
ಮುಂಬೈ: 2021ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರರ ಹರಾಜಿನ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಮುಂಬೈ ಇಂಡಿಯನ್ಸ್ ಪಾಲಾಗಿದ್ದರು. ಹಾಲಿ ಚಾಂಪಿಯನ್ಸ್ ಎಂಐ, ಅರ್ಜುನ್ ಅವರನ್ನು ಅವರ ಮೂಲ ಬೆಲೆ 20 ಲಕ್ಷ ರೂ.ಗೆ ಖರೀದಿಸಿತ್ತು.
ಅರ್ಜುನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ಸೇರಿಕೊಳ್ಳುತ್ತಲೇ ಎಂಐ ಮತ್ತು ಅರ್ಜುನ್ ಇಬ್ಬರೂ ನೆಟ್ಟಿಗರಿಂದ ಟ್ರೋಲ್ಗೀಡಾಗಿದ್ದರು. ಇದಕ್ಕೆ ಕಾರಣವಿತ್ತು. ಸಚಿನ್ ತೆಂಡೂಲ್ಕರ್ ಹಿಂದೆ ಮುಂಬೈ ಇಂಡಿಯನ್ಸ್ ನಾಯಕರಾಗಿದ್ದರು. ಹೀಗಾಗಿ ತಂದೆಯ ಪ್ರಭಾವದಿಂದ ಅರ್ಜುನ್ ಅವರನ್ನು ಮುಂಬೈ ಖರೀದಿಸಿದೆ ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದರು.

ತಮ್ಮ ಅರ್ಜುನ್ಗೆ ನೆಟ್ಟಿಗರು 'ನೆಪೊಟಿಸಮ್' ಟ್ರೋಲ್ ಮಾಡುತ್ತಿರುವುದಕ್ಕೆ ಅರ್ಜುನ್ ಅಕ್ಕ ಸಾರಾ ತೆಂಡೂಲ್ಕರ್ ತಿರುಗೇಟು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅರ್ಜುನ್ ತಮಾಷೆಗೀಡಾಗುತ್ತಲೇ ಸಾರಾ, ಅರ್ಜುನ್ ಅವರ ಕುರಿತು ಸ್ಫೂರ್ತಿಯ ಸಂದೇಶ ಹಾಕಿಕೊಂಡು ಭಿನ್ನ ರೀತೀಲಿ ಟ್ರೋಲಿಗರಿಗೆ ಎದುರೇಟು ಕೊಟ್ಟಿದ್ದಾರೆ.
'ನಿನ್ನಿಂದ ಈ ಸಾಧನೆಯನ್ನು ಯಾರೂ ನಿನ್ನಿಂದ ದೂರ ತೆಗೆದುಕೊಂಡು ಹೋಗಲಾರರು. ಈ ಸಾಧನೆ ನಿನ್ನದು. ಮುಂಬೈ ಇಂಡಿಯನ್ಸ್ ನಿನ್ನ ರಕ್ತದಲ್ಲೇ ಇದೆ. ನೆಟ್ ಮೂಲಕವೂ ಸಂಸ್ಕರಿಸಲಾಗಿದೆ. ಈಗ 22 ಯಾರ್ಡ್ಸ್ನಲ್ಲಿ ಬಿರುಗಾಳಿ ಬೀಸಲು ನೀನು ಸಜ್ಜಾಗಿದ್ದೀ' ಎಂದು ಸಾರಾ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅರ್ಜುನ್ ಚಿತ್ರದ ಜೊತೆ ಬರೆದುಕೊಂಡಿದ್ದಾರೆ.