಿದರು ಐಯ್ಯರ್. 30 ಎಸೆತಗಳನ್ನು ಎದುರಿಸಿದ ಅವರು 53 ರನ್ಗಳಿಸಿ ಜಸ್ಪ್ರೀತ್ ಬೂಮ್ರಾಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ಗೆ ಹೆಜ್ಜೆ ಹಾಕಿದರು. ಮತ್ತೊಂದೆಡೆ ರಾಹುಲ್ ತ್ರಿಪಾಠಿ ಪ್ರದರ್ಶನ ಮುಂದುವರಿದಿತ್ತು. 42 ಎಸೆತಗಳನ್ನು ಎದುರಿಸಿದ ತ್ರಿಪಾಠಿ 74 ರನ್ಗಳನ್ನು ಸಿಡಿಸಿ ಕೆಕೆಆರ್ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು.

ಟೂರ್ನಿಯ ರೋಚಕತೆ ಹೆಚ್ಚಿಸಿದ ಕೆಕೆಆರ್
ಇನ್ನು ಈ ಬಾರಿಯ ಐಪಿಎಲ್ನ ಮೊದಲ ಚರಣದ ಪಂದ್ಯಗಳಲ್ಲಿ ಕೆಲ ತಂಡಗಳು ನೀರಸ ಪ್ರದರ್ಶನ ನೀಡಿದ್ದವು. ಹೀಗಾಗಿ ಪಂದ್ಯಗಳ ರೋಚಕತೆ ಕಡಿಮೆಯಾಗಿತ್ತು. ಇದರಲಲ್ಇ ಕೆಕೆಆರ್ ಕೂಡ ಸೇರಿಕೊಂಡಿತ್ತು. ಆದರೆ ಎರಡನೇ ಚರಣದಲ್ಲಿ ಕೆಕೆಆರ್ ತನ್ನ ಗೇರ್ ಬದಲಿಸಿಕೊಂಡಿದೆ. ಟೂರ್ನಿಯ ಬಲಿಷ್ಠ ತಂಡಗಳ ವಿರುದ್ಧವೇ ಮೇಲಿಂದ ಮೇಲೆ ಗೆಲುವು ಸಾಧಿಸುತ್ತಾ ಸಾಗಿದೆ. ಅಂಕಪಟ್ಟಿಯಲ್ಲಿಯೂ ಆರನೇ ಸ್ಥಾನದಲ್ಲಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಈಗ ಟಾಪ್ 4ಗೆ ತಲುಪಿದೆ.
ಮತ್ತೊಂದೆಡೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಪ್ರದರ್ಶನ ಕೆಳಮುಖವಾಗಿ ಸಾಗುತ್ತಿದೆ. ಮೊದಲ ಚರಣದ ಪಂದ್ಯಗಳಲ್ಲಿಯೇ ಕಳೆಗುಂದಿದಂತೆ ಕಂಡುಬಂದಿದ್ದ ರೊಹಿತ್ ಶರ್ಮಾ ಪಡೆ ಯುಎಇ ಮೈದಾನದಲ್ಲಿ ಆಡಿದ ಎರಡು ಪಂದ್ಯಗಳಲ್ಲಿಯೂ ಸೋಲು ಕಂಡಿದೆ. ಅದ್ಭುತ ಪ್ರದರ್ಶನದ ಮೂಲಕ ರಾಷ್ಟ್ರೀಯ ತಂಡದ ಕದ ತಟ್ಟಿ ಟಿ20 ವಿಶ್ವಕಪ್ನಲ್ಲಿಯೂ ಸ್ಥಾನ ಪಡೆದುಕೊಂಡಿರುವ ಪ್ರತಿಭಾವಂತ ಆಟಗಾರರಾದ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ರಂತಾ ಆಟಗಾರರು ಮುಗ್ಗರಿಸುತ್ತಿರುವುದು ತಂಡದ ಪಾಲಿಗೆ ಉತ್ತಮ ಸಂಗತಿಯಲ್ಲ. ಹೀಗಾಗಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮುಂಬರುವ ಪಂದ್ಯಗಳಲ್ಲಿ ಅದ್ಭುತವಾಗಿ ಕಮ್ಬ್ಯಾಕ್ ಮಾಡಲು ಎದುರುನೋಡುತ್ತಿದೆ.


Click it and Unblock the Notifications
