'ಎಬಿ ಇದ್ದರೂ ಆತ ಔಟ್ ಆದಾಗಲೇ ಪಂದ್ಯ ನಮ್ಮ ಕೈ ತಪ್ಪಿತ್ತು'; SRH ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ಕೊಹ್ಲಿ

ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಧಿಕೃತವಾಗಿ ಪ್ಲೇಆಫ್ ಸುತ್ತನ್ನು ಪ್ರವೇಶಿಸಿದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿತ್ತು. ಹೀಗಾಗಿ ಲೀಗ್ ಹಂತದಲ್ಲಿನ ತನ್ನ ಕೊನೆಯ 2 ಪಂದ್ಯಗಳನ್ನು ಗೆಲ್ಲುವುದರ ಮೂಲಕ ಅಂಕಪಟ್ಟಿಯಲ್ಲಿ ಏರಿಕೆಯನ್ನು ಕಂಡು ದ್ವಿತೀಯ ಅಥವಾ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ವಾಲಿಫೈಯರ್ 1 ಪಂದ್ಯದಲ್ಲಿ ಸೆಣಸಾಟ ನಡೆಸುತ್ತಿತ್ತು. ಹೀಗೆ ದ್ವಿತೀಯ ಅಥವಾ ಪ್ರಥಮ ಸ್ಥಾನವನ್ನು ಪಡೆದುಕೊಂಡು ಕ್ವಾಲಿಫೈಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭಾಗವಹಿಸಿ ಸೋತರೂ ಮತ್ತೊಂದು ಪಂದ್ಯವನ್ನಾಡಿ, ಅದರಲ್ಲಿ ಗೆದ್ದು ಫೈನಲ್ ಪ್ರವೇಶಿಸುವ ಅವಕಾಶವಿತ್ತು.
ಆದರೆ ಈ ಅವಕಾಶದಿಂದ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಹು ದೂರ ಸರಿದಿದೆ. ಹೌದು, ಅಕ್ಟೋಬರ್ 6ರ ಬುಧವಾರದಂದು ಅಬುಧಾಬಿಯ ಶೈಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸೆಣಸಾಟ ನಡೆಸಿತು. ಈ ಪಂದ್ಯದಲ್ಲಿ ಗೆದ್ದು ಹಾಗೂ ಮುಂದಿನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯವನ್ನು ಗೆಲ್ಲುವುದರ ಮೂಲಕ ಅಂಕಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏರಿಕೆಯನ್ನು ಕಾಣಬಹುದಿತ್ತು. ಆದರೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಅಂತಿಮ ಘಟ್ಟದಲ್ಲಿ ಪಂದ್ಯವನ್ನು ಸೋಲುವುದರ ಮೂಲಕ ಅಂಕಪಟ್ಟಿಯಲ್ಲಿ ಲೀಗ್ ಪಂದ್ಯಗಳು ಅಂತ್ಯವಾಗುವ ಹೊತ್ತಿಗೆ ತೃತೀಯ ಸ್ಥಾನದಲ್ಲಿಯೇ ಉಳಿದುಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದು ಎಲಿಮಿನೇಟರ್ ಪಂದ್ಯಕ್ಕೆ ಪ್ರವೇಶ ಪಡೆಯಲಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಜೇಸನ್ ರಾಯ್ ಮತ್ತು ಕೇನ್ ವಿಲಿಯಮ್ಸನ್ ಜವಾಬ್ದಾರಿಯುತ ಆಟದ ನೆರವಿನಿಂದ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತು. ಇನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ನೀಡಿದ್ದ 142 ರನ್ಗಳ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸುಲಭವಾಗಿ ಬೆನ್ನಟ್ಟಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅಂತಿಮವಾಗಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4 ರನ್ಗಳ ಅಂತರದ ಸೋಲನ್ನು ಅನುಭವಿಸಿತು.
ಹೀಗೆ ಗೆಲ್ಲಬಹುದಾದಂತಹ ಪಂದ್ಯವನ್ನು ಸೋತ ಬಳಿಕ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಸೋಲಿಗೆ ಕಾರಣವಾದ ಅಂಶಗಳನ್ನು ಬಿಚ್ಚಿಟ್ಟಿದ್ದು ಈ ಕೆಳಕಂಡಂತೆ ಪಂದ್ಯದ ಕುರಿತು ಮಾತನಾಡಿದ್ದಾರೆ.

ಆರಂಭದಲ್ಲಿಯೇ ವಿಕೆಟ್ಗಳನ್ನು ಕಳೆದುಕೊಂಡೆವು
ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಸೋಲಿನ ಕುರಿತು ಮಾತನಾಡಿದ ವಿರಾಟ್ ಕೊಹ್ಲಿ ಆರಂಭದಲ್ಲಿಯೇ ತಂಡದ ವಿಕೆಟ್ಗಳನ್ನು ಕಳೆದುಕೊಂಡಿದ್ದು ಸೋಲಿಗೆ ಕಾರಣವಾದ ಅಂಶಗಳಲ್ಲೊಂದು ಎಂದು ಹೇಳಿಕೆ ನೀಡಿದ್ದಾರೆ. ಹೌದು, ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲನೇ ಓವರ್ನಲ್ಲಿಯೇ 5 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು, ನಂತರ ಡೇನಿಯಲ್ ಕ್ರಿಸ್ಟಿಯನ್ 1 ಮತ್ತು ಶ್ರೀಕರ್ ಭರತ್ 12 ರನ್ ಗಳಿಸಿ ಔಟ್ ಆಗುವುದರ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6.5 ಓವರ್ಗಳಲ್ಲಿ 38 ರನ್ಗಳಿಗೆ 3 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಆತ ರನ್ ಔಟ್ ಆದಾಗಲೇ ಪಂದ್ಯ ನಮ್ಮ ಕೈತಪ್ಪಿತ್ತು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವೇಗವಾಗಿ 3 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ತಂಡಕ್ಕೆ ಆಸರೆಯಾದದ್ದು ಗ್ಲೆನ್ ಮ್ಯಾಕ್ಸ್ವೆಲ್. ಹೌದು, 25 ಎಸೆತಗಳಿಗೆ 40 ರನ್ ಬಾರಿಸಿದ ಗ್ಲೆನ್ ಮ್ಯಾಕ್ಸ್ವೆಲ್ ಬೇಡದ ರನ್ ಕದಿಯಲು ಹೋಗಿ ರನ್ ಔಟ್ ಆದರು. ಈ ಕುರಿತು ಮಾತನಾಡಿದ ವಿರಾಟ್ ಕೊಹ್ಲಿ 'ವೇಗವಾಗಿ ರನ್ ಗಳಿಸುತ್ತಾ ಪಂದ್ಯವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದ ಗ್ಲೆನ್ ಮ್ಯಾಕ್ಸ್ವೆಲ್ ರನ್ ಔಟ್ ಆಗಿದ್ದೇ ಪಂದ್ಯ ತಿರುವು ಪಡೆದುಕೊಳ್ಳಲು ಕಾರಣವಾಯಿತು' ಎಂದು ಹೇಳಿಕೆ ನೀಡಿದ್ದಾರೆ.

ಎಬಿ ಡಿವಿಲಿಯರ್ಸ್ ಆಟದ ಕುರಿತು ವಿರಾಟ್ ಕೊಹ್ಲಿ ಮಾತು
ಗ್ಲೆನ್ ಮ್ಯಾಕ್ಸ್ವೆಲ್ ರನ್ ಔಟ್ ಆದಾಗಲೇ ಪಂದ್ಯ ನಮ್ಮ ಕೈತಪ್ಪಿತು ಎಂದು ಹೇಳಿಕೆ ನೀಡಿರುವ ವಿರಾಟ್ ಕೊಹ್ಲಿ ಎಬಿ ಡಿವಿಲಿಯರ್ಸ್ ಪ್ರದರ್ಶನದ ಕುರಿತು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. 'ಎಬಿ ಡಿವಿಲಿಯರ್ಸ್ ಕಣದಲ್ಲಿದ್ದಾಗ ತಂಡ ಪಂದ್ಯದಿಂದ ಹೊರ ಬಿದ್ದಿದೆ ಎಂದು ಹೇಳುವ ಹಾಗೇ ಇಲ್ಲ ನಿಜ. ಆದರೆ ಇಂತಹ ಪಂದ್ಯಗಳಲ್ಲಿ ಈಗಾಗಲೇ ಪಿಚ್ಗೆ ಹೊಂದಿಕೊಂಡು ವೇಗದ ರನ್ ಗಳಿಸುತ್ತಿರುವ ಬ್ಯಾಟ್ಸ್ಮನ್ ಇದ್ದರೆ ಮಾತ್ರ ಗೆಲುವು ನಮ್ಮದಾಗುತ್ತಿತ್ತು' ಎಂದು ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಪಿಚ್ಗೆ ಹೊಂದಿಕೊಂಡು ಉತ್ತಮ ರನ್ ಕಲೆಹಾಕುತ್ತಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಕಣದಲ್ಲಿ ಇದ್ದಿದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವನ್ನು ಸಾಧಿಸುತ್ತಿತ್ತು ಆದರೆ ಎಬಿಡಿ ವಿಲಿಯರ್ಸ್ ಅವರಿಗೆ ಪಿಚ್ಗೆ ಹೊಂದಿಕೊಳ್ಳಲು ಸರಿಯಾದ ಸಮಯ ಸಿಗದೇ ಇದ್ದರಿಂದ ಅವರಿಂದ ಪಂದ್ಯ ಜಯ ಗಳಿಸುವ ಪ್ರದರ್ಶನ ಬರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೂ 9 ಎಸೆತಗಳಲ್ಲಿ 14 ರನ್ ಬಾರಿಸಿದ ಶಹಬಾಜ್ ಅಹ್ಮದ್ ಕುರಿತೂ ಕೂಡ ವಿರಾಟ್ ಕೊಹ್ಲಿ ಪ್ರಶಂಸೆಯನ್ನು ವ್ಯಕ್ತಪಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications