
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಜಾ ವಿರಾಟ್ ಕೊಹ್ಲಿ ಬ್ಯಾಟಿಂಗ್ ಶೈಲಿಗೆ ಚೆನ್ನೈ ಅಂಗಳ ಅತ್ಯಂತ ಸೂಕ್ತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಚೆನ್ನೈ ಅಂಗಳದಲ್ಲಿ ವಿರಾಟ್ ಕೊಹ್ಲಿ ಅಪಾಯಕಾರಿಯಾಗಬಲ್ಲರು, ಸಾಮಾನ್ಯಕ್ಕಿಂತ ವೇಗವಾಗಿ ಚೆಂಡನ್ನು ಬೌಂಡರಿ ಗೆರೆಗೆ ಅಟ್ಟಬಲ್ಲರು ಎಂಬ ಮಾತನ್ನು ಪ್ರಗ್ಯಾನ್ ಓಜಾ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಅವರ ಬೌಂಡರಿ ಬಾರಿಸುವ ಸಾಮರ್ಥ್ಯ ಮಾತ್ರವಲ್ಲ, ಒಂಟಿ ರನ್ಅನ್ನು ಎರಡು ರನ್ ಆಗಿ ಪರಿವರ್ತಿಸುವುದು ಹಾಗೂ ಎರಡು ರನ್ಅನ್ನು ಮೂರು ರನ್ಆಗಿ ಪರಿವರ್ತಿಸುವ ಸಾಮರ್ಥ್ಯ ಚೆಪಾಕ್ ಅಂಗಳಕ್ಕೆ ಉತ್ತಮವಾಗಿ ಒಗ್ಗಿಕೊಳ್ಳಲಿದೆ. ಈ ಮೂಲಕ ಅವರು ಹೆಚ್ಚಿನ ರನ್ಗಳಿಸಬಹುದು ಎಂದು ಓಜಾ ಹೇಳಿದ್ದಾರೆ.
"ವಿರಾಟ್ ಕೊಹ್ಲಿ ಓರ್ವ ಬುದ್ದಿವಂತ ಆಟಗಾರ. ಆತ ಯಾವಾಗಲೂ ದೊಡ್ಡ ಸಿಕ್ಸರ್ ಹಾಗೂ ಬೌಂಡರಿಗಳತ್ತಲೇ ಚಿತ್ತ ನೆಡುವುದಿಲ್ಲ. ಆದರೆ ಅವರು ಅದೇ ಪ್ರಮಾಣದಲ್ಲಿ ಓಟದ ಮೂಲಕ ರನ್ಗಳಿಸುತ್ತಾರೆ. ದೊಡ್ಡ ಅಂಗಳದಲ್ಲಿ ನೀವು ಆಡುತ್ತಿದ್ದರೂ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು" ಎಂದು ಪ್ರಗ್ಯಾನ್ ಓಜಾ ವಿವರಿಸಿದ್ದಾರೆ.
"ನೀವು ಚೆಪಾಕ್ ಅಂಗಳದ ಕೋನ ಗಮನಿಸಿದರೆ ಬದಿಯ ಬೌಂಡರಿಗಳು ದೊಡ್ಡದಾಗಿದೆ. ಮುಂಬೈ ಅಥವಾ ಬೆಂಗಳೂರಿನಂತಾ ಸಣ್ಣ ಅಂಗಳದಲ್ಲಿ ಕೆಲ ತಪ್ಪಾದ ಹೊಡೆತಗಳು ಕೂಡ ಸ್ಟೇಡಿಯಂನ ಸ್ಟ್ಯಾಂಡ್ಗೆ ಬಡಿಯುತ್ತದೆ. ಆದರೆ ಇಂತಾ ದೊಡ್ಡ ಅಂಗಳದಲ್ಲಿ ತಪ್ಪೆಸಗಿದರೆ ಅದು ಫೀಲ್ಡರ್ನ ಕೈಗೆ ತಲುಪುತ್ತದೆ"
"ದೊಡ್ಡ ಅಂಗಳದಲ್ಲಿ ನೀವು ಒಂಟಿ ಅಥವಾ ಎರಡು ರನ್ಗಳತ್ತ ಗಮನಹರಿಸಬೇಕಾದ ಅಗತ್ಯವಿದೆ. ಅದರಲ್ಲೂ ಇದು ನಿಧಾನಗತಿಯ ಪಿಚ್ ಆಗಿರುವ ಕಾರಣ ಸಿಕ್ಸರ್ ಅಥವಾ ಬೌಂಡರಿ ಬಾರಿಸುವುದು ಸುಲಭವಿಲ್ಲ. ಹಾಗಾಗಿ ರನ್ಗಳಿಸಲು ನೀವು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲೇ ಬೇಕು" ಎಂದು ಪ್ರಗ್ಯಾನ್ ಓಜಾ ಹೇಳಿದ್ದಾರೆ.