
ಸದ್ಯ ಯುಎಇಯಲ್ಲಿ ಮುಂದುವರಿಯುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಅಂದುಕೊಂಡಿದ್ದು ಯಾವುದೂ ಕೂಡ ನಡೆಯುತ್ತಿಲ್ಲ ಎಂದೆನಿಸುತ್ತದೆ. ಈ ಬಾರಿಯ ಐಪಿಎಲ್ ಟೂರ್ನಿ ಭಾರತದಲ್ಲಿ ಆರಂಭವಾದಾಗಲೂ ಸಹ ಮುಂಬೈ ಇಂಡಿಯನ್ಸ್ ತಂಡ ಈ ಹಿಂದಿನ ಐಪಿಎಲ್ ಟೂರ್ನಿಗಳಲ್ಲಿ ತೋರಿಸುತ್ತಿದ್ದಂತಹ ಅತ್ಯದ್ಭುತ ಪ್ರದರ್ಶನವನ್ನು ತೋರಿಸುವಲ್ಲಿ ವಿಫಲವಾಗಿ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿ ಕೊರೋನಾವೈರಸ್ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡ ಸಮಯಕ್ಕೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಳ್ಳಲಷ್ಟೇ ಶಕ್ತವಾಗಿತ್ತು.
ಯುಎಇಯಲ್ಲಿ ಮುಂದುವರಿಯುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 39ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಡಿದವು. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು 54 ರನ್ಗಳ ಅಂತರದಿಂದ ಸೋಲಿಸಿ ಭರ್ಜರಿ ಗೆಲುವನ್ನು ಸಾಧಿಸಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡು ಬೆಂಗಳೂರು ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ನೀಡಿದರು. ಹೀಗೆ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅರ್ಧಶತಕಗಳ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ಇನ್ನು ಬೆಂಗಳೂರು ತಂಡ ನೀಡಿದ 166 ರನ್ಗಳ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭವನ್ನು ಪಡೆದುಕೊಂಡ ಹೊರತಾಗಿಯೂ 18.1 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 111 ರನ್ ಗಳಿಸಿತು.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸ್ಮನ್ಗಳು ಕಳಪೆ ಪ್ರದರ್ಶನ ನೀಡುವುದರ ಮೂಲಕ ಕಡಿಮೆ ಮೊತ್ತಗಳಿಗೆ ವಿಕೆಟ್ ಒಪ್ಪಿಸಿ ಸಾಲುಸಾಲಾಗಿ ಪೆವಿಲಿಯನ್ ಪರೇಡ್ ನಡೆಸಿದರು. ಅದರಲ್ಲಿಯೂ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಭಾರತ ತಂಡದ ಪರ ಸ್ಥಾನವನ್ನು ಪಡೆದುಕೊಂಡಿರುವ ಪ್ರತಿಭಾವಂತ ಆಟಗಾರ ಇಶಾನ್ ಕಿಶನ್ 12 ಎಸೆತಗಳಿಗೆ 9 ರನ್ ಗಳಿಸಿ ಔಟ್ ಆಗಿ ಟೂರ್ನಿಯಲ್ಲಿ ತಮ್ಮ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ. ಹೌದು ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಇಶಾನ್ ಕಿಶಾನ್ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡದೇ ರನ್ ಗಳಿಸಲು ಪರದಾಡುತ್ತಿದ್ದಾರೆ.
ಹೀಗಾಗಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ತಮ್ಮ ಬ್ಯಾಟಿಂಗ್ ಮುಗಿದ ಬಳಿಕ ಇಶಾನ್ ಕಿಶಾನ್ ಕಣ್ಣೀರಿಡುತ್ತಾ ಕುಳಿತಿದ್ದರು. ಹೀಗೆ ದುಃಖದಲ್ಲಿದ್ದ ಇಶಾನ್ ಕಿಶಾನ್ ಬಳಿ ತೆರಳಿದ ವಿರಾಟ್ ಕೊಹ್ಲಿ ಕೆಲಕಾಲ ಆತನ ಜೊತೆ ಮಾತನಾಡುತ್ತಾ ಸಮಾಧಾನ ಮಾಡಿದ್ದಾರೆ. ಹೌದು ಇಶಾನ್ ಕಿಶನ್ ಬಳಿ ತೆರಳಿದ ವಿರಾಟ್ ಕೊಹ್ಲಿ ಆತನ ಜೊತೆ ಮೈದಾನದಲ್ಲಿ ಕೆಲ ದೂರದವರೆಗೆ ಹೆಜ್ಜೆ ಹಾಕುತ್ತಾ ಆತನ ಹೆಗಲ ಮೇಲೆ ಕೈಹಾಕಿ ಸಮಾಧಾನ ಮಾಡಿದ್ದಾರೆ.
ಹೀಗೆ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ತನ್ನ ಸಹ ಆಟಗಾರನಿಗೆ ಸಮಾಧಾನ ಮಾಡಿರುವ ಪರಿಯನ್ನು ಕಂಡ ಕ್ರಿಕೆಟ್ ಅಭಿಮಾನಿಗಳು ಕೊಹ್ಲಿ ಕ್ರೀಡಾಸ್ಫೂರ್ತಿಗೆ ತಲೆಬಾಗಿದ್ದಾರೆ. ತನ್ನ ಅಂತಾರಾಷ್ಟ್ರೀಯ ತಂಡದ ಯುವ ಆಟಗಾರ ಚಿಂತೆಯಲ್ಲಿದ್ದಾಗ ಸಮಯವನ್ನು ಕೊಟ್ಟು ಆತನನ್ನು ಸಮಾಧಾನಪಡಿಸಿದ ಕೊಹ್ಲಿಗೆ ನೆಟ್ಟಿಗರು ಬಹುಪರಾಕ್ ಎಂದಿದ್ದಾರೆ.
ಅಷ್ಟೇ ಅಲ್ಲದೆ ಪಂದ್ಯ ಮುಗಿದ ನಂತರ ಮಂಕಾಗಿ ಕುಳಿತಿದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಬಳಿಯೂ ತೆರಳಿ ವಿರಾಟ್ ಕೊಹ್ಲಿ ಅಲ್ಲಿಯೂ ಕೂಡ ರೋಹಿತ್ ಶರ್ಮಾ ಜತೆ ಸಂತಸದ ಕ್ಷಣಗಳನ್ನು ಕಳೆದಿದ್ದು, ತಮ್ಮಿಬ್ಬರ ನಡುವೆ ಯಾವುದೇ ರೀತಿಯ ಬಿರುಕುಗಳು ಇಲ್ಲ ಎಂಬುದನ್ನು ಬಿಚ್ಚಿಟ್ಟಿದ್ದಾರೆ.