ಸತ್ಯ ಸ್ವೀಕರಿಸಿ ಮುಂದೆ ಸಾಗಬೇಕು; ಕೊನೆಗೂ ಪಂತ್ ನಾಯಕತ್ವದ ಬಗ್ಗೆ ಮೌನ ಮುರಿದ ಶ್ರೇಯಸ್ ಐಯ್ಯರ್

ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಏಪ್ರಿಲ್ ತಿಂಗಳಿನಲ್ಲಿ ಭಾರತ ನೆಲದಲ್ಲಿ ಆರಂಭವಾಗಿತ್ತು. ಹೀಗೆ ಈ ಬಾರಿಯ ಟೂರ್ನಿ ಆರಂಭವಾಗುವ ಮುನ್ನ ಇಂಗ್ಲೆಂಡ್ ಭಾರತ ಪ್ರವಾಸವನ್ನು ಕೈಗೊಂಡಿತ್ತು, ಇಂಗ್ಲೆಂಡ್ ವಿರುದ್ಧದ ಈ ಸರಣಿಯಲ್ಲಿ ಭಾರತದ ಆಟಗಾರ ಶ್ರೇಯಸ್ ಐಯ್ಯರ್ ಕೂಡ ಭಾಗವಹಿಸಿದ್ದರು. ಈ ಬಾರಿಯ ಐಪಿಎಲ್ ಟೂರ್ನಿ ಆರಂಭವಾಗುವ ಮುನ್ನ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆದಿದ್ದ ಏಕದಿನ ಸರಣಿಯಲ್ಲಿ ಪಾಲ್ಗೊಂಡಿದ್ದ ಶ್ರೇಯಸ್ ಐಯ್ಯರ್ ಫೀಲ್ಡಿಂಗ್ ಮಾಡುವ ವೇಳೆ ಭುಜಕ್ಕೆ ತೀವ್ರವಾದ ಪೆಟ್ಟು ಬಿದ್ದಿತ್ತು. ಹೀಗಾಗಿ ಆ ಪಂದ್ಯದ ಮಧ್ಯದಲ್ಲಿಯೇ ಶ್ರೇಯಸ್ ಐಯ್ಯರ್ ಮೈದಾನದಿಂದ ಚಿಕಿತ್ಸೆಗಾಗಿ ಹೊರನಡೆದಿದ್ದರು. ಪೆಟ್ಟಿನ ಪ್ರಮಾಣ ಅಧಿಕವಾಗಿದ್ದರಿಂದ ಶ್ರೇಯಸ್ ಐಯ್ಯರ್ ತಿಂಗಳುಗಳಗಟ್ಟಲೆ ಚಿಕಿತ್ಸೆ ಮತ್ತು ವಿಶ್ರಾಂತಿಗೆ ಒಳಪಡಬೇಕಾದ ಅನಿವಾರ್ಯತೆ ಉಂಟಾಗಿತ್ತು. ಹೀಗಾಗಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಆ ಸರಣಿಯ ಮಧ್ಯದಲ್ಲಿಯೇ ಶ್ರೇಯಸ್ ಐಯ್ಯರ್ ಹೊರಬಿದ್ದರು ಹಾಗೂ ಹೆಚ್ಚು ದಿನಗಳ ಕಾಲ ವಿಶ್ರಾಂತಿ ಪಡೆಯಬೇಕಾಗಿದ್ದ ಕಾರಣ ಈ ಬಾರಿಯ ಐಪಿಎಲ್ ಟೂರ್ನಿಯ ಮೊದಲ ಭಾಗದಲ್ಲಿಯೂ ಕೂಡ ಶ್ರೇಯಸ್ ಐಯ್ಯರ್ ಕಣಕ್ಕಿಳಿಯದೆ ಟೂರ್ನಿಯಿಂದ ಹೊರಬಿದ್ದಿದ್ದರು.
ಶ್ರೇಯಸ್ ಐಯ್ಯರ್ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವನ್ನು ವಹಿಸಿಕೊಂಡು ಫೈನಲ್ ಹಂತದವರೆಗೂ ಕೂಡ ಯಶಸ್ವಿಯಾಗಿ ತಂಡವನ್ನು ಕೊಂಡೊಯ್ದಿದ್ದರು. ಆದರೆ ಈ ಬಾರಿ ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆದುಕೊಳ್ಳಬೇಕಾದ ಕಾರಣ ಶ್ರೇಯಸ್ ಐಯ್ಯರ್ ಬದಲಾಗಿ ಯುವ ಆಟಗಾರ ರಿಷಭ್ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ತಾತ್ಕಾಲಿಕ ನಾಯಕ ಎಂದು ನೇಮಿಸಲಾಗಿತ್ತು. ಯುವ ಆಟಗಾರ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿಯ ಐಪಿಎಲ್ ಟೂರ್ನಿ ಕೊರೊನಾ ಕಾರಣದಿಂದಾಗಿ ಮುಂದೂಡಲ್ಪಟ್ಟ ವೇಳೆಗೆ 8 ಪಂದ್ಯಗಳನ್ನಾಡಿ 6 ಪಂದ್ಯಗಳಲ್ಲಿ ಜಯಗಳಿಸಿ, ಕೇವಲ 2 ಪಂದ್ಯಗಳಲ್ಲಿ ಮಾತ್ರ ಸೋತು 12 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಆಕ್ರಮಿಸಿಕೊಂಡಿತ್ತು.
ಹೀಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತನ್ನ ನಾಯಕತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಸಿದ್ದ ಕಾರಣ ಪ್ರಸ್ತುತ ಯುಎಇಯಲ್ಲಿ ಮುಂದುವರೆಯುತ್ತಿರುವ ಈ ಬಾರಿಯ ಐಪಿಎಲ್ ಟೂರ್ನಿಯ ದ್ವಿತೀಯ ಭಾಗಕ್ಕೂ ರಿಷಭ್ ಪಂತ್ ಅವರನ್ನೇ ನಾಯಕನಾಗಿ ಮುಂದುವರೆಸಲು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ನಿರ್ಧರಿಸಿತು. ಹೀಗಾಗಿ ಗಾಯದಿಂದ ಚೇತರಿಸಿಕೊಂಡು ಮತ್ತೆ ತಂಡವನ್ನು ಸೇರಿಕೊಂಡಿರುವ ಶ್ರೇಯಸ್ ಐಯ್ಯರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರನಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದರು.
ಹೀಗೆ ನಾಯಕ ಸ್ಥಾನ ಸಿಗದ ಶ್ರೇಯಸ್ ಐಯ್ಯರ್ ರಿಷಭ್ ಪಂತ್ ನಾಯಕತ್ವದ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.

ಪಂತ್ ನಾಯಕತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೇಯಸ್ ಐಯ್ಯರ್
ರಿಷಭ್ ಪಂತ್ ಉತ್ತಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವನ್ನು ನಿಭಾಯಿಸುತ್ತಿದ್ದು ತಂಡ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಹೀಗಾಗಿ ತಾನು ಓರ್ವ ಆಟಗಾರನಾಗಿ ರಿಷಭ್ ಪಂತ್ ನಾಯಕತ್ವದಡಿಯಲ್ಲಿ ತಂಡದ ಪರ ಉತ್ತಮ ಆಟವನ್ನು ಆಡಲು ಸಿದ್ಧನಿದ್ದೇನೆ ಎಂದು ಶ್ರೇಯಸ್ ಐಯ್ಯರ್ ತಿಳಿಸಿದ್ದಾರೆ.

ಸತ್ಯವನ್ನು ಸ್ವೀಕರಿಸಿ ಮುಂದೆ ಸಾಗಬೇಕು
ಇನ್ನು ತಾವು ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದ ದಿನಗಳನ್ನು ನೆನೆಸಿಕೊಂಡಿರುವ ಶ್ರೇಯಸ್ ಐಯ್ಯರ್ ಇರುವ ಸತ್ಯವನ್ನು ಸ್ವೀಕರಿಸಿ ಮುಂದೆ ಸಾಗಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರಿಷಭ್ ಪಂತ್ ನಾಯಕತ್ವವನ್ನು ಉತ್ತಮವಾಗಿ ನಿಭಾಯಿಸುತ್ತಿರುವ ಕಾರಣ ಟೀಮ್ ಮ್ಯಾನೇಜ್ಮೆಂಟ್ ಆತನನ್ನೇ ನಾಯಕನನ್ನಾಗಿ ಮುಂದುವರೆಸಲು ತೀರ್ಮಾನಿಸಿದೆ. ಹೀಗೆ ಸತ್ಯಾಂಶವನ್ನು ಸ್ವೀಕರಿಸಿ ಓರ್ವ ಆಟಗಾರನಾಗಿ ತಂಡದಲ್ಲಿ ಮುಂದುವರಿಯಬೇಕು ಮತ್ತು ತಂಡಕ್ಕೆ ಯಾವ ರೀತಿ ಆಸರೆಯಾಗಬೇಕು ಎಂಬುದರ ಕುರಿತು ಚಿಂತಿಸುತ್ತೇನೆ ಎಂದು ಶ್ರೇಯಸ್ ಐಯ್ಯರ್ ಹೇಳಿಕೆ ನೀಡಿದ್ದಾರೆ.

ಮತ್ತೆ ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್
ಈ ಬಾರಿಯ ಐಪಿಎಲ್ ಟೂರ್ನಿ ಮುಂದೂಡಲ್ಪಟ್ಟ ವೇಳೆಯಲ್ಲಿ ಅಗ್ರ ಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇತ್ತೀಚೆಗಷ್ಟೇ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವು ಸಾಧಿಸಿದ ನಂತರ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಕುಸಿದಿತ್ತು. ಆದರೆ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಪಂದ್ಯವನ್ನು ಗೆದ್ದ ನಂತರ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಗ್ರ ಸ್ಥಾನಕ್ಕೇರಿದ್ದು 14 ಅಂಕಗಳನ್ನು ತನ್ನದಾಗಿಸಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications