ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಉತ್ತಮ ಪ್ರದರ್ಶನವನ್ನು ನೀಡುತ್ತಿಲ್ಲ. ಸಾಲು ಸಾಲು ಸೋಲಿನಿಂದ ಕಂಗೆಟ್ಟ ಸನ್ ರೈಸರ್ಸ್ ಹೈದರಾಬಾದ್ ತಂಡದ ಮ್ಯಾನೇಜ್ಮೆಂಟ್ ನಾಯಕನನ್ನೇ ಬದಲಿಸುವ ತೀರ್ಮಾನ ತೆಗೆದುಕೊಂಡಿತು. ಡೇವಿಡ್ ವಾರ್ನರ್ ನಾಯಕತ್ವದಲ್ಲಿ 6 ಪಂದ್ಯಗಳನ್ನಾಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಕೇವಲ ಒಂದು ಪಂದ್ಯದಲ್ಲಿ ಜಯಗಳಿಸಿ 5 ಪಂದ್ಯಗಳಲ್ಲಿ ಮುಗ್ಗರಿಸಿತ್ತು. ಡೇವಿಡ್ ವಾರ್ನರ್ ಅವರ ಕಳಪೆ ನಾಯಕತ್ವದಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಸಾಲು ಸಾಲು ಪಂದ್ಯಗಳನ್ನು ಕೈಚೆಲ್ಲುತ್ತಿದೆ ಎಂಬ ರೀತಿ ನಾಯಕತ್ವವನ್ನು ಡೇವಿಡ್ ವಾರ್ನರ್ರಿಂದ ಕಸಿದು ಕೇನ್ ವಿಲಿಯಮ್ಸನ್ ಹೆಗಲಿಗೆ ಹಾಕಲಾಯಿತು.
ಆದರೆ ಕೇನ್ ವಿಲಿಯಮ್ಸನ್ ನಾಯಕತ್ವದಲ್ಲಿ ಕೂಡ ಸನ್ ರೈಸರ್ಸ್ ಹೈದರಾಬಾದ್ ತಂಡದ ಸೋಲಿನ ಯಾನ ಮುಂದುವರಿದಿದೆ. ಭಾನುವಾರ (ಮೇ 2) ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 55 ರನ್ಗಳ ಸೋಲುಕಂಡಿತು. ಸತತ ಸೋಲಿನ ಕಾರಣದಿಂದ ಡೇವಿಡ್ ವಾರ್ನರ್ ಅವರನ್ನು ನಾಯಕ ಸ್ಥಾನದಿಂದ ವಜಾಗೊಳಿಸಿ ಕೇನ್ ವಿಲಿಯಮ್ಸನ್ ಅವರಿಗೆ ನಾಯಕನ ಜವಾಬ್ದಾರಿ ನೀಡಲಾಯಿತು ಆದರೆ ಗೆಲುವು ಮಾತ್ರ ಸಿಗಲೇ ಇಲ್ಲ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಸೋಲಿನ ನಂತರ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಟೀಕೆಗಳ ಸುರಿಮಳೆಯೇ ಸುರಿದಿದ್ದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಡೇವಿಡ್ ವಾರ್ನರ್ ಬದಲು ಮೊಹಮ್ಮದ್ ನಬಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು ಆದರೆ ನಬಿಗೆ ಸರಿಯಾಗಿ ಬೌಲಿಂಗ್ ನೀಡಲಿಲ್ಲ ಮತ್ತು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಕಳುಹಿಸಲಾಯಿತು, ಇದರಿಂದ ನಬಿ ಕಡೆಯಿಂದ ತಂಡಕ್ಕೆ ಯಾವುದೇ ರೀತಿಯ ಲಾಭ ಸಿಗಲಿಲ್ಲ.
ಹಾಗೂ 11 ಓವರ್ ಮುಗಿಯುವಷ್ಟರಲ್ಲೇ ರಶೀದ್ ಖಾನ್ ಅವರ 4 ಓವರ್ಗಳನ್ನೂ ಹಾಕಿಸಿ ಮುಗಿಸಲಾಯಿತು, ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದ ರಶೀದ್ ಖಾನ್ ಅವರ ಪಾಲಿನ ಓವರ್ಗಳನ್ನು ಅಷ್ಟು ಬೇಗ ಮುಗಿಸುವ ಅವಶ್ಯಕತೆಯೇನಿತ್ತು? ನಿಜಕ್ಕೂ ಕೇನ್ ವಿಲಿಯಮ್ಸನ್ ಅವರ ಈ ನಿರ್ಧಾರಗಳು ಗೊಂದಲಮಯವಾಗಿದ್ದವು, ಸನ್ ರೈಸರ್ಸ್ ಹೈದರಾಬಾದ್ ತಂಡ ನಾಯಕನನ್ನು ಬದಲಾಯಿಸಿಕೊಂಡಿತು ಆದರೆ ಅದೃಷ್ಟವನ್ನು ಬದಲಾಯಿಸಿಕೊಳ್ಳಲು ಆಗಲಿಲ್ಲ ಎಂದು ಟೀಕಿಸಿದರು.