ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ನಾಲ್ಕನೇ ಪಂದ್ಯ ರಾಜಸ್ತಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ 4 ರನ್ಗಳ ರೋಚಕ ಜಯವನ್ನು ಸಾಧಿಸಿತು. ಪಂಜಾಬ್ ಕಿಂಗ್ಸ್ ತಂಡ ಪಂದ್ಯ ಗೆದ್ದರೂ ಕೂಡ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರಾದ ಸಂಜು ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ ವೀಕ್ಷಕರನ್ನು ಆಕರ್ಷಿಸಿದರು.
ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಭರ್ಜರಿ ಶತಕ ಸಿಡಿಸಿದರೆ ರಿಯಾನ್ ಪರಾಗ್ ಮಧ್ಯಮ ಕ್ರಮಾಂಕದಲ್ಲಿ ಬಂದು 3 ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ವೀಕ್ಷಕರ ಮನಗೆದ್ದರು. 11 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 1 ಬೌಂಡರಿಯನ್ನೊಳಗೊಂಡಂತೆ 25 ರನ್ ಗಳಿಸಿದ್ದ ಪರಾಗ್ ಈ ಹಿಂದೆ ವಿರಾಟ್ ಕೊಹ್ಲಿ ನೀಡಿದ್ದ ಬ್ಯಾಟಿಂಗ್ ಸಲಹೆಯೊಂದನ್ನು ನೆನಪಿಸಿಕೊಂಡಿದ್ದಾರೆ.
ಕಳೆದ ಬಾರಿಯ ಐಪಿಎಲ್ ವೇಳೆ ಆರೆಂಜ್ ಕ್ಯಾಪ್ ಬಗ್ಗೆ ತಲೆಕೆಡಿಸಿಕೊಳ್ಳಬೇಡ ಎಂದು ವಿರಾಟ್ ಕೊಹ್ಲಿ ರಿಯಾನ್ ಪರಾಗ್ಗೆ ಎಚ್ಚರಿಕೆ ನೀಡಿದ್ದರು. ನೀನು ಐದು ಮತ್ತು ಆರನೇ ಕ್ರಮಾಂಕದಲ್ಲಿ ಬರುವ ಬ್ಯಾಟ್ಸ್ಮನ್ ಆಗಿರುವುದರಿಂದ ಹೆಚ್ಚಿನ ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದುಕೊಳ್ಳಲು ಆಗುವುದಿಲ್ಲ, ಹೀಗಾಗಿ ಆರೆಂಜ್ ಕ್ಯಾಪ್ ಆಸೆಯನ್ನು ಬಿಟ್ಟು ನಿನ್ನ ತಂಡಕ್ಕೆ ನಿರ್ಣಾಯಕ ಹಂತದಲ್ಲಿ ಬೇಕಾಗುವ 20 ಅಥವಾ 30 ರನ್ಗಳನ್ನು ಗಳಿಸು ಅದು ನಿನ್ನ ತಂಡಕ್ಕೆ ತುಂಬಾ ಸಹಾಯವಾಗುತ್ತದೆ ಎಂದು ವಿರಾಟ್ ಕೊಹ್ಲಿ ನೀಡಿದ್ದ ಸಲಹೆಯನ್ನು ರಿಯಾನ್ ಪರಾಗ್ ಬಿಚ್ಚಿಟ್ಟರು.