ಐಪಿಎಲ್ 2021: ಹೈದರಾಬಾದ್ ತಂಡದ ಯಶಸ್ಸಿನ ಮಂತ್ರ ಹೇಳಿದ ರಶೀದ್ ಖಾನ್

ಐಪಿಎಲ್ 14ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೂ ಮುನ್ನ ಹೈದರಾಬಾದ್ ತಂಡದ ಪ್ರಮುಖ ಸ್ಪಿನ್ ಅಸ್ತ್ರ ರಶೀದ್ ಖಾನ್ ತಂಡದ ಯಶಸ್ಸಿ ಬಗ್ಗೆ ಮಾತನಾಡಿದ್ದಾರೆ. ಕಳೆದ ಕೆಲ ಆವೃತ್ತಿಗಳಲ್ಲಿ ತಂಡ ಸ್ಥಿರವಾದ ಪ್ರದರ್ಶನ ನೀಡುತ್ತಿದ್ದು ಅದಕ್ಕೆ ಕಾರಣವೇನೆಂದು ಹೇಳಿದ್ದಾರೆ.
ಬಾಂಗ್ಲಾದೇಶದ ಸ್ಪಿನ್ನರ್ ರಶೀದ್ ಖಾನ್ ಐಪಿಎಲ್ ಟೂರ್ನಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಬೃಹತ್ ಗುರಿಯನ್ನು ಮುಂದಿಟ್ಟುಕೊಳ್ಳುವುದಿಲ್ಲ ಎಂದಿದ್ದಾರೆ. ನಾವು ಎಂದಿಗೂ ಪ್ಲೇಆಫ್ ವಿಚಾರವಾಗಿ ಮುನ್ನವೇ ಚಿಂತನೆಯನ್ನು ನಡೆಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
2016ರಲ್ಲಿ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ತಂಡ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಸತತ ಐದು ಆವೃತ್ತಿಗಳಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಪ್ಲೇಆಫ್ ಹಂತಕ್ಕೆ ಪ್ರವೇಶವನ್ನು ಗಿಟ್ಟಿಸಿಕೊಂಡಿದೆ. 2018ರಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದಲ್ಲಿ ರನ್ನರ್ಅಪ್ ಪ್ರಶಸ್ತಿಗೂ ಅದು ಪಾತ್ರವಾಗಿದೆ. ಹೀಗಾಗಿ ಹೈದರಾಬಾದ್ ಇತ್ತೀಚಿನ ದಿನಗಳಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುವ ತಂಡಗಳಲ್ಲಿ ಒಂದೆನಿಸಿದೆ. ಹೀಗಾಗಿ ಈ ಬಾರಿಯ ಆವೃತ್ತಿಯಲ್ಲೂ ವಾರ್ನರ್ ಪಡೆ ಪ್ಲೇಆಫ್ ಹಂತಕ್ಕೇರುವ ತಂಡಗಳಲ್ಲಿ ಒಂದೆನಿಸಿದೆ.
"ನಾವು ತಂಡವಾಗಿ ಟೂರ್ನಿಯ ಅಂತ್ಯದಲ್ಲಿ ನಮ್ಮ ಸ್ಥಾನ ಎಲ್ಲಿರಬೇಕು ಎಂದು ಯಾವತ್ತೂ ಗುರಿಯನ್ನು ನಿಗದಿಪಡಿಸಿರುವುದಿಲ್ಲ. ನಾವು ಅಂದು ಆಡುವ ತಂಡವನ್ನು ಪರಿಗಣಿಸಿ ಅದಕ್ಕೆ ನಮ್ಮ ಅತ್ಯುತ್ತಮ ಆಟವನ್ನು ನೀಡಲು ಪ್ರಯತ್ನಿಸುತ್ತೇವೆ. ನಾವೇನಾದರೂ ದೊಡ್ಡ ಗುರಿಯನ್ನು ನಿಗದಿಪಡಿಸಿದರೆ ಅದು ನಮ್ಮ ಯೋಜನೆ ಮೇಲೆ ಮತ್ತು ಅಂದಿನ ಪಂದ್ಯದ ಸಣ್ಣ ವಿಚಾರಗಳ ಮೇಲೆ ಪರಿಣಾಮ ಬೀರಬಹುದು. ನಾವು ಯಾರೇ ಆಡಿದರೂ ಅಂದಿನ ಆಟದಲ್ಲಿ ಅದ್ಭುತ ಪ್ರದರ್ಶನ ನೀಡಲು ಹೇಳುತ್ತೇವೆ" ಎಂದು ರಶೀದ್ ಖಾನ್ ವಿವರಿಸಿದ್ದಾರೆ.
"ಇದು ನಮ್ಮ ತಂಡದ ಸೌಂದರ್ಯ. ನಾವು ಪ್ಲೇಆಫ್ ಅಥವಾ ಫೈನಲ್ಸ್ ಬಗ್ಗೆ ಯೋಚನೆ ಮಾಡದ ಕಾರಣ ಹೆಚ್ಚಿನ ಪ್ಲೇಆಫ್ ಪಂದ್ಯಗಳನ್ನು ಆಡಿದ್ದೇವೆ. ನಿರ್ದಿಷ್ಟ ದಿನದಲ್ಲಿ ಬೇಕಾದ ಯೋಜನೆಯ ಬಗ್ಗೆ ನಾವು ಚಿಂತಿಸುತ್ತೇವೆ ಹಾಗೂ ಎದುರಾಳಿಗಳಿಗೆ ತಕ್ಕದಾಗಿ ಯೋಜನೆ ರೂಪಿಸಿಕೊಳ್ಳುತ್ತೇವೆ" ಎಂದು ರಶೀದ್ ಖಾನ್ ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications