
ಏಪ್ರಿಲ್ 24, ವರನಟ, ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಜನ್ಮದಿನ. ಕನ್ನಡ , ಕರುನಾಡು ಮತ್ತು ಕನ್ನಡಿಗರೆಂದರೆ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಡಾ. ರಾಜ್ ಅವರ ಮೇಲೆ ಕನ್ನಡಿಗರು ಅಪಾರವಾದ ಗೌರವ ಮತ್ತು ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ. ಏಪ್ರಿಲ್ 24 ಬಂತೆಂದರೆ ಸಾಕು ಹಬ್ಬದ ರೀತಿಯಲ್ಲಿ ಅಣ್ಣಾವ್ರ ಹುಟ್ಟುಹಬ್ಬವನ್ನು ಕನ್ನಡಿಗರು ಆಚರಿಸಿ ಸಂಭ್ರಮಿಸುತ್ತಾರೆ.
ಇಂದು ಕನ್ನಡಿಗರು ಅಣ್ಣಾವ್ರ 92ನೇ ಹುಟ್ಟುಹಬ್ಬವನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನವಿಭಿನ್ನ ಪೋಸ್ಟ್ ಮಾಡುವ ಮೂಲಕ ಆಚರಿಸಿ ಸಂಭ್ರಮಿಸುತ್ತಿದ್ದಾರೆ. ಈ ಸಂಭ್ರಮಾಚರಣೆಗೆ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಸೇರಿಕೊಂಡಿದೆ. ಅಣ್ಣಾವ್ರ ಹುಟ್ಟುಹಬ್ಬಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ವೀಟ್ ಮಾಡುವ ಮೂಲಕ ಶುಭಾಶಯವನ್ನು ಕೋರಿದೆ, ವಿಶೇಷವೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕನ್ನಡದಲ್ಲಿ ಟ್ವೀಟ್ ಮಾಡಿರುವುದು.
"ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ." ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರ 92ನೇ ಜನ್ಮಮಹೋತ್ಸವದ ನೆನಪಿನಲ್ಲಿ ಎಂದು ರಾಜ್ ನಟನೆಯ ಬಭ್ರುವಾಹನ ಸಿನಿಮಾದ ಪ್ರಸಿದ್ಧ ಸಂಭಾಷಣೆಯೊಂದನ್ನು ಟ್ವೀಟ್ ಮಾಡಿ ರಾಜ್ ಹುಟ್ಟುಹಬ್ಬಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶುಭ ಕೋರಿದೆ. ಆರ್ಸಿಬಿ ಮಾಡಿರುವ ಈ ಟ್ವೀಟ್ ಗೆ ಕನ್ನಡಿಗರಿಂದ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ಇಂದು ರಾಜ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಕನ್ನಡಿಗರ ಮನ ಗೆದ್ದಿರುವ ಆರ್ಸಿಬಿ ನಾಳೆ ( ಏಪ್ರಿಲ್ 25 ) ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗೆಲ್ಲುವುದರ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮನಸ್ಸನ್ನು ಗೆಲ್ಲುತ್ತಾ ಎಂಬುದನ್ನು ಕಾದು ನೋಡಬೇಕು.