ರನ್ ಗಳಿಸಿದರೆ ಆಗಲ್ಲ, ಪಂದ್ಯ ಸೋತಿದ್ದರೆ ಯಾರು ಹೊಣೆ?; ಪಂಜಾಬ್ ಆಟಗಾರನ ವಿರುದ್ಧ ಸೆಹ್ವಾಗ್ ಕಿಡಿ

ಯುಎಇ ನೆಲದಲ್ಲಿ ಮುಂದುವರಿಯುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಕುತೂಹಲಕಾರಿ ಘಟ್ಟವನ್ನು ತಲುಪಿದ್ದು ಪ್ಲೇ ಆಫ್ ಸುತ್ತಿಗೆ ಯಾವ ತಂಡ ಅರ್ಹತೆ ಪಡೆದುಕೊಳ್ಳಲಿದೆ ಮತ್ತು ಯಾವ ತಂಡ ಅರ್ಹತೆ ಪಡೆದುಕೊಳ್ಳುವಲ್ಲಿ ವಿಫಲವಾಗಿ ಟೂರ್ನಿಯಿಂದ ಹೊರಬೀಳಲಿದೆ ಎಂಬುವುದರ ಕುರಿತು ಚರ್ಚೆಗಳು ಮತ್ತು ಲೆಕ್ಕಾಚಾರಗಳು ನಡೆಯತೊಡಗಿವೆ.
ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸದ್ಯಕ್ಕೆ 45 ಪಂದ್ಯಗಳು ಮುಗಿದಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡ 18 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದು, ಅಧಿಕೃತವಾಗಿ ಪ್ಲೇ ಆಫ್ ಸುತ್ತಿಗೆ ಪ್ರವೇಶವನ್ನು ಪಡೆದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನುಳಿದಂತೆ ಅಕ್ಟೋಬರ್ 1ರಂದು ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಜಯ ಸಾಧಿಸಿದ ನಂತರ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಅಧಿಕೃತವಾಗಿ ಪ್ಲೇ ಆಫ್ ಸುತ್ತಿಗೆ ಪ್ರವೇಶವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಹೌದು, ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಅಕ್ಟೋಬರ್ 1ರಂದು ನಡೆದ ಪಂದ್ಯದಲ್ಲಿ ಹೊರಬಿದ್ದ ಫಲಿತಾಂಶ ಅಂಕಪಟ್ಟಿಯಲ್ಲಿ ಕೆಲ ಬದಲಾವಣೆಗಳನ್ನು ತರುವುದು ಮಾತ್ರವಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಧಿಕೃತವಾಗಿ ಪ್ಲೇ ಆಫ್ ಪ್ರವೇಶಿಸುವಲ್ಲಿಯೂ ಪಾತ್ರ ನಿರ್ವಹಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 165 ರನ್ ಗಳಿಸುವುದರ ಮೂಲಕ ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 166 ರನ್ಗಳ ಗುರಿಯನ್ನು ನೀಡಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ನೀಡಿದ ಈ ಗುರಿಯನ್ನು ಬೆನ್ನಟ್ಟಲು ಶುರುಮಾಡಿದ ಪಂಜಾಬ್ ಕಿಂಗ್ಸ್ ತಂಡ ಉತ್ತಮ ಆರಂಭವನ್ನು ಪಡೆದುಕೊಂಡ ಹೊರತಾಗಿಯೂ ಅಂತಿಮ ಓವರ್ವರೆಗೂ ಪಂದ್ಯ ನಡೆಯಿತು, ಅಂತಿಮವಾಗಿ 19.3 ಓವರ್ಗಳಲ್ಲಿ 168 ರನ್ ಬಾರಿಸಿದ ಪಂಜಾಬ್ ಕಿಂಗ್ಸ್ ತಂಡ ಗೆಲುವಿನ ನಗೆ ಬೀರಿತು. ಈ ಪಂದ್ಯದ ಕುರಿತಾಗಿ ಇದೀಗ ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮಾತನಾಡಿದ್ದು ಪಂಜಾಬ್ ಕಿಂಗ್ಸ್ ತಂಡದ ನಿಧಾನಗತಿಯ ಬ್ಯಾಟಿಂಗ್ ವಿರುದ್ಧ ಈ ಕೆಳಕಂಡಂತೆ ಕಿಡಿಕಾರಿದ್ದಾರೆ.

ಕೆಎಲ್ ರಾಹುಲ್ ಬ್ಯಾಟಿಂಗ್ ಕುರಿತು ಕಿಡಿಕಾರಿದ ವಿರೇಂದ್ರ ಸೆಹ್ವಾಗ್
'ಕೆಎಲ್ ರಾಹುಲ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧ ಪರಿಪೂರ್ಣ ಬ್ಯಾಟಿಂಗ್ ನಡೆಸಿದರು ಎಂದೆನಿಸುತ್ತಿಲ್ಲ. 42 ಎಸೆತಗಳಿಗೆ 46 ರನ್ ಬೇಕಾಗಿದ್ದಂತಹ ಪಂದ್ಯದಲ್ಲಿ ಕೊನೆಯವರೆಗೂ ಕಣದಲ್ಲಿದ್ದು ವಿನ್ನಿಂಗ್ ಶಾಟ್ ಬಾರಿಸಿದ್ದರೆ ಕೆಎಲ್ ರಾಹುಲ್ ಬ್ಯಾಟಿಂಗ್ ಪರಿಪೂರ್ಣವಾದದ್ದು ಎಂದು ಒಪ್ಪುತ್ತಿದ್ದೆ' ಎಂದು ಹೇಳಿಕೆ ನೀಡುವುದರ ಮೂಲಕ ಕೆಎಲ್ ರಾಹುಲ್ ಬ್ಯಾಟಿಂಗ್ ಕುರಿತು ವಿರೇಂದ್ರ ಸೆಹ್ವಾಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾರುಖ್ ಖಾನ್ ಕೂಡ ಔಟ್ ಆಗಿದ್ದರೆ ಪಂದ್ಯದ ಗತಿ ಏನು?
'ಕೆಎಲ್ ರಾಹುಲ್ ಔಟ್ ಆಗುತ್ತಾ ಇದ್ದಂತೆ ಪಂಜಾಬ್ ಕಿಂಗ್ಸ್ ತಂಡದ ಮತ್ತೋರ್ವ ಆಟಗಾರನಾದ ಶಾರುಖ್ ಖಾನ್ ಕೂಡ ಔಟ್ ಆಗಿ, ಪಂಜಾಬ್ ಕಿಂಗ್ಸ್ ತಂಡ ಪಂದ್ಯವನ್ನು ಸೋತಿದ್ದರೆ ಆ ಸೋಲಿಗೆ ಯಾರು ಹೊಣೆಯಾಗುತ್ತಿದ್ದರು? ಸುಲಭವಾಗಿ ಗೆಲ್ಲುವ ಪಂದ್ಯವನ್ನು ಕೊನೆಯ ಓವರ್ ತನಕ ಎಳೆದುಕೊಂಡು ಹೋದ ಕೆಎಲ್ ರಾಹುಲ್ ಸೋಲಿಗೆ ಹೊಣೆ ಎಂದು ನಾವೆಲ್ಲರೂ ಆರೋಪ ಹೊರಿಸುತ್ತಿದ್ದೆವಷ್ಟೇ. ಉತ್ತಮ ರನ್ ಕಲೆ ಹಾಕಿದರೂ ತನ್ನ ತಂಡಕ್ಕೆ ಗೆಲುವನ್ನು ತಂದು ಕೊಡುವ ಮುನ್ನವೇ ವಿಕೆಟ್ ಒಪ್ಪಿಸಿ ಕೆಎಲ್ ರಾಹುಲ್ ಪೆವಿಲಿಯನ್ ಸೇರಿಕೊಂಡರು. ಓರ್ವ ನಾಯಕ ಇಂತಹ ಅನಿವಾರ್ಯ ಪಂದ್ಯಗಳಲ್ಲಿ ಕೇವಲ ರನ್ ಗಳಿಸಿದರೆ ಸಾಕಾಗುವುದಿಲ್ಲ ಬದಲಾಗಿ ಪಂದ್ಯವನ್ನು ಗೆಲ್ಲಿಸುವವರೆಗೂ ಕಣದಲ್ಲಿದ್ದು ಹೋರಾಟ ನಡೆಸಬೇಕು' ಎಂದು ವಿರೇಂದ್ರ ಸೆಹ್ವಾಗ್ ಹೇಳಿಕೆ ನೀಡಿದ್ದಾರೆ.

ಪಂದ್ಯಶ್ರೇಷ್ಠ ಕೆಎಲ್ ರಾಹುಲ್ ಆದರೂ ಹೀರೋ ಆಗಿ ಹೊರಹೊಮ್ಮಿದ್ದು ಶಾರುಖ್ ಖಾನ್!
ಹೌದು, ಕೆಎಲ್ ರಾಹುಲ್ ಉತ್ತಮ ಆರಂಭ ನೀಡುವುದರ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೂ ಸಹ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಪಂದ್ಯದಲ್ಲಿ ಹೀರೋ ಎನಿಸಿಕೊಂಡದ್ದು ಶಾರುಖ್ ಖಾನ್. 9 ಎಸೆತಗಳನ್ನು ಎದುರಿಸಿದ ಶಾರುಖ್ ಖಾನ್ಅಜೇಯ 22 ರನ್ ಬಾರಿಸುವುದರ ಮೂಲಕ ಪಂಜಾಬ್ ಕಿಂಗ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಿಮ ಓವರ್ನಲ್ಲಿ ರಾಹುಲ್ ಔಟ್ ಆಗಿ ಪೆವಿಲಿಯನ್ ಸೇರಿಕೊಂಡ ನಂತರ 4 ಎಸೆತಗಳಿಗೆ 4 ರನ್ ಅಗತ್ಯವಿದ್ದಾಗ ಸಿಕ್ಸರ್ ಬಾರಿಸಿದ ಶಾರುಖ್ ಖಾನ್ ಪಂದ್ಯವನ್ನು ಗೆಲ್ಲಿಸಿ ಪಂಜಾಬ್ ಕಿಂಗ್ಸ್ ತಂಡದ ಪರ ಹೀರೋ ಆಗಿ ನಿಂತರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications