ಆರ್ಸಿಬಿ ಚೆನ್ನೈ ವಿರುದ್ಧದ ತನ್ನ ಮುಂದಿನ ಪಂದ್ಯ ಗೆಲ್ಲಬೇಕೆಂದರೆ ಈ 3 ಬದಲಾವಣೆ ಮಾಡಿಕೊಳ್ಳಲೇಬೇಕು!

ಏಪ್ರಿಲ್ ತಿಂಗಳಿನಲ್ಲಿ ಭಾರತದಲ್ಲಿ ಆರಂಭವಾಗಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊರೋನಾವೈರಸ್ ಕಾರಣದಿಂದ ಮಧ್ಯದಲ್ಲಿಯೇ ತಾತ್ಕಾಲಿಕವಾಗಿ ಸ್ಥಗಿತಗೊಂಡು ಮುಂದೂಡಲ್ಪಟ್ಟಿತ್ತು. ಹೀಗೆ ಮುಂದೂಡಲ್ಪಟ್ಟಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ದ್ವಿತೀಯ ಭಾಗ ಇದೀಗ ಯುಎಇಯಲ್ಲಿ ನಡೆಯುತ್ತಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದ್ವಿತೀಯ ಭಾಗದ ತನ್ನ ಮೊದಲನೇ ಪಂದ್ಯದಲ್ಲಿಯೇ ಸೋಲುಂಡಿದೆ.
ಹೌದು, ಸೆಪ್ಟೆಂಬರ್ 20ರ ಸೋಮವಾರದಂದು ಅಬುಧಾಬಿಯ ಶೈಖ್ ಝಾಯೆದ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು. ಇದೇ ಆವೃತ್ತಿಯ ಮೊದಲನೇ ಭಾಗದಲ್ಲಿ ಬೆಂಗಳೂರು ಮತ್ತು ಕೋಲ್ಕತ್ತಾ ತಂಡಗಳು ಮುಖಾಮುಖಿಯಾಗಿದ್ದಾಗ ಮೊದಲು ಬ್ಯಾಟಿಂಗ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 204 ರನ್ ಗಳಿಸಿ ಕೊಲ್ಕತ್ತಾ ವಿರುದ್ಧ 38 ರನ್ಗಳ ಭರ್ಜರಿ ಜಯವನ್ನು ಸಾಧಿಸಿತ್ತು. ಹೀಗಾಗಿ ಸೋಮವಾರ ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಾಗಲೂ ಬೆಂಗಳೂರು ತಂಡ ಮತ್ತೊಮ್ಮೆ ಕೋಲ್ಕತ್ತಾ ವಿರುದ್ಧ ಅಬ್ಬರಿಸಲಿದೆ ಎಂಬ ನಿರೀಕ್ಷೆ ಇತ್ತು.
ಆದರೆ ಈ ನಿರೀಕ್ಷೆಯ ಮಟ್ಟವನ್ನು ತಲುಪುವಲ್ಲಿ ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 19 ಓವರ್ಗಳಲ್ಲಿ 92 ರನ್ ಗಳಿಸಿ ಆಲ್ ಔಟ್ ಆಯಿತು. ಅತ್ತ ಬೆಂಗಳೂರು ತಂಡ ನೀಡಿದ ಸುಲಭ ಗುರಿಯನ್ನು ಒಂದು ವಿಕೆಟ್ ಕಳೆದುಕೊಂಡು ಕೇವಲ 10 ಓವರ್ಗಳಲ್ಲಿ 94 ರನ್ ಗಳಿಸುವುದರ ಮೂಲಕ ಮುಟ್ಟಿದ ಕೊಲ್ಕತ್ತಾ ನೈಟ್ ರೈಡರ್ಸ್ ಗೆಲುವಿನ ಕೇಕೆ ಹಾಕಿತು. ಹೀಗೆ ಈ ಬಾರಿಯ ಐಪಿಎಲ್ ಟೂರ್ನಿಯ ದ್ವಿತೀಯ ಭಾಗದ ಮೊದಲನೇ ಪಂದ್ಯದಲ್ಲಿ ಮುಗ್ಗರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಸೆಪ್ಟೆಂಬರ್ 24ರಂದು ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೆಣಸಾಟ ನಡೆಸಲಿದೆ.
ಹೀಗಾಗಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ಸಾಧಿಸಬೇಕೆಂದರೆ ಕೊಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಮಾಡಿದ ಕೆಲ ತಪ್ಪುಗಳನ್ನು ತಿದ್ದುಕೊಂಡು ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ. ಹೌದು, ಶುಕ್ರವಾರ ಚೆನ್ನೈ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲಬೇಕೆಂದರೆ ಈ ಕೆಳಕಂಡ ಪ್ರಮುಖ 3 ಬದಲಾವಣೆಗಳನ್ನು ಮಾಡಿಕೊಳ್ಳಲೇಬೇಕಾಗಿದೆ..

1. ವನಿಂದು ಹಸರಂಗಗೆ ಪವರ್ ಪ್ಲೇನಲ್ಲಿ ಬೌಲಿಂಗ್ ನೀಡಬೇಕು
ನಿಮಗೆಲ್ಲ ತಿಳಿದಿರುವ ಹಾಗೆ ಆ್ಯಡಮ್ ಜಂಪಾ ಬದಲಾಗಿ ಶ್ರೀಲಂಕಾದ ವನಿಂದು ಹಸರಂಗನನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಚೆನ್ನೈ ವಿರುದ್ಧ ಶಾರ್ಜಾ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವನಿಂದು ಹಸರಂಗಗೆ ಪವರ್ ಪ್ಲೇನಲ್ಲಿ ಒಂದು ಅಥವಾ ಎರಡು ಓವರ್ ಬೌಲಿಂಗ್ ಮಾಡುವ ಅವಕಾಶವನ್ನು ನೀಡಬೇಕಾಗಿದೆ. ಶಾರ್ಜಾ ಕ್ರೀಡಾಂಗಣದಲ್ಲಿ ಸ್ಪಿನ್ ಬೌಲಿಂಗ್ ಉತ್ತಮವಾಗಿ ಕಾರ್ಯ ನಿರ್ವಹಿಸಲಿದ್ದು ಬೆಂಗಳೂರು ತಂಡ ಈ ಒಂದು ಬದಲಾವಣೆಯನ್ನು ಮಾಡಿಕೊಂಡರೆ ತಂಡಕ್ಕೆ ಉಪಯೋಗವಾಗಿರುವುದಂತೂ ಖಚಿತ.

2. ಎಬಿಡಿ ಮತ್ತು ಮ್ಯಾಕ್ಸ್ವೆಲ್ ಬ್ಯಾಟಿಂಗ್ ಕ್ರಮಾಂಕ ಅದಲು ಬದಲು
ಬೆಂಗಳೂರು ಮತ್ತು ಕೊಲ್ಕತ್ತಾ ನಡುವಿನ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದರು ಹಾಗೂ ನಂತರ ಐದನೇ ಕ್ರಮಾಂಕದಲ್ಲಿ ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ಮಾಡಲು ಬಂದರು. ಆದರೆ ಮುಂದಿನ ಪಂದ್ಯಗಳಲ್ಲಿ ಎಬಿ ಡಿವಿಲಿಯರ್ಸ್ ಅವರಿಗೆ ನಾಲ್ಕನೇ ಕ್ರಮಾಂಕವನ್ನು ಬಿಟ್ಟುಕೊಟ್ಟು ನಂತರ ಆಲ್ ರೌಂಡರ್ ಆಟಗಾರರಿಗೆ ಬ್ಯಾಟ್ ಮಾಡುವ ಅವಕಾಶವನ್ನು ನೀಡಬೇಕು. ಉತ್ತಮ ರನ್ ಕಲೆ ಹಾಕಬಲ್ಲ ಎಬಿ ಡಿವಿಲಿಯರ್ಸ್ ಅವರಿಗೆ ಹೆಚ್ಚು ಆಡುವ ಅವಕಾಶವನ್ನು ನೀಡಬೇಕಾಗಿದ್ದು ಗ್ಲೆನ್ ಮ್ಯಾಕ್ಸ್ವೆಲ್ ಆಗಮಿಸುವುದಕ್ಕೂ ಮುನ್ನ ಎಬಿ ಡಿವಿಲಿಯರ್ಸ್ ಮೈದಾನಕ್ಕಿಳಿಯುವ ಬದಲಾವಣೆಯನ್ನು ಬೆಂಗಳೂರು ತಂಡ ಮಾಡಿಕೊಳ್ಳಬೇಕಿದೆ.

3. ಗ್ಲೆನ್ ಮ್ಯಾಕ್ಸ್ವೆಲ್ಗೆ ಬೌಲಿಂಗ್ ಅವಕಾಶ
ಗ್ಲೆನ್ ಮ್ಯಾಕ್ಸ್ವೆಲ್ ಓರ್ವ ಆಲ್ ರೌಂಡರ್ ಆಟಗಾರ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಹೀಗಾಗಿ ಚೆನ್ನೈ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ಗೆ ಪಂದ್ಯದ ನಡುವೆ ಒಂದೆರಡು ಓವರ್ ಬೌಲಿಂಗ್ ಮಾಡುವ ಅವಕಾಶವನ್ನು ನೀಡುವುದು ಕೆಟ್ಟ ಉಪಾಯವಂತೂ ಅಲ್ಲವೇ ಅಲ್ಲ. ಗ್ಲೆನ್ ಮ್ಯಾಕ್ಸ್ವೆಲ್ಗೆ ಬೌಲಿಂಗ್ ನೀಡುವುದರಿಂದ ಯಾವುದಾದರೂ ವಿಕೆಟ್ ಬೀಳಬಹುದು ಹಾಗೂ ಚೆನ್ನೈ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಸುರೇಶ್ ರೈನಾರನ್ನು ಗ್ಲೆನ್ ಮ್ಯಾಕ್ಸ್ವೆಲ್ ಬೌಲಿಂಗ್ ಹೆಚ್ಚಾಗಿ ಕಾಡುವ ಸಾಧ್ಯತೆಗಳು ಕೂಡ ಇವೆ. ಹೀಗಾಗಿ ಶುಕ್ರವಾರ ಶಾರ್ಜಾ ಕ್ರೀಡಾಂಗಣದಲ್ಲಿ ನಡೆಯಲಿರುವ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ಗೆ ಬೌಲಿಂಗ್ ಮಾಡುವ ಅವಕಾಶ ನೀಡುವುದು ಮತ್ತೊಂದು ಪ್ರಮುಖ ಬದಲಾವಣೆ ಎನ್ನಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications