
ಐಪಿಎಲ್ 14ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 10 ರನ್ಗಳಿಂದ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಇಯಾನ್ ಮಾರ್ಗನ್ ಬಳಗ ಟೂರ್ನಿಯಲ್ಲಿ ಶುಭಾರಂಭವನ್ನು ಮಾಡಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ನೀಡಿದ 188 ರನ್ಗಳ ಗುರಿಯನ್ನು ಬೆನ್ನನಟ್ಟಿದ ಡೇವಿಡ್ ವಾರ್ನರ್ ಬಳಗ ನಿಗದಿತ 20 ಓವರ್ಗಳಲ್ಲಿ 177 ರನ್ಗಳಿಸಲು ಮಾತ್ರ ಶಕ್ತವಾಯಿತು. ಕನ್ನಡಿಗ ಮನೀಶ್ ಪಾಂಡೆ ಕಡೆಯ ತನಕ ಹೋರಾಡಿದರೂ ತಂಡಕ್ಕೆ ಗೆಲುವು ನೀಡಲು ಸಾಧ್ಯವಾಗಲಿಲ್ಲ. 44 ಎಸೆತಗಳಲ್ಲಿ 61 ರನ್ಗಳಿಸಿದ ಮನೀಶ್ ಪಾಂಡೆ ಅಜೇಯವಾಗಿ ಉಳಿದರು.
ಟಾಸ್ ಸೋತ ಕೊಲ್ಕತ್ತಾ ನೈಟ್ ರೈಡರ್ಸ್ ಮೊದಲಿಗೆ ಬ್ಯಾಟಿಂಗ್ ನಡೆಸಿತು. ನಿತೀಶ್ ರಾಣಾ ಹಾಗೂ ರಾಹುಲ್ ತ್ರಿಪಾಠಿ ಅವರ ಭರ್ಜರಿ ಆಟದಿಂದಾಗಿ ಕೆಕೆಆರ್ ದೊಡ್ಡ ಮೊತ್ತವನ್ನು ಗಳಿಸಿತು. ಈ ಇಬ್ಬರು ಕೂಡ ತಲಾ ಅರ್ಧ ಶತಕ ಬಾರಿಸಿ ಮಿಂಚಿದರು. ಅಂತಿಮ ಹಂತದಲ್ಲಿ ದಿನೇಶ್ ಕಾರ್ತಿಕ್ ಕೂಡ ಸ್ಪೋಟಕ ಆಟ ಪ್ರದರ್ಶಿಸಿ ತಂಡ 187 ರನ್ ಗಳಿಸಲು ಕಾರಣರಾದರು.
ಕೊಲ್ಕತ್ತಾ ತಂಡ ನೀಡಿದ ಈ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಆರಂಭಿಕರಾದ ನಾಯಕ ಡೇವಿಡ್ ವಾರ್ನರ್ ಹಾಗೂ ವೃದ್ಧಿಮಾನ್ ಸಾಹಾ 10 ರನ್ಗಳಿಸುವಷ್ಟರಲ್ಲಿ ಔಟಾದರು. ಆದರೆ ಬಳಿಕ ಜೊತೆಗೂಡಿದ ಜಾನಿ ಬೈರ್ಸ್ಟೋವ್ ಹಾಗೂ ಮನೀಶ್ ಪಾಂಡೆ ತಲಾ ಅರ್ಧ ಶತಕ ಸಿಡಿಸಿ ಜವಾಬ್ಧಾರಿಯುತ ಆಟವನ್ನು ಪ್ರದರ್ಶಿಸುತ್ತಾ ಸಾಗಿದರು.
ಆದರೆ ರನ್ ಸರಾಸರಿಯನ್ನು ಕಾಪಾಡಿಕೊಳ್ಳಲು ಹೈದರಾಬಾದ್ ತಂಡ ವಿಫಲವಾಗಿ ಅಂತಿಮ ಹಂತದಲ್ಲಿ ಒತ್ತಡಕ್ಕೆ ಬಿತ್ತು. ಅಂತಿಮವಾಗಿ ಸನ್ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 177 ರನ್ಗಳಿಸಲಷ್ಟೇ ಶಕ್ತವಾಯಿತು.