'ಧೋನಿ ಟಿಪ್ಸ್ ಕೊಟ್ಟಿದ್ದಾರೆ, ಒಳ್ಳೆಯ ಆರಂಭ ಸಿಕ್ಕಿದೆ, ಈ ಸಲ ಕಪ್ ನಮ್ದೇ' ಎಂದ ಆರ್ಸಿಬಿ ಆಟಗಾರ!

ಇದೇ ವರ್ಷದ ಏಪ್ರಿಲ್ 9ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭವಾಗಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 29 ಪಂದ್ಯಗಳು ಯಾವುದೇ ಅಡಚಣೆಗಳಿಲ್ಲದೇ ಮುಗಿದಿದ್ದವು. ಆದರೆ ನಂತರದ ದಿನಗಳಲ್ಲಿ ವಿವಿಧ ತಂಡಗಳ ಕೆಲ ಆಟಗಾರರು ಮತ್ತು ಸಿಬ್ಬಂದಿ ವರ್ಗದವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಕಾರಣ ಪ್ರಸ್ತುತ ಐಪಿಎಲ್ ಟೂರ್ನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಮುಂದೂಡಲಾಗಿತ್ತು.
ಹೀಗೆ ಮುಂದೂಡಲ್ಪಟ್ಟಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಇದೀಗ ಯುಎಇಯಲ್ಲಿ ಮುಂದುವರಿಸಲಾಗಿದ್ದು ಎರಡನೇ ಹಂತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮೊದಲನೇ ಪಂದ್ಯವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಆಡಿದೆ. ಅಬುಧಾಬಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹೀನಾಯವಾದ ಸೋಲನ್ನು ಕಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟ್ಸ್ಮನ್ಗಳು ಕೊಲ್ಕತ್ತಾ ನೈಟ್ ರೈಡರ್ಸ್ ಬೌಲಿಂಗ್ ದಾಳಿಗೆ ತತ್ತರಿಸಿದರು. 19 ಓವರ್ ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 92 ರನ್ಗಳಿಗೆ ಆಲ್ ಔಟ್ ಆಯಿತು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ವರುಣ್ ಚಕ್ರವರ್ತಿ 3, ಆ್ಯಂಡ್ರೆ ರಸೆಲ್ 3, ಲಾಕಿ ಫರ್ಗ್ಯುಸನ್ 2 ಮತ್ತು ಪ್ರಸಿದ್ಧ್ ಕೃಷ್ಣ 1 ವಿಕೆಟ್ ಪಡೆದು ಮಿಂಚಿದರು. ಇನ್ನು ಬೆಂಗಳೂರು ತಂಡ ನೀಡಿದ 93 ರನ್ಗಳ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಆರಂಭಿಕ ಆಟಗಾರರಾದ ಶುಬ್ ಮನ್ ಗಿಲ್ (48) ಮತ್ತು ವೆಂಕಟೇಶ್ ಐಯ್ಯರ್ ( ಅಜೇಯ 41 ) ಅವರ ಉತ್ತಮ ಆಟದಿಂದ 10 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿ 9 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು.
ಹೀಗೆ ಹದಿನಾಲ್ಕನೇ ಆವೃತ್ತಿಯ ಐಪಿಎಲ್ ಟೂರ್ನಿಯ ದ್ವಿತೀಯ ಭಾಗದಲ್ಲಿ ತನ್ನ ಮೊದಲನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲನ್ನು ಅನುಭವಿಸಿದ್ದರೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಕಪ್ ಗೆಲ್ಲಲಿದೆ ಎಂದು ಯುಜುವೇಂದ್ರ ಚಾಹಲ್ ಈ ಕೆಳಕಂಡಂತೆ ಮಾತನಾಡಿದ್ದಾರೆ.

ಈ ಬಾರಿ ಅತ್ಯುತ್ತಮ ಆರಂಭವನ್ನು ಮಾಡಿದ್ದೇವೆ, ಕಪ್ ಗೆಲ್ಲುತ್ತೇವೆ
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಆರಂಭವನ್ನು ಪಡೆದುಕೊಂಡಿದೆ ಎಂದು ಯುಜುವೇಂದ್ರ ಚಹಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ನೆಲದಲ್ಲಿ ನಡೆದ ತನ್ನ ಮೊದಲ 7 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ಪಂದ್ಯಗಳಲ್ಲಿ ಜಯ ಗಳಿಸುವುದರ ಮೂಲಕ ಉತ್ತಮವಾದ ಆರಂಭವನ್ನು ಪಡೆದುಕೊಂಡಿದ್ದು, ನಮ್ಮ ತಂಡ ಕಪ್ ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ ಎಂದು ಯುಜ್ವೇಂದ್ರ ಚಹಲ್ ವಿಶ್ವಾಸ ವ್ಯಕ್ತಪಡಿಸಿದರು.

ಕೊಹ್ಲಿ ನಾಯಕತ್ವದಲ್ಲಿ ಕಪ್ ಗೆಲ್ಲಲಿದ್ದೇವೆ
ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯ ದ್ವಿತೀಯ ಭಾಗ ಆರಂಭವಾಗುವ ಮುನ್ನವೇ ಮಹತ್ವದ ಘೋಷಣೆಯೊಂದನ್ನು ಹೊರಡಿಸಿದ ವಿರಾಟ್ ಕೊಹ್ಲಿ ತಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ಈ ಟೂರ್ನಿಯ ಬಳಿಕ ಬಿಟ್ಟುಕೊಡುವುದಾಗಿ ಹೇಳಿಕೆಯನ್ನು ನೀಡಿದ್ದರು. ಹೀಗಾಗಿ ಪ್ರಸ್ತುತ ಐಪಿಎಲ್ ಟೂರ್ನಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಬೆಂಗಳೂರು ತಂಡ ಆಡಲಿರುವ ಕೊನೆಯ ಐಪಿಎಲ್ ಟೂರ್ನಿಯಾಗಲಿದೆ. ಈ ಕುರಿತು ಮಾತನಾಡಿದ ಯುಜ್ವೇಂದ್ರ ಚಹಲ್ ಈ ಬಾರಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ತವರಿಗೆ ಕೊಂಡೊಯ್ಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಂಎಸ್ ಧೋನಿಯಿಂದ ಟಿಪ್ಸ್ ಪಡೆದುಕೊಂಡಿದ್ದೇನೆ ಎಂದ ಚಹಾಲ್
ಇನ್ನು ಮುಂದುವರಿಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯಗಳಲ್ಲಿ ಭಾಗವಹಿಸಲು ದುಬೈ ತಲುಪಿರುವ ಯುಜ್ವೇಂದ್ರ ಚಹಲ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಅವರನ್ನು ಭೇಟಿಯಾಗಿದ್ದಾರೆ. ಹೀಗೆ ಭೇಟಿಯಾದ ತನ್ನನ್ನು ಎಂಎಸ್ ಧೋನಿ ಪ್ರೀತಿಯಿಂದ ಬರಮಾಡಿಕೊಂಡು ಅಪ್ಪುಗೆಯನ್ನು ನೀಡಿದರು ಎಂದು ಚಾಹಲ್ ಹೇಳಿಕೊಂಡಿದ್ದಾರೆ. ನಂತರ ಬೌಲಿಂಗ್ ಕುರಿತಾಗಿ ತನಗಿರುವ ಕೆಲವೊಂದಿಷ್ಟು ಸಂಶಯಗಳನ್ನು ಧೋನಿ ಬಳಿ ಚಹಲ್ ಚರ್ಚಿಸಿದ್ದು ಆ ಸಂಶಯ ಮತ್ತು ಗೊಂದಲಗಳಿಗೆ ಎಂಎಸ್ ಧೋನಿ ಕೆಲವೊಂದಿಷ್ಟು ಸಲಹೆಗಳನ್ನು ಕೂಡ ನೀಡಿದ್ದಾರೆ ಎಂದು ಯುಜ್ವೇಂದ್ರ ಚಹಲ್ ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications