
ಕೊರೊನಾವೈರಸ್ ದೇಶದಾದ್ಯಂತ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಆಕ್ಸಿಜನ್ ಮತ್ತು ಬೆಡ್ ಸರಿಯಾದ ಸಮಯಕ್ಕೆ ಸಿಗದ ಕಾರಣ ಹಲವಾರು ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ದೇಶದಲ್ಲಿ ಉಂಟಾಗಿರುವ ಈ ಸಮಸ್ಯೆ ವಿರುದ್ಧ ಹೋರಾಡಲು ಈಗಾಗಲೇ ಐಪಿಎಲ್ ಟೂರ್ನಿಯ ವಿವಿಧ ತಂಡಗಳು ಮತ್ತು ಆಟಗಾರರು ದೇಣಿಗೆಯನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ಇದೀಗ ಈ ಸಾಲಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡ ಕೂಡಾ ಸೇರಿಕೊಂಡಿದೆ. ಕೊರೊನಾ ವಿರುದ್ಧದ ದೇಶದ ಹೋರಾಟಕ್ಕೆ ಸನ್ ರೈಸರ್ಸ್ ಹೈದರಾಬಾದ್ ತಂಡ 30 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡುತ್ತಿದ್ದೇವೆ ಎಂದು ಅಧಿಕೃತವಾಗಿ ತನ್ನ ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲೀಕತ್ವವನ್ನು ದಕ್ಷಿಣ ಭಾರತದ ಟೆಲಿವಿಷನ್ ದೈತ್ಯ ಸನ್ ನೆಟ್ವರ್ಕ್ ವಹಿಸಿಕೊಂಡಿರುವುದು ನಿಮಗೆಲ್ಲಾ ಗೊತ್ತೇ ಇದೆ.
ಇದೇ ಸನ್ ನೆಟ್ವರ್ಕ್ ಸಂಸ್ಥೆ ಇದೀಗ 30 ಕೋಟಿ ರೂಪಾಯಿಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ವಿರುದ್ಧ ಹೋರಾಡಲು ಕೈಗೊಂಡಿರುವ ವಿವಿಧ ಯೋಜನೆಗಳಿಗೆ ಮತ್ತು ಸೋಂಕಿತರಿಗೆ ಆಕ್ಸಿಜನ್ ಹಾಗೂ ಔಷಧಿಗಳನ್ನು ಒದಗಿಸುತ್ತಿರುವ ಎನ್ಜಿಒಗಳಿಗೆ ದೇಣಿಗೆಯ ರೂಪದಲ್ಲಿ ನೀಡಲು ಮುಂದಾಗಿದೆ. ಹಾಗೂ ಈ ಹಿಂದೆ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿಕೆಟ್ಕೀಪರ್ ಶ್ರೀವತ್ಸ್ ಗೋಸ್ವಾಮಿ ಕೂಡಾ ಕೊರೊನಾ ವಿರುದ್ಧದ ಹೋರಾಟಕ್ಕೆ ಆರ್ಥಿಕ ನೆರವನ್ನು ನೀಡಿದ್ದರು.