ವಾರ್ನರ್ರನ್ನು ನಾಯಕತ್ವದಿಂದ ವಜಾಗೊಳಿಸಿದಾಗ ನಾವ್ಯಾರೂ ತಲೆಕೆಡಿಸಿಕೊಳ್ಳಲಿಲ್ಲ ಎಂದ ಹೈದರಾಬಾದ್ ಆಟಗಾರ

ಏಪ್ರಿಲ್ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಶುರುವಾಗಿದ್ದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು 29 ಪಂದ್ಯಗಳು ಯಶಸ್ವಿಯಾಗಿ ಮುಗಿದ ನಂತರ ಕೊರೊನಾವೈರಸ್ ಕಾರಣದಿಂದ ಮುಂದೂಡಲ್ಪಟ್ಟಿದೆ. ಹೀಗಾಗಿ ತಮ್ಮ ತಮ್ಮ ಮನೆಗಳನ್ನು ಸೇರಿಕೊಂಡಿರುವ ಆಟಗಾರರು ಟೂರ್ನಿಯ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಇದೇ ರೀತಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಶ್ರೀವತ್ಸ್ ಗೋಸ್ವಾಮಿ ಪ್ರಸ್ತುತ ಐಪಿಎಲ್ ಟೂರ್ನಿಯ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಯಶಸ್ವಿ ಪ್ರದರ್ಶನವನ್ನು ನೀಡದೆ ಮುಗ್ಗರಿಸಿದೆ. ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಆಡುತ್ತಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಸಾಲುಸಾಲು ಪಂದ್ಯಗಳಲ್ಲಿ ಸೋತ ನಂತರ ಟೂರ್ನಿಯ ನಡುವೆಯೇ ತಂಡದ ನಾಯಕತ್ವವನ್ನು ವಾರ್ನರ್ ಬದಲು ಕೇನ್ ವಿಲಿಯಮ್ಸನ್ ಹೆಗಲಿಗೆ ಹಾಕಲಾಯಿತು. ಕೇನ್ ವಿಲಿಯಮ್ಸನ್ ನಾಯಕತ್ವದಲ್ಲಿ ಕೂಡ ಜಯದ ಹಾದಿಗೆ ಮರಳದ ಸನ್ ರೈಸರ್ಸ್ ಹೈದರಾಬಾದ್ ತಂಡ ಟೂರ್ನಿಯಲ್ಲಿ ಒಟ್ಟು 7 ಪಂದ್ಯಗಳನ್ನಾಡಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಜಯ ಗಳಿಸಿ 6 ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿದೆ.
ತಂಡದಲ್ಲಾದ ಈ ದಿಢೀರ್ ನಾಯಕತ್ವದ ಬದಲಾವಣೆ ಕುರಿತು ಹೈದರಾಬಾದ್ ತಂಡದ ಆಟಗಾರ ಶ್ರೀವತ್ಸ್ ಗೋಸ್ವಾಮಿ ಮಾತನಾಡಿದ್ದಾರೆ. 'ಡೇವಿಡ್ ವಾರ್ನರ್ ಅವರನ್ನು ನಾಯಕತ್ವದಿಂದ ವಜಾಗೊಳಿಸಿದ್ದು ವಾರ್ನರ್ ಮೇಲೆ ಪರಿಣಾಮ ಬೀರಿರಬಹುದು ಆದರೆ ನಿಜವಾಗಿಯೂ ಬೇರೆ ಯಾವುದೇ ಆಟಗಾರರ ಮೇಲೂ ಸಹ ಅದು ಪರಿಣಾಮವನ್ನು ಬೀರಲಿಲ್ಲ, ತಂಡದಿಂದ ಯಾರನ್ನು ಕೈಬಿಡಲಾಗುತ್ತಿತ್ತು ಮತ್ತು ಯಾರನ್ನು ಸೇರಿಸಿಕೊಳ್ಳಲಾಗುತ್ತಿತ್ತು ಎಂಬುದರ ಬಗ್ಗೆ ನಾವು ನಿಜವಾಗಿಯೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಕೆಲ ದಿನಗಳು ಕಳೆದ ನಂತರ ಡೇವಿಡ್ ವಾರ್ನರ್ ಕೂಡ ಸಂತಸದಿಂದಲೇ ತಂಡದಲ್ಲಿದ್ದರು' ಎಂದು ಶ್ರೀವತ್ಸ್ ಗೋಸ್ವಾಮಿ ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications