ಆರ್ಸಿಬಿ ಹೀನಾಯ ಸೋಲಿಗೆ ಕಾರಣನಾದ ಈತ ಮುಂದೆ ಭಾರತದ ಪ್ರಮುಖ ಆಟಗಾರ ಆಗ್ತಾನೆ ಎಂದ ಕೊಹ್ಲಿ

ಕಳೆದ ಏಪ್ರಿಲ್ ತಿಂಗಳಿನಲ್ಲಿ ಭಾರತ ನೆಲದಲ್ಲಿ ಆರಂಭವಾಗಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊರೋನಾವೈರಸ್ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡು ಯುಎಇಗೆ ಸ್ಥಳಾಂತರಿಸಲ್ಪಟ್ಟಿತ್ತು. ಹೀಗಾಗಿ ಇದೇ ಸೆಪ್ಟೆಂಬರ್ 19ರ ಭಾನುವಾರದಿಂದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ದ್ವಿತೀಯ ಭಾಗ ಆರಂಭವಾಗಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದ್ವಿತೀಯ ಭಾಗದ ತನ್ನ ಮೊದಲನೇ ಪಂದ್ಯವನ್ನು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಪ್ಟೆಂಬರ್ 20ರ ಸೋಮವಾರದಂದು ಅಬುಧಾಬಿಯ ಶೈಖ್ ಝಾಯೆದ್ ಕ್ರೀಡಾಂಗಣದಲ್ಲಿ ಆಡಿದೆ.
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲನೇ ಭಾಗದಲ್ಲಿ 7 ಪಂದ್ಯಗಳನ್ನಾಡಿ 5 ಪಂದ್ಯಗಳಲ್ಲಿ ಜಯಗಳಿಸಿ, ಕೇವಲ 2 ಪಂದ್ಯಗಳಲ್ಲಿ ಮಾತ್ರ ಸೋಲನ್ನು ಅನುಭವಿಸಿದ್ದ ಕೊಹ್ಲಿ ಪಡೆ ಮೇಲೆ ಕ್ರೀಡಾಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇತ್ತು. ಅದರಲ್ಲಿಯೂ ಈ ಬಾರಿಯ ಟೂರ್ನಿಯ ಮೊದಲ ಭಾಗದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 204 ರನ್ಗಳ ದೊಡ್ಡ ಮೊತ್ತವನ್ನು ಕಲೆಹಾಕಿ 38 ರನ್ಗಳ ಭರ್ಜರಿ ಜಯವನ್ನು ಸಾಧಿಸಿತ್ತು. ಹೀಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಬೆಂಗಳೂರು ತಂಡ ಈ ಬಾರಿಯೂ ಉತ್ತಮ ಪ್ರದರ್ಶನ ನೀಡಲಿದೆ ಎಂಬ ನಿರೀಕ್ಷೆ ಇತ್ತು.
ಆದರೆ ಈ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಫಲವಾಗಿದ್ದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಹೀನಾಯವಾಗಿ ಸೋತು ತಲೆ ಬಾಗಿದೆ. ಹೌದು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 92 ರನ್ ಗಳಿಸಿ 19 ಓವರ್ಗಳಲ್ಲಿ ಆಲ್ ಔಟ್ ಆಯಿತು. ಅತ್ತ ಬೆಂಗಳೂರು ನೀಡಿದ 93 ರನ್ ಗುರಿ ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ 10 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 94 ರನ್ ಬಾರಿಸುವುದರ ಮೂಲಕ 9 ವಿಕೆಟ್ಗಳ ಭರ್ಜರಿ ಜಯವನ್ನು ಸಾಧಿಸಿತು.
ಹೀಗೆ ಬೆಂಗಳೂರು ತಂಡ ಹೀನಾಯವಾಗಿ ಸೋತ ನಂತರ ಪಂದ್ಯದ ಕುರಿತು ಮಾತನಾಡಿದ ವಿರಾಟ್ ಕೊಹ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರನೋರ್ವನ ಕುರಿತು ಈ ಕೆಳಕಂಡಂತೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ವರುಣ್ ಚಕ್ರವರ್ತಿ ಪ್ರದರ್ಶನವನ್ನು ಮೆಚ್ಚಿಕೊಂಡ ಕೊಹ್ಲಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆದ ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ 3 ವಿಕೆಟ್ಗಳನ್ನು ಪಡೆದುಕೊಳ್ಳುವುದರ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಹೀಗೆ ಉತ್ತಮ ಪ್ರದರ್ಶನ ನೀಡಿದ ವರುಣ್ ಚಕ್ರವರ್ತಿ ಕುರಿತು ಪಂದ್ಯ ಮುಗಿದ ನಂತರ ಮೆಚ್ಚುಗೆ ವ್ಯಕ್ತಪಡಿಸಿರುವ ವಿರಾಟ್ ಕೊಹ್ಲಿ 'ಯುವ ಆಟಗಾರರಿಂದ ಇಂತಹ ಉತ್ತಮ ಪ್ರದರ್ಶನವನ್ನು ನೋಡಲು ಇಚ್ಛಿಸುತ್ತೇನೆ, ಮುಂದೊಂದು ದಿನ ಈತ ಭಾರತ ತಂಡದ ಪ್ರಮುಖ ಆಟಗಾರನಾಗಿ ಮಿಂಚುತ್ತಾನೆ ಎಂದು ಪಂದ್ಯ ನಡೆಯುತ್ತಿದ್ದ ವೇಳೆಯೇ ಹೇಳಿದ್ದೆ' ಎಂದು ವಿರಾಟ್ ಕೊಹ್ಲಿ ವರುಣ್ ಚಕ್ರವರ್ತಿ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ.

ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ವರುಣ್ ಚಕ್ರವರ್ತಿ
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯವಾಗಿ ಸೋಲಲು ಕಾರಣರಾದ ಆಟಗಾರರಲ್ಲಿ ವರುಣ್ ಚಕ್ರವರ್ತಿ ಪ್ರಮುಖರು. ಬೌಲಿಂಗ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್, ಸಚಿನ್ ಬೇಬಿ ಮತ್ತು ವನಿಂದು ಹಸರಂಗ ಅವರ ವಿಕೆಟ್ಗಳನ್ನು ಪಡೆದ ವರುಣ್ ಚಕ್ರವರ್ತಿ ಕೈಲ್ ಜೆಮಿಸನ್ ಅವರನ್ನು ರನ್ಔಟ್ ಕೂಡ ಮಾಡಿದರು ಹಾಗೂ ಮೊಹಮ್ಮದ್ ಸಿರಾಜ್ ಕ್ಯಾಚ್ನ್ನೂ ಕೂಡ ವರುಣ್ ಚಕ್ರವರ್ತಿ ಪಡೆದುಕೊಂಡರು. ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಉತ್ತಮ ಪ್ರದರ್ಶನ ತೋರಿದ ವರುಣ್ ಚಕ್ರವರ್ತಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪಂದ್ಯದ ಸೋಲಿಗೆ ಇಬ್ಬನಿಯ ಕಾರಣ ನೀಡಿದ ವಿರಾಟ್ ಕೊಹ್ಲಿ
ಇನ್ನು ವರುಣ್ ಚಕ್ರವರ್ತಿ ಕುರಿತು ಪ್ರಶಂಸೆ ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ ಕೊಲ್ಕತ್ತಾ ವಿರುದ್ಧ ಬೆಂಗಳೂರು ತಂಡ ಸೋಲು ಅನುಭವಿಸಿರುವುದಕ್ಕೆ ಕಾರಣವನ್ನು ಕೂಡ ತಿಳಿಸಿದ್ದಾರೆ. ಬೆಂಗಳೂರು ತಂಡದ ಬ್ಯಾಟಿಂಗ್ ವೇಳೆ ಹೆಚ್ಚು ಇಬ್ಬನಿ ಇದ್ದ ಕಾರಣ ನಾವು ಸಾಲುಸಾಲಾಗಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆವು ಎಂದು ಹೇಳುವುದರ ಮೂಲಕ ಬೆಂಗಳೂರು ತಂಡದ ಬ್ಯಾಟಿಂಗ್ ವಿಫಲತೆಗೆ ಅನಿರೀಕ್ಷಿತ ಇಬ್ಬನಿಯೇ ಕಾರಣ ಎಂದು ಕೊಹ್ಲಿ ಹೇಳಿಕೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications