
ಐಪಿಎಲ್ 14ನೇ ಆವೃತ್ತಿಯ 31ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದೆ. ಇದು ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಆಡುತ್ತಿರುವ 200ನೇ ಪಂದ್ಯ ಎಂಬುದು ವಿಶೇಷ. ಈ ಪಂದ್ಯದ ಆರಂಭದಲ್ಲಿಯೇ ಟಾಸ್ ಗೆದ್ದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ವಿರಾಟ್ ಕೊಹ್ಲಿಗೆ ಟಾಸ್ ಗೆಲುವು ಎಂಬುದು ಅಪರೂಪವಾಗಿರುವ ಕಾರಣದಿಂದಾಗಿ ಕೊಹ್ಲಿ ಟಾಸ್ ಗೆದ್ದಿರುವ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ತಮಾಷೆಯಾಗಿ ಟ್ವೀಟ್ ಮಾಡಲಾಗಿದೆ.
ಅತ್ಯಂತ ಅಪರೂಪಕ್ಕೆ ಎಂಬಂತೆ ವಿರಾಟ್ ಕೊಹ್ಲಿ ಟಾಸ್ ಗೆದ್ದಿರುವ ಕಾರಣದಿಂದಾಗಿ ವಿರಾಟ್ ಕೊಹ್ಲಿಯನ್ನು ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಲೆಳೆದಿದ್ದಾರೆ. ವಿರಾಟ್ ಕೊಹ್ಲಿ ಟಾಸ್ ಗೆದ್ದಿರುವುದು 8ನೇ ಅಚ್ಚರಿ ಎಂದು ಕೆಲವರು ಬಣ್ಣಿಸಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿಯೂ ಸತತವಾಗಿ ಟಾಸ್ ಸೋತಿದ್ದ ವಿರಾಟ್ ಬಳಿಕ ಟಾಸ್ ಗೆದ್ದಿರುವುದಕ್ಕೆ ಸ್ವತಃ ಆಶ್ಚರ್ಯ ವ್ಯಕ್ತಪಡಿಸಿದ್ದರು.
ಇನ್ನು ಇಂದಿನ ಪಂದ್ಯದಲ್ಲಿ ಆರ್ಸಿಬಿ ಟಾಸ್ ಗೆದ್ದಿರುವುದು ಮಾತ್ರವೇ ಶುಭ ಸುದ್ದಿ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಂತರ ಆರ್ಸಿಬಿ ತಂಡ ಸತತವಾಗಿ ಆಘಾತವನ್ನು ಅನುಭವಿಸಿದೆ. ಆರಂಬಿಕನಾಗಿ ಕಣಕ್ಕಿಳಿದ ನಾಯಕ ವಿರಾಟ್ ಕೊಹ್ಲಿ 5 ರನ್ಗಳನ್ನು ಗಳಿಸಿ ಔಟ್ ಆಗುವ ಮೂಲಕ ತಂಡದ ಕುಸಿತ ಆರಂಭವಾಗಿತ್ತು. ಬಳಿಕ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಎಲ್ಲಾ ಆಟಗಾರರು ಕೂಡ ಒಬ್ಬರ ಹಿಂದೊಬ್ಬರಂತೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರು.
ನಾಯಕ ವಿರಾಟ್ ಕೊಹ್ಲಿ 5 ರನ್ಗಳಿಸಿದರೆ ದೇವದತ್ ಪಡಿಕ್ಕಲ್ 22 ರನ್ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ಚೊಚ್ಚಲ ಪಂದ್ಯವನ್ನಾಡಿದ ಶ್ರೀಕರ್ ಭರತ್ 16 ರನ್ಗಳಿಗೆ ಆಟವನ್ನು ಮುಗಿಸಿದರು. ನಂತರ ಬ್ಯಾಟಿಂಗ್ಗೆ ಇಳಿದ ಎಬಿ ಡಿವಿಲಿಯರ್ಸ್ ಎದುರಿಸಿದ ಮೊದಲ ಎಸೆತಕ್ಕೇ ಔಟಾಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ನಂತರ ಸಚಿನ್ ಬೇಬಿ, ವನಿಂದು ಹಸರಂಗ, ಕೈಲ್ ಜಾಮಿಸನ್, ಹರ್ಷಲ್ ಪಟೇಲ್ ಕೂಡ ನಿರಾಸೆ ಮೂಡಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. 22 ರನ್ಗಳಿಸಿದ ದೇವದತ್ ಪಡಿಕ್ಕಲ್ ಹೈಯೆಸ್ಟ್ ಸ್ಕೋರರ್ ಎನಿಸಿದ್ದಾರೆ.
ಎರಡು ತಂಡಗಳ ಆಡುವ ಬಳಗ ಹೀಗಿದೆ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗ: ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭರತ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್ವೆಲ್, ಎಬಿ ಡಿ ವಿಲಿಯರ್ಸ್, ವನಿಂದು ಹಸರಂಗ, ಸಚಿನ್ ಬೇಬಿ, ಕೈಲ್ ಜೇಮೀಸನ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಯುಜ್ವೇಂದ್ರ ಚಾಹಲ್
ಕೋಲ್ಕತ್ತಾ ನೈಟ್ ರೈಡರ್ಸ್ ಆಡುವ ಬಳಗ: ಶುಬ್ಮನ್ ಗಿಲ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಇಯಾನ್ ಮಾರ್ಗನ್ (ನಾಯಕ), ಆಂಡ್ರೆ ರಸೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸುನೀಲ್ ನರೈನ್, ವೆಂಕಟೇಶ್ ಅಯ್ಯರ್, ಲಾಕಿ ಫರ್ಗುಸನ್, ವರುಣ್ ಚಕ್ರವರ್ತಿ, ಪ್ರಸಿದ್ ಕೃಷ್ಣ