
ಕಳೆದ ಬಾರಿಯ ಆವೃತ್ತಿಯ ಐಪಿಎಲ್ನಲ್ಲಿ ಟಿ ನಟರಾಜನ್ ನೀಡಿದ ಶ್ರೇಷ್ಠ ಪ್ರದರ್ಶನ ಅವರ ವೃತ್ತಿ ಜೀವನವನ್ನೇ ಬದಲಾಯಿಸಿ ಬಿಟ್ಟಿತು. ಸನ್ರೈಸರ್ಸ್ ಹೈದರಾಬಾದ್ ಪರವಾಗಿ ನೀಡಿದ ಪ್ರದರ್ಶನದ ಕಾರಣದಿಂದಾಗಿ ನಟರಾಜನ್ ಟೀಮ್ ಇಂಡಿಯಾದ ಮೂರು ಮಾದರಿಯ ಕ್ರಿಕೆಟ್ಗೂ ಪದಾರ್ಪಣೆ ಮಾಡಿ ಅದ್ಭುತ ರೀತಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕನ್ನು ಆರಂಭಿಸಿದರು. ಆದರೆ ಈ ಬಾರಿಯ ಐಪಿಎಲ್ನಲ್ಲಿ ನಟರಾಜನ್ ಆರಂಭದ ಎರಡು ಪಂದ್ಯಗಳಿಗಷ್ಟೇ ಸೀಮಿತರಾದರು. ಗಾಯಗೊಂಡ ಕಾರಣ ಇಡೀ ಟೂರ್ನಿಯಿಂದ ನಟರಾಜನ್ ಹೊರಗುಳಿಯಬೇಕಾಗಿದೆ.
ಮೊಣಕಾಲಿನ ನೋವಿಗೆ ತುತ್ತಾಗಿರುವ ಟಿ ನಟರಾಜನ್ ಅವರು ಈ ಬಾರಿಯ ಐಪಿಎಲ್ನ ಉಳಿದ ಎಲ್ಲಾ ಪಂದ್ಯಗಳಿಂದಲೂ ಹೊರಗುಳಿಯಲಿದ್ದಾರೆ. ಈ ಹಿನ್ನಲೆಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಕ್ಯಾಂಪ್ಅನ್ನು ನಟರಾಜನ್ ತೊರೆದಿದ್ದಾರೆ. ಇದಕ್ಕೂ ಮುನ್ನ ತಂಡದಿಂದ ಹೊರಗುಳಿಯುತ್ತಿರುವ ಬಗ್ಗೆ ನಟರಾಜನ್ ಬೇಸರದ ಮಾತುಗಳನ್ನು ಆಡಿದ್ದಾರೆ.
"ನಾನು ನಟರಾಜನ್, ಮುಂದಿನ ಐಪಿಎಲ್ ಪಂದ್ಯಗಳಿಂದ ನಾನು ಆಡಲು ಸಾಧ್ಯವಾಗದಿರುವುದಕ್ಕೆ ಬೇಸರವಾಗುತ್ತಿದೆ. ಕಳೆದ ಬಾರಿಯ ಐಪಿಎಲ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಂತರ ಹಾಗೂ ಭಾರಿಯ ಕ್ರಿಕೆಟ್ ತಂಡದ ಪರವಾಗಿ ಆಡಿದ ನಂತರ ನನ್ನ ನಿರೀಕ್ಷೆ ಹೆಚ್ಚಾಗಿತ್ತು"
"ಆದರೆ ದುರಾದೃಷ್ಟವಶಾತ್ ನಾನು ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಹಾಗಾಗಿ ಈ ಆವೃತ್ತಿಯನ್ನು ನಾನು ಕಳೆದುಕೊಳ್ಳಲಿದ್ದೇನೆ. ಎಸ್ಆರ್ಹೆಚ್ ಕುಟುಂಬ, ಸಹಾಯಕ ಸಿಬ್ಬಂದಿಗಳು ಎಲ್ಲರಿಗೂ ನಾನು ತಿಂಬಾ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅವರು ನನಗೆ ತುಂಬಾ ಬೆಂಬಲ ಹಾಗೂ ಪ್ರೋತ್ಸಾಹವನ್ನು ನೀಡುತ್ತಾರೆ"
"ಈ ಆವೃತ್ತಿಯಲ್ಲಿ ಎಸ್ಆರ್ಹೆಚ್ ಕುಟುಂಬವನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ತುಂಬಾ ಬೇಸರವಾಗುತ್ತಿದೆ. ಇದಕ್ಕಿಂತ ಹೆಚ್ಚು ಏನೂ ಹೇಳಲೂ ಸಾಧ್ಯವಾಗುತ್ತಿಲ್ಲ. ಮುಂದಿನ ಎಲ್ಲಾ ಪಂದ್ಯಗಳನ್ನು ಸನ್ರೈಸರ್ಸ್ ಗೆಲ್ಲುತ್ತಾ ಸಾಗಲಿ ಎಂದು ಹಾರೈಸುತ್ತೇನೆ" ಎಂದು ಟಿ ನಟರಾಜನ್ ವಿಡಿಯೋ ಸಂದೇಶದಲ್ಲಿ ಹೇಳಿಕೊಂಡಿದ್ದಾರೆ.