
ಆರಂಭದಲ್ಲಿಯೇ ವಿಕೆಟ್ಗಳನ್ನು ಕಳೆದುಕೊಂಡೆವು
ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಸೋಲಿನ ಕುರಿತು ಮಾತನಾಡಿದ ವಿರಾಟ್ ಕೊಹ್ಲಿ ಆರಂಭದಲ್ಲಿಯೇ ತಂಡದ ವಿಕೆಟ್ಗಳನ್ನು ಕಳೆದುಕೊಂಡಿದ್ದು ಸೋಲಿಗೆ ಕಾರಣವಾದ ಅಂಶಗಳಲ್ಲೊಂದು ಎಂದು ಹೇಳಿಕೆ ನೀಡಿದ್ದಾರೆ. ಹೌದು, ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲನೇ ಓವರ್ನಲ್ಲಿಯೇ 5 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು, ನಂತರ ಡೇನಿಯಲ್ ಕ್ರಿಸ್ಟಿಯನ್ 1 ಮತ್ತು ಶ್ರೀಕರ್ ಭರತ್ 12 ರನ್ ಗಳಿಸಿ ಔಟ್ ಆಗುವುದರ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6.5 ಓವರ್ಗಳಲ್ಲಿ 38 ರನ್ಗಳಿಗೆ 3 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಆತ ರನ್ ಔಟ್ ಆದಾಗಲೇ ಪಂದ್ಯ ನಮ್ಮ ಕೈತಪ್ಪಿತ್ತು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವೇಗವಾಗಿ 3 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ತಂಡಕ್ಕೆ ಆಸರೆಯಾದದ್ದು ಗ್ಲೆನ್ ಮ್ಯಾಕ್ಸ್ವೆಲ್. ಹೌದು, 25 ಎಸೆತಗಳಿಗೆ 40 ರನ್ ಬಾರಿಸಿದ ಗ್ಲೆನ್ ಮ್ಯಾಕ್ಸ್ವೆಲ್ ಬೇಡದ ರನ್ ಕದಿಯಲು ಹೋಗಿ ರನ್ ಔಟ್ ಆದರು. ಈ ಕುರಿತು ಮಾತನಾಡಿದ ವಿರಾಟ್ ಕೊಹ್ಲಿ 'ವೇಗವಾಗಿ ರನ್ ಗಳಿಸುತ್ತಾ ಪಂದ್ಯವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದ ಗ್ಲೆನ್ ಮ್ಯಾಕ್ಸ್ವೆಲ್ ರನ್ ಔಟ್ ಆಗಿದ್ದೇ ಪಂದ್ಯ ತಿರುವು ಪಡೆದುಕೊಳ್ಳಲು ಕಾರಣವಾಯಿತು' ಎಂದು ಹೇಳಿಕೆ ನೀಡಿದ್ದಾರೆ.

ಎಬಿ ಡಿವಿಲಿಯರ್ಸ್ ಆಟದ ಕುರಿತು ವಿರಾಟ್ ಕೊಹ್ಲಿ ಮಾತು
ಗ್ಲೆನ್ ಮ್ಯಾಕ್ಸ್ವೆಲ್ ರನ್ ಔಟ್ ಆದಾಗಲೇ ಪಂದ್ಯ ನಮ್ಮ ಕೈತಪ್ಪಿತು ಎಂದು ಹೇಳಿಕೆ ನೀಡಿರುವ ವಿರಾಟ್ ಕೊಹ್ಲಿ ಎಬಿ ಡಿವಿಲಿಯರ್ಸ್ ಪ್ರದರ್ಶನದ ಕುರಿತು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. 'ಎಬಿ ಡಿವಿಲಿಯರ್ಸ್ ಕಣದಲ್ಲಿದ್ದಾಗ ತಂಡ ಪಂದ್ಯದಿಂದ ಹೊರ ಬಿದ್ದಿದೆ ಎಂದು ಹೇಳುವ ಹಾಗೇ ಇಲ್ಲ ನಿಜ. ಆದರೆ ಇಂತಹ ಪಂದ್ಯಗಳಲ್ಲಿ ಈಗಾಗಲೇ ಪಿಚ್ಗೆ ಹೊಂದಿಕೊಂಡು ವೇಗದ ರನ್ ಗಳಿಸುತ್ತಿರುವ ಬ್ಯಾಟ್ಸ್ಮನ್ ಇದ್ದರೆ ಮಾತ್ರ ಗೆಲುವು ನಮ್ಮದಾಗುತ್ತಿತ್ತು' ಎಂದು ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಪಿಚ್ಗೆ ಹೊಂದಿಕೊಂಡು ಉತ್ತಮ ರನ್ ಕಲೆಹಾಕುತ್ತಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಕಣದಲ್ಲಿ ಇದ್ದಿದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವನ್ನು ಸಾಧಿಸುತ್ತಿತ್ತು ಆದರೆ ಎಬಿಡಿ ವಿಲಿಯರ್ಸ್ ಅವರಿಗೆ ಪಿಚ್ಗೆ ಹೊಂದಿಕೊಳ್ಳಲು ಸರಿಯಾದ ಸಮಯ ಸಿಗದೇ ಇದ್ದರಿಂದ ಅವರಿಂದ ಪಂದ್ಯ ಜಯ ಗಳಿಸುವ ಪ್ರದರ್ಶನ ಬರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೂ 9 ಎಸೆತಗಳಲ್ಲಿ 14 ರನ್ ಬಾರಿಸಿದ ಶಹಬಾಜ್ ಅಹ್ಮದ್ ಕುರಿತೂ ಕೂಡ ವಿರಾಟ್ ಕೊಹ್ಲಿ ಪ್ರಶಂಸೆಯನ್ನು ವ್ಯಕ್ತಪಡಿಸಿದರು.


Click it and Unblock the Notifications
