
ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಕಳೆದ ಬಾರಿಯ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇ ಆಫ್ ಹಂತಕ್ಕೇರದೆಯೇ ಹೊರಬಿದ್ದಿತ್ತು. ಆದರೆ ಈ ಬಾರಿಯ ಟೂರ್ನಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭರ್ಜರಿ ಸಿದ್ಧತೆಯನ್ನು ನಡೆಸುತ್ತಿದೆ. ನಾಯಕ ಎಂಎಸ್ ಧೋನಿ ಸಹಿತ ಸಿಎಸ್ಕೆ ತಂಡದ ಆಟದ ಬಹುತೇಕ ಆಟಗಾರರು ಭರ್ಜರಿ ಸಿದ್ಧತೆಯನ್ನು ನಡೆಸುತ್ತಿದ್ದಾರೆ.
ಆದರೆ ಈ ತರಬೇತಿ ಶಿಬಿರಕ್ಕೆ ಚೆನ್ನೈ ತಂಡದ ಅನುಭವಿ ಆಟಗಾರ ಸುರೇಶ್ ರೈನಾ ಗೈರಾಗಿದ್ದಾರೆ. ಆದರೆ ಸುರೇಶ್ ರೈನಾ ಗೈರಿನ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಶಿ ವಿಶ್ವನಾಥನ್ ಪ್ರತಿಕ್ರಿಯಿಸಿದ್ದಾರೆ. ಸುರೇಶ್ ರೈನಾ ಮಾರ್ಚ್ 21ರಿಂದ ಐಪಿಎಲ್ ತರಬೇತಿ ಶಿಬಿರಕ್ಕೆ ಸೇರಿಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
"ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆತನಿಗೆ ಕೆಲ ವೈಯ್ಯಕ್ತಿಕ ಬದ್ದತೆಗಳು ಇವೆ. ಹೀಗಾಗಿ ಮ್ಯಾನೇಜ್ಮೆಂಟ್ನಿಂದ ಅವರು ಅನುಮತಿಯನ್ನು ಪಡೆದುಕೊಂಡಿದ್ದಾರೆ. ಕೆಲ ಸಮಯಗಳ ನಂತರ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆಟಗಾರರು ವೈಯಕ್ತಿಕವಾಗಿ ಆಗಮಿಸುತ್ತಿದ್ದು ಯಾವಾಗ ಅನುಕೂಲವಾಗುತ್ತದೆಯೇ ಆಗ ಬಂದು ಶಿಬಿರವನ್ನು ಸೇರಿಕೊಳ್ಳುತ್ತಿದ್ದಾರೆ. ಈ ವಿಚಾರವಾಗಿ ಪ್ರತಿಯೊಬ್ಬರ ನಿರ್ಧಾರವನ್ನು ಗೌರವಿಸಬೇಕು. ಅವರು ನಮ್ಮೊಂದಿಗೆ ಮಾಹಿತಿಯನ್ನು ನೀಡಿದ್ದು ಮಾರ್ಚ್ 21ರ ಆಸುಪಾಸಿನಲ್ಲಿ ಶಿಬಿರವನ್ನು ಸೇರಿಕೊಳ್ಳುವುದಾಗಿ ಹೇಳಿದ್ದಾರೆ" ಎಂದು ಸಿಎಸ್ಕೆ ಸಿಇಒ ಹೇಳಿದ್ದಾರೆ.
ಕಳೆದ ಬಾರಿಯ ಐಪಿಎಲ್ನಲ್ಲಿ ಸುರೇಶ್ ರೈನಾ ಅಂತಿಮ ಹಂತದಲ್ಲಿ ದಿಢೀರ್ ಆಗಿ ಟೂರ್ನಿಯಿಂದ ಹೊರಗುಳಿಯುವ ನಿರ್ಧಾರವನ್ನು ತೆಗೆದುಕೊಂಡಿದ್ದರು. ಯುಎಇನಲ್ಲಿ ನಡೆದ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸುರೇಶ್ ರೈನಾ ತಂಡದೊಂದಿಗೆ ತೆರಳಿದ್ದರು. ಆದರೆ ತಂಡದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಬೆಳಕಿಗೆ ಬಂದು ಸಾಕಷ್ಟು ಗೊಂದಲ ಹಾಗೂ ಆತಂಕದ ವಾತಾವರಣ ಉಂಟಾಗಿತ್ತು. ಆ ಬಳಿಕ ರೈನಾ ದಿಢೀರ್ ಆಗಿ ಭಾರತಕ್ಕೆ ಮರಳಿದ್ದರು.