
1. ವಿರಾಟ್ ಕೊಹ್ಲಿ ಫಾಫ್ ಡು ಪ್ಲೆಸಿಸ್ ಜೊತೆ ಆರಂಭಿಕನಾಗಿ ಕಣಕ್ಕಿಳಿಯಬೇಕು
ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಪ್ರಥಮ ಪಂದ್ಯದಲ್ಲಿ ನಾಯಕ ಫಾಫ್ ಡು ಪ್ಲೆಸಿಸ್ ಜೊತೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಯುವ ಆಟಗಾರ ಅನೂಜ್ ರಾವತ್ 20 ಎಸೆತಗಳಲ್ಲಿ 21 ರನ್ ಬಾರಿಸಿ ಹಲವಾರು ಎಸೆತಗಳನ್ನು ಎದುರಿಸಲಾಗದೆ ಪರದಾಡಿದರು. ಹೀಗಾಗಿ ಅನೂಜ್ ರಾವತ್ ಮತ್ತು ಫಾಫ್ ಡು ಪ್ಲೆಸಿಸ್ ಜೋಡಿ ನಿರೀಕ್ಷಿಸಿದ ಆರಂಭವನ್ನು ನೀಡಲಿಲ್ಲ. ಫಾಫ್ ಡು ಪ್ಲೆಸಿಸ್ ನಂತರ ಅಬ್ಬರಿಸಿದರೂ ಸಹ ಆರಂಭದಲ್ಲಿಯೇ ತನಗೆ ಸಾಥ್ ನೀಡಬಲ್ಲ ಜತೆಗಾರನ ಅವಶ್ಯಕತೆಯನ್ನು ಹೊಂದಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಫಾಫ್ ಡು ಪ್ಲೆಸಿಸ್ ಜೊತೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವುದು ಉತ್ತಮ ಆಯ್ಕೆಯಾಗಿದ್ದು, ಈ ಜೋಡಿ ಆರಂಭಿಕರಾಗಿ ಕಣಕ್ಕಿಳಿದು ರನ್ ಹೊಳೆ ಹರಿಸಿದರೆ ಮಧ್ಯಮ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಕಣಕ್ಕಿಳಿಯಬಹುದಾಗಿದೆ. ಇನ್ನು ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಆರಂಭವನ್ನು ಮಾಡಿ ಉತ್ತಮ ಪ್ರದರ್ಶನ ನೀಡಿದ ಅನುಭವವನ್ನು ಹೊಂದಿರುವ ಕಾರಣ ಈ ಆಯ್ಕೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೈಗೆತ್ತಿಕೊಂಡರೆ ತಂಡ ಪಂದ್ಯಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲಿದೆ.

2. ವನಿಂದು ಹಸರಂಗಗೆ ಬೇಗನೆ ಚೆಂಡನ್ನು ನೀಡಬೇಕು
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಬೃಹತ್ ಮೊತ್ತ ದಾಖಲಿಸಿದರೂ ಸಹ ಸೋತದ್ದಕ್ಕೆ ಇರುವ ಕಾರಣಗಳಲ್ಲಿ ವನಿಂದು ಹಸರಂಗ ಹಾಗೂ ಹರ್ಷಲ್ ಪಟೇಲ್ ರೀತಿಯ ವಿಕೆಟ್ ತೆಗೆಯಬಲ್ಲ ಬೌಲರ್ಗಳಿಗೆ ನಾಯಕ ಫಾಫ್ ಡು ಪ್ಲೆಸಿಸ್ ನಿಧಾನವಾಗಿ ಚೆಂಡನ್ನು ನೀಡಿದ್ದು ಕೂಡ ಒಂದು. ಹೌದು, ಹೀಗಾಗಿಯೇ ಪಂಜಾಬ್ ಕಿಂಗ್ಸ್ ತಂಡದ ಆಟಗಾರರು ಪವರ್ ಪ್ಲೇನಲ್ಲಿಯೇ 60 ರನ್ಗಳ ಗಡಿಯನ್ನು ದಾಟಿ ಉತ್ತಮ ಆರಂಭವನ್ನು ಪಡೆದುಕೊಂಡಿದ್ದರು. ಹೀಗೆ ಎಂಟನೇ ಓವರ್ನಲ್ಲಿ ಬೌಲಿಂಗ್ ಮಾಡುವ ಅವಕಾಶ ಪಡೆದ ವನಿಂದು ಹಸರಂಗ ಬರುತ್ತಿದ್ದಂತೆಯೇ ಮಯಾಂಕ್ ಅಗರ್ವಾಲ್ ಅವರ ವಿಕೆಟ್ ಪಡೆದರು. ಆದರೆ ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಆಟಗಾರರು ಆ ಸಮಯಕ್ಕೆ ಉತ್ತಮ ಬುನಾದಿಯನ್ನು ಹಾಕಿದ ಕಾರಣ ನಂತರ ಕಣಕ್ಕಿಳಿದ ಆಟಗಾರರು ಯಾವುದೇ ಒತ್ತಡಕ್ಕೆ ಸಿಲುಕದೇ ಸರಾಗವಾಗಿ ಬ್ಯಾಟ್ ಬೀಸಿದರು. ಈ ಸಲುವಾಗಿ ಫಾಫ್ ಡು ಪ್ಲೆಸಿಸ್ ವನಿಂದು ಹಸರಂಗಗೆ ತುಸು ಬೇಗನೇ ಬೌಲಿಂಗ್ ನೀಡುವುದು ತಂಡದಲ್ಲಿ ಆಗಬೇಕಾದ ಮತ್ತೊಂದು ಮಹತ್ವದ ಬದಲಾವಣೆಯಾಗಿದೆ.

3. ಆಕಾಶ್ ದೀಪ್ ಬದಲು ಸಿದ್ಧಾರ್ಥ್ ಕೌಲ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದ ಮೂಲಕ ತನ್ನ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ ಆಕಾಶ್ ದೀಪ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 3 ಓವರ್ ಬೌಲಿಂಗ್ ಮಾಡಿ 1 ವಿಕೆಟ್ ಪಡೆದು 38 ರನ್ ನೀಡಿ ದುಬಾರಿ ಎನಿಸಿಕೊಂಡರು. ಹೀಗೆ ತನ್ನ ಪಾಲಿನ ಸಂಪೂರ್ಣ ಓವರ್ಗಳನ್ನು ಮುಗಿಸುವಷ್ಟು ಅವಕಾಶ ಪಡೆಯದ ಆಕಾಶ್ ದೀಪ್ ಬದಲಾಗಿ ಸಿದ್ಧಾರ್ಥ್ ಕೌಲ್ ಅವರನ್ನು ಕಣಕ್ಕಿಳಿಸುವುದು ಉತ್ತಮ ಆಯ್ಕೆ. 2018ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಕಣಕ್ಕಿಳಿದು 17 ಪಂದ್ಯಗಳನ್ನಾಡಿ 21 ವಿಕೆಟ್ ಪಡೆದಿದ್ದ ಅನುಭವವಿರುವ ಸಿದ್ಧಾರ್ಥ್ ಕೌಲ್ ಸಯ್ಯದ್ ಮುಷ್ತಾಕ್ ಅಲಿ 2021/22 ಟ್ರೋಫಿಯಲ್ಲಿ ಪಂಜಾಬ್ ತಂಡದ ಪರ ಕಣಕ್ಕಿಳಿದು 5 ಪಂದ್ಯಗಳಲ್ಲಿ 10 ವಿಕೆಟ್ ಪಡೆದು ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿಕೊಂಡರು. ಹೀಗೆ ಇತ್ತೀಚಿನ ದಿನಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿರುವ ಸಿದ್ಧಾರ್ಥ್ ಕೌಲ್ ಅವರಿಗೆ ಆಡುವ ಬಳಗದಲ್ಲಿ ಸ್ಥಾನ ನೀಡುವುದು ತಂಡದಲ್ಲಿ ಆಗಬೇಕಿರುವ ಮತ್ತೊಂದು ಬದಲಾವಣೆಯಾಗಿದೆ.


Click it and Unblock the Notifications
