ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್, ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಹಾಗೂ ರಾಜಸ್ಥಾನ್ ತಂಡದ ನಂತರ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿಕೆಟ್ ಕೀಪರ್ ಶ್ರೀವತ್ಸ್ ಗೋಸ್ವಾಮಿ ಕೂಡ ಆರ್ಥಿಕವಾಗಿ ಕೊರೊನಾ ವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ ಬೆಂಬಲವನ್ನು ನೀಡಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ತಂಡದ ವಿಕೆಟ್ ಕೀಪರ್ ಶ್ರೀವತ್ಸ್ ಗೋಸ್ವಾಮಿ 90,000 ರೂಪಾಯಿಗಳನ್ನು ಆಕ್ಸಿಜನ್ ಖರೀದಿಗೆ ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ಚಾರಿಟಬಲ್ ಟ್ರಸ್ಟ್ವೊಂದಕ್ಕೆ ಶ್ರೀವತ್ಸ್ ಗೋಸ್ವಾಮಿ 90,000 ರೂಪಾಯಿಗಳನ್ನು ನೀಡಿರುವ ಕುರಿತು ಸ್ವತಃ ಟ್ರಸ್ಟ್ ಟ್ವಿಟರ್ ಮೂಲಕ ಟ್ವೀಟ್ ಮಾಡಿ ತಿಳಿಸಿದ್ದು, ಶ್ರೀವತ್ಸ್ ಗೋಸ್ವಾಮಿ ಅವರ ಈ ಸಹಾಯಕ್ಕೆ ಧನ್ಯವಾದವನ್ನು ಸಹ ಸಲ್ಲಿಸಿದೆ.
ಭಾರತದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ದಿನದಿಂದ ದಿನಕ್ಕೆ ಗಂಭೀರ ಪ್ರಭಾವವನ್ನು ಬೀರುತ್ತಿದ್ದು ಆಕ್ಸಿಜನ್ ಕೊರತೆ ಹೆಚ್ಚಿನ ಸಂಖ್ಯೆಯಲ್ಲಿ ಉಂಟಾಗುತ್ತಿದೆ. ಭಾರತ ಕೊರೊನಾ ವೈರಸ್ನಿಂದ ಎದುರಿಸುತ್ತಿರುವ ಕಷ್ಟವನ್ನು ನೋಡಿ ಕ್ರಿಕೆಟಿಗರು ಸಹಾಯ ಹಸ್ತಗಳನ್ನು ಚಾಚುತ್ತಿದ್ದಾರೆ. ಪ್ಯಾಟ್ ಕಮಿನ್ಸ್ 37 ಲಕ್ಷ, ಬ್ರೆಟ್ ಲೀ ಒಂದು ಬಿಟ್ ಕಾಯಿನ್, ರಾಜಸ್ಥಾನ್ ರಾಯಲ್ಸ್ ತಂಡ 7.5 ಕೋಟಿ ಹಾಗೂ ಶ್ರೀವತ್ಸ್ ಗೋಸ್ವಾಮಿ 90 ಸಾವಿರ, ಹೀಗೆ ಸಾಲು ಸಾಲು ಕ್ರಿಕೆಟಿಗರು ಆರ್ಥಿಕ ಸಹಾಯ ಮಾಡುವುದರ ಮೂಲಕ ಭಾರತಕ್ಕೆ ಬೆಂಬಲ ನೀಡುತ್ತಿದ್ದು ಈ ಪಟ್ಟಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉದ್ದಕ್ಕೆ ಬೆಳೆಯುವ ಸಾಧ್ಯತೆಯಿದೆ.
ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಶ್ರೀವತ್ಸ್ ಗೋಸ್ವಾಮಿ ಯಾವುದೇ ಪಂದ್ಯವನ್ನು ಆಡಿಲ್ಲ. ತಾವು ದೇಣಿಗೆ ಮಾಡಿದ ನಂತರ ಟ್ವಿಟರ್ ಖಾತೆಯ ಮೂಲಕ ನೀವೂ ಕೂಡ ನಿಮ್ಮ ಕೈಲಾದಷ್ಟು ಸಹಾಯವನ್ನು ಮಾಡಿ ಎಂದು ತಮ್ಮ ಅನುಯಾಯಿಗಳಲ್ಲಿ ಮತ್ತು ಕ್ರೀಡಾಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.