ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರನೇ ಪಂದ್ಯ ಬುಧವಾರದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ಗಳ ಸಾಧಾರಣ ಮೊತ್ತ ಗಳಿಸಿತು. 150 ರನ್ಗಳ ಗುರಿಯನ್ನು ಬೆನ್ನತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಮೊದಲನೇ ವಿಕೆಟನ್ನು ಬೇಗ ಕಳೆದುಕೊಂಡರೂ ಸಹ ವಾರ್ನರ್ ಮತ್ತು ಮನೀಷ್ ಪಾಂಡೆ ಅವರ ಉತ್ತಮ ಜತೆಯಾಟದಿಂದ ಸುಲಭವಾಗಿ ಗೆಲ್ಲುವ ಕಡೆ ಸಾಗಿತ್ತು.
ಆದರೆ ಬೆಂಗಳೂರು ತಂಡದ ಅತ್ಯುತ್ತಮ ಬೌಲಿಂಗ್ ದಾಳಿಯಿಂದ ಪಂದ್ಯದ ದಿಕ್ಕೇ ಬದಲಾಗಿ ಹೋಯಿತು. ವಾರ್ನರ್ ಮತ್ತು ಮನೀಷ್ ಪಾಂಡೆ ನಂತರ ಬಂದ ಬೇರೆ ಯಾವ ಆಟಗಾರರೂ ಸಹ ಹೆಚ್ಚಿನ ಹೊತ್ತು ಫೀಲ್ಡ್ನಲ್ಲಿ ಉಳಿಯಲಿಲ್ಲ. ಬೆಂಗಳೂರು ಬೌಲಿಂಗ್ ದಾಳಿಗೆ ತತ್ತರಿಸಿದ ಹೈದರಾಬಾದ್ ತಂಡ 20 ಓವರ್ಗಳಲ್ಲಿ 143 ರನ್ ಗಳಿಸಲಷ್ಟೇ ಶಕ್ತವಾಯಿತು, ಆರ್ಸಿಬಿ 6 ರನ್ಗಳ ಜಯ ಸಾಧಿಸಿತು. ಬೆಂಗಳೂರು ತಂಡ ಗೆದ್ದ ನಂತರ ಮಾತನಾಡಿದ ಆರ್ಸಿಬಿ ಹೆಡ್ ಕೋಚ್ ಸೈಮನ್ ಕಾಟಿಚ್ ಪಂದ್ಯದ ವೇಳೆ ಕೊಹ್ಲಿ ತೆಗೆದುಕೊಂಡ ಆ ಒಂದು ನಿರ್ಧಾರದಿಂದಲೇ ಜಯಗಳಿಸಿದೆವು ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರು ಮತ್ತು ಹೈದ್ರಾಬಾದ್ ನಡುವಿನ ಟೈಮ್ಔಟ್ ವೇಳೆ ವಿರಾಟ್ ಕೊಹ್ಲಿ ಮತ್ತೆ ಶಹಬಾಝ್ ಅಹ್ಮದ್ಗೆ ಮತ್ತೆ ಬೌಲಿಂಗ್ ನೀಡುವ ನಿರ್ಧಾರವನ್ನು ಹಂಚಿಕೊಂಡರು, ಇದಕ್ಕೆ ಸೈಮನ್ ಕಾಟಿಚ್ ಮತ್ತು ಬೆಂಗಳೂರು ತಂಡ ಕೂಡ ಒಪ್ಪಿಕೊಂಡಿತು, ನಂತರ ಶಹಬಾಝ್ ಅಹ್ಮದ್ ಮಾಡಿದ ಓವರ್ ಪಂದ್ಯದ ದಿಕ್ಕನ್ನೇ ಬದಲಿಸಿತು ಇಲ್ಲಿ ಕೊಹ್ಲಿ ಅವರ ಚಾಣಾಕ್ಷತನ ಚೆನ್ನಾಗಿ ಕೆಲಸ ಮಾಡಿದ್ದು ಪಂದ್ಯ ಗೆಲ್ಲಿಸಿದ ಕೀರ್ತಿ ಕೊಹ್ಲಿಗೆ ಸಲ್ಲುತ್ತದೆ ಎಂದು ಸೈಮನ್ ಕಾಟಿಚ್ ಹೇಳಿದ್ದಾರೆ.
ವಿರಾಟ್ ವಿರಾಮದ ವೇಳೆ ತೆಗೆದುಕೊಂಡ ನಿರ್ಧಾರದಂತೆ 17ನೇ ಓವರ್ ಮಾಡಲು ಶಹಬಾಝ್ ಅಹ್ಮದ್ಗೆ ಅವಕಾಶ ನೀಡಲಾಯಿತು. ಆ ಒಂದು ಓವರ್ನಲ್ಲಿ ಶಹಬಾಝ್ ಅಹ್ಮದ್ ಕೇವಲ 1 ರನ್ ನೀಡಿ ಹೈದರಾಬಾದ್ ತಂಡದ ಪ್ರಮುಖ 3 ವಿಕೆಟ್ಗಳನ್ನು ಪಡೆದು ಪಂದ್ಯದ ದಿಕ್ಕನ್ನೇ ಬದಲಿಸಿದರು.