
ನವದೆಹಲಿ: ದುಡುಕಿನ ಬ್ಯಾಟಿಂಗ್ ಮಾಡ್ತಾನೆ, ಆತನ ಶಾಟ್ ಸೆಲೆಕ್ಷನ್ ಸರಿಯಿಲ್ಲ, ವಿಕೆಟ್ ಕೀಪಿಂಗ್ಗೆ ನಾಲಾಯಕ್ ಅಂತೆಲ್ಲ ದೂರಲಾಗುತ್ತಿದ್ದ ಅದೇ ಭಾರತೀಯ ಯುವ ಬ್ಯಾಟ್ಸ್ಮನ್ ರಿಷಭ್ ಪಂತ್, ಇಂಡಿಯನ್ ಪ್ರೀಮಿಯರ್ ಲೀಗ್ನ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ಗೆ ನೂತನ ನಾಯಕರಾಗಿ ಹೆಸರಿಸಲ್ಪಟ್ಟಿದ್ದಾರೆ.
ಭಾರತ-ಇಂಗ್ಲೆಂಡ್ ಏಕದಿನ ಸರಣಿಯ ವೇಳೆ ಡೆಲ್ಲಿ ಕ್ಯಾಪಿಟಲ್ಸ್ನ ಎಂದಿನ ನಾಯಕ ಶ್ರೇಯಸ್ ಐಯ್ಯರ್ ಗಾಯಕ್ಕೀಡಾಗಿದ್ದರು. ಅಂದು ಏಕದಿನ ಸರಣಿಯಿಂದ ಹೊರ ಬಿದ್ದಿದ್ದ ಐಯ್ಯರ್ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಅಯ್ಯರ್ ಈ ಬಾರಿ ಟೂರ್ನಿಯುದ್ದಕ್ಕೂ ಡೆಲ್ಲಿಪರ ಆಡುತ್ತಿಲ್ಲ. ಆದ್ದರಿಂದ ನಾಯಕನ ಹೊಣೆಗಾರಿಕೆ ಯುವ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಹೆಗಲ ಮೇಲೆ ಬಿದ್ದಿದೆ.
ಪಂತ್ ನಾಯಕನಾಗಿ ಆಯ್ಕೆಯಾಗಿರುವ ವಿಚಾರವನ್ನು ಕಳೆದ ಸೀಸನ್ನ ರನ್ನರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ಟ್ವೀಟ್ ಮೂಲಕ ತಿಳಿಸಿದೆ. '2021ರ ಸೀಸನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ಗೆ ರಿಷಭ್ ಪಂತ್ ನಾಯಕರಾಗಿರಲಿದ್ದಾರೆ' ಎಂದು ಡಿಸಿ ಟ್ವೀಟ್ ಮೂಲಕ ಖಾತರಿಪಡಿಸಿದೆ.
ಗಾಯಕ್ಕೀಡಾಗಿರುವುದರಿಂದ ಮುಂಬರಲಿರುವ ಐಪಿಎಲ್ ಸೀಸನ್ನಿಂದ ಶ್ರೇಯಸ್ ಐಯ್ಯರ್ ಹೊರಬಿದ್ದಿದ್ದಾರೆ. ಹೀಗಾಗಿ ಆತನ ಅನುಪಸ್ಥಿತಿಯಲ್ಲಿ ರಿಷಭ್ ಪಂತ್ ತಂಡ ಮುನ್ನಡೆಸಲಿದ್ದಾರೆ ಎಂದು ಡಿಸಿ ಟ್ವೀಟ್ನಲ್ಲಿ ಬರೆದುಕೊಂಡಿದೆ. 23ರ ಹರೆಯದ ಪಂತ್ ಆಸ್ಟ್ರೇಲಿಯಾ ಪ್ರವಾಸ ಮತ್ತು ಭಾರತಕ್ಕೆ ಇಂಗ್ಲೆಂಡ್ ಪ್ರವಾಸ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು.