
ಲೆಜೆಂಡರಿ ಕ್ರಿಕೆಟರ್ ಸುನಿಲ್ ಗವಾಸ್ಕರ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಈ ತಂಡವನ್ನು ಮಣಿಸುವುದು ತೀರಾ ಕಷ್ಟ ಎಂದು ಭವಿಷ್ಯವನ್ನು ನುಡಿದಿದ್ದಾರೆ. ಸುನಿಲ್ ಗವಾಸ್ಕರ್ ಅವರ ಪ್ರಕಾರ ಮುಂಬೈ ಇಂಡಿಯನ್ಸ್ ತಂಡವನ್ನು ಈ ಬಾರಿ ಕೂಡ ಮಣಿಸುವುದು ತೀರಾ ಕಷ್ಟವಂತೆ. ಕಳೆದ ಬಾರಿಯ ಐಪಿಎಲ್ ಟೂರ್ನಿಯನ್ನು ಮುಂಬೈ ಇಂಡಿಯನ್ಸ್ ವಶಪಡಿಸಿಕೊಂಡಿತ್ತು. ಈ ಬಾರಿಯೂ ಸಹ ಮುಂಬೈ ಇಂಡಿಯನ್ಸ್ ಕಪ್ ಗೆಲ್ಲಲಿದೆ ಎಂದು ಸುನೀಲ್ ಗವಾಸ್ಕರ್ ಪರೋಕ್ಷವಾಗಿ ಹೇಳಿದಂತಿದೆ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸುವುದು ತುಂಬಾ ಕಷ್ಟ. ಮುಂಬೈ ಇಂಡಿಯನ್ಸ್ ತಂಡದ ಪರ ಪಾಲ್ಗೊಳ್ಳಲಿರುವ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಪ್ರದರ್ಶನವನ್ನು ಇತ್ತೀಚೆಗಷ್ಟೇ ನೋಡಿದ್ದೇವೆ, ಅವರು ಬ್ಯಾಟ್ ಮಾಡಿದ ರೀತಿ ಅದ್ಭುತ ಎಂದು ಹೇಳಿದ ಗವಾಸ್ಕರ್ ಶ್ಲಾಘಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಪದಾರ್ಪಣೆ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ಇಬ್ಬರು ಆಟಗಾರರಾದ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಭರ್ಜರಿ ಪ್ರದರ್ಶನ ತೋರಿದರು. 32 ಎಸೆತಗಳಲ್ಲಿ 56 ರನ್ ಬಾರಿಸಿದ ಇಶಾನ್ ಕಿಶನ್ ಎರಡೂ ಪಂದ್ಯಗಳಲ್ಲಿ ಒಟ್ಟು 60 ರನ್ ಬಾರಿಸಿ ಭರವಸೆ ಮೂಡಿಸಿದ್ದಾರೆ. ಅದೇ ರೀತಿ ಸೂರ್ಯಕುಮಾರ್ ಯಾದವ್ 31 ಎಸೆತಗಳಲ್ಲಿ 57 ರನ್ ಬಾರಿಸಿ ದಾಖಲೆಯ ಅರ್ಧಶತಕವನ್ನು ಸಿಡಿಸಿದ್ದರು. ಒಟ್ಟು 3 ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ 89 ರನ್ ಗಳಿಸಿ ಮಿಂಚಿದ್ದರು.
ಇತ್ತ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಪಾಂಡ್ಯ ಬ್ರದರ್ಸ್ ಮಿಂಚಿದ್ದು ಗೊತ್ತೇ ಇದೆ. ಅತಿ ವೇಗವಾದ ಏಕದಿನ ಅರ್ಧಶತಕ ದಾಖಲಿಸಿದ ಕೃನಾಲ್ ಪಾಂಡ್ಯ ಭರವಸೆಯನ್ನು ಮೂಡಿಸಿದ್ದಾರೆ. ಹಾಗೆಯೇ ಹಾರ್ದಿಕ್ ಪಾಂಡ್ಯ ಸಹ ಭರ್ಜರಿ ಫಾರ್ಮ್ ಹೊಂದಿದ್ದು ಮುಂಬೈ ಇಂಡಿಯನ್ಸ್ ತಂಡದ ಈ ನಾಲ್ಕು ಸ್ಟಾರ್ಸ್ ಇದೇ ರೀತಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಯೂ ಭರ್ಜರಿ ಆಟವಾಡಲಿದ್ದು ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸುವುದು ಕಷ್ಟ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.