ಪಂತ್ ಮತ್ತು ಧೋನಿಯಲ್ಲಿ ಉತ್ತಮ ನಾಯಕನಾರು ಎಂಬ ಪ್ರಶ್ನೆಗೆ ವಿವಾದಾತ್ಮಕ ಉತ್ತರ ನೀಡಿದ ಸೆಹ್ವಾಗ್

ಪ್ರಸ್ತುತ ಯುಎಇಯಲ್ಲಿ ನಡೆಯುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಬಹುತೇಕ ಮುಗಿಯುವ ಹಂತಕ್ಕೆ ತಲುಪಿದ್ದು ಪ್ಲೇ ಆಫ್ ಪಂದ್ಯಗಳ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇತರೆ ಎಲ್ಲಾ ತಂಡಗಳನ್ನು ಹಿಂದಿಕ್ಕಿ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ತದನಂತರ ಯುವ ನಾಯಕ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಅಧಿಕೃತವಾಗಿ ಪ್ಲೇ ಆಫ್ ಪ್ರವೇಶಿಸಿದ ಎರಡನೇ ತಂಡ ಎನಿಸಿಕೊಂಡಿತು. ನಂತರ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸಿದ ತೃತೀಯ ತಂಡ ಎನಿಸಿಕೊಂಡಿತು.
ಹೀಗೆ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಅಧಿಕೃತವಾಗಿ ಪ್ಲೇ ಆಫ್ ಸುತ್ತಿಗೆ ಲಗ್ಗೆ ಇಟ್ಟಿದ್ದು, ಉಳಿದಂತೆ ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ತಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಪ್ಲೇ ಆಫ್ ಸುತ್ತಿನ ಅರ್ಹತೆಯ ಅಂತಿಮ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದೆ.
ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಳೆದ ಸೋಮವಾರ ( ಅಕ್ಟೋಬರ್ 4 ) ನಡೆದ ತಮ್ಮ ನಡುವಿನ ಪಂದ್ಯದವರೆಗೂ ಸಮಬಲ ಸಾಧಿಸಿದ್ದವು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನೆಟ್ ರನ್ ರೇಟ್ ಹೆಚ್ಚಿದ್ದ ಕಾರಣ ಅಗ್ರಸ್ಥಾನವನ್ನು ಪಡೆದುಕೊಂಡಿತ್ತು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ದ್ವಿತೀಯ ಸ್ಥಾನದಲ್ಲಿತ್ತು. ಹೀಗಾಗಿ ಸೋಮವಾರ ನಡೆದ ಪಂದ್ಯದಲ್ಲಿ ಗೆದ್ದವರು ಅಗ್ರಸ್ಥಾನಕ್ಕೇರಲಿದ್ದು ಸೋತವರು ದ್ವಿತೀಯ ಸ್ಥಾನಕ್ಕೆ ಕುಸಿಯಲ್ಲಿದ್ದಾರೆ ಎನ್ನುವ ಕಾರಣದಿಂದಾಗಿ ಆ ಪಂದ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಹೀಗೆ ಸೋಮವಾರ ( ಅಕ್ಟೋಬರ್ 4 ) ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ನಡೆಯುವುದಕ್ಕೂ ಮುನ್ನ ಪಂದ್ಯದ ಕುರಿತಾಗಿ ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮಾತನಾಡಿದ್ದು ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.

ರಿಷಭ್ ಪಂತ್ ಧೋನಿಯನ್ನೇ ಮೀರಿಸುವಂತಹ ನಾಯಕ
ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯ ಆರಂಭಕ್ಕೂ ಮುನ್ನ ಮಾತನಾಡಿದ ವೀರೇಂದ್ರ ಸೆಹ್ವಾಗ್ ಎಂ ಎಸ್ ಧೋನಿ ಮತ್ತು ರಿಷಭ್ ಪಂತ್ ನಾಯಕತ್ವದ ಕುರಿತು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ರಿಷಭ್ ಪಂತ್ ನಾಯಕತ್ವವನ್ನು ವೀಕ್ಷಿಸಿದ ಎಂಎಸ್ ಧೋನಿಗೆ ಈತ ಗುರುವನ್ನೇ ಮೀರಿಸುವಂತಹ ಶಿಷ್ಯ ಎಂದೆನಿಸದೇ ಇರಲಾರದು ಎಂದಿದ್ದಾರೆ. ಈ ಹಿಂದೆ ಎಂ ಎಸ್ ಧೋನಿ ರಿಷಭ್ ಪಂತ್ ಅವರಿಗೆ ಸಲಹೆಗಳನ್ನು ನೀಡುತ್ತಾ, ಯಾವ ರೀತಿ ತಂಡವನ್ನು ನಿಭಾಯಿಸಬೇಕು ಎಂಬುದನ್ನು ಕಲಿಸಿಕೊಟ್ಟಿದ್ದರು. ಆದರೆ ಇದೀಗ ರಿಷಭ್ ಪಂತ್ ಅವರ ಉತ್ತಮವಾದ ಜಾಣ್ಮೆಯ ನಾಯಕತ್ವವನ್ನು ನೋಡಿ ಎಂಎಸ್ ಧೋನಿಗೆ ಈತ ತನಗೆ ನಾಯಕತ್ವ ಕಲಿಸಿಕೊಟ್ಟ ಗುರುವನ್ನೇ ಮೀರಿಸುವಂತಹ ಶಿಷ್ಯನಾಗಿದ್ದಾನೆ ಎನಿಸುವುದು ಖಚಿತ ಎಂದಿದ್ದಾರೆ.

ವಿರೇಂದ್ರ ಸೆಹ್ವಾಗ್ ಹೇಳಿಕೆ ಸೃಷ್ಟಿಸುತ್ತಿದೆ ವಿವಾದ
ರಿಷಭ್ ಪಂತ್ ಐಪಿಎಲ್ ತಂಡವೊಂದರ ನಾಯಕತ್ವವನ್ನು ವಹಿಸಿಕೊಳ್ಳುತ್ತಿರುವುದು ಇದೇ ಮೊದಲು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಎಂಎಸ್ ಧೋನಿ 3 ಬಾರಿ ಐಪಿಎಲ್ ಟ್ರೋಫಿಯನ್ನು ಗೆಲ್ಲಿಸಿಕೊಟ್ಟಿದ್ದಾರೆ ಮತ್ತು ಅಂತರರಾಷ್ಟ್ರೀಯ ನಾಯಕನಾಗಿ ಧೋನಿ ಮಾಡಿರುವ ಸಾಧನೆ ಬಗ್ಗೆ ಹೆಚ್ಚೇನೂ ಹೇಳುವ ಅಗತ್ಯತೆ ಇಲ್ಲ. ಹೀಗೆ ನಾಯಕತ್ವದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಿರುವ ಎಂಎಸ್ ಧೋನಿ ಅವರ ನಾಯಕತ್ವಕ್ಕಿಂತ ಇದೇ ಮೊದಲ ಬಾರಿಗೆ ನಾಯಕತ್ವವನ್ನು ವಹಿಸಿಕೊಂಡಿರುವ ರಿಷಭ್ ಪಂತ್ ಅವರ ನಾಯಕತ್ವ ಉತ್ತಮ ಎನ್ನುವುದು ಸರಿಯಲ್ಲ ಎಂದು ಧೋನಿ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ.

ಚೆನ್ನೈ ಸೋಲಿಸಿ ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಅಕ್ಟೋಬರ್ 4ರ ಸೋಮವಾರದಂದು ನಡೆದ ಪಂದ್ಯದಲ್ಲಿ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ 3 ವಿಕೆಟ್ಗಳ ಜಯವನ್ನು ಸಾಧಿಸುವುದರ ಮೂಲಕ ಟೂರ್ನಿಯಲ್ಲಿ ತನ್ನ ಹತ್ತನೇ ಗೆಲುವನ್ನು ಪಡೆದುಕೊಂಡು ಅಗ್ರಸ್ಥಾನಕ್ಕೇರಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ದ್ವಿತೀಯ ಸ್ಥಾನಕ್ಕೆ ತಳ್ಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications