
3. ಹೆಚ್ಚುವರಿ ನುರಿತ ಭಾರತೀಯ ಆಟಗಾರರ ಕೊರತೆ
ಮೆಗಾ ಹರಾಜಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಪ್ಲೇಯಿಂಗ್ ಇಲೆವೆನ್ ರಚಿಸಿದರೆ ತಂಡ ಬಲಿಷ್ಟವಾಗಿಯೇ ಕಾಣಸಿಗುತ್ತಿದೆ. ತಂಡದ ಪರ ಉತ್ತಮ ಪ್ರದರ್ಶನ ನೀಡಿ ಆಡುವ ಬಳಗದ ಖಾಯಂ ಸದಸ್ಯರು ಎನಿಸಿಕೊಂಡಿರುವ ಭಾರತೀಯ ಆಟಗಾರರಾದ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಮತ್ತು ಹರ್ಷಲ್ ಪಟೇಲ್ ಗಾಯದ ಸಮಸ್ಯೆಗೊಳಗಾದರೆ ಬದಲಿ ಆಟಗಾರರಾಗಿ ಕಣಕ್ಕಿಳಿಯಲು ಬೇಕಾದ ಭಾರತದ ಸ್ಟಾರ್ ಆಟಗಾರರು ತಂಡದಲ್ಲಿಲ್ಲ ಎಂಬುದು ವಾಸ್ತವ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅನುಜ್ ರಾವತ್, ಸುಯಶ್ ಪ್ರಭುದೇಸಾಯಿ ರೀತಿಯ ಪ್ರತಿಭಾವಂತ ಆಟಗಾರರನ್ನು ಹೊಂದಿದ್ದರೂ ಸಹ ಇವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿ ಮಿಂಚದೇ ಇರುವುದು ಹಾಗೂ ಹೆಚ್ಚು ಅನುಭವವಿಲ್ಲದಿರುವ ಅಂಶ ಸ್ಟಾರ್ ಆಟಗಾರರು ಗಾಯಕ್ಕೊಳಗಾದಾಗ ತಂಡಕ್ಕೆ ಹಿನ್ನಡೆಯನ್ನುಂಟುಮಾಡಲಿದೆ.

2. ಇಬ್ಬರು ವಿದೇಶಿ ಆಟಗಾರರ ಮೇಲೆ ಪ್ರಯೋಗ
ಇನ್ನು ಐಪಿಎಲ್ ತಂಡವೊಂದು ಒಟ್ಟು ನಾಲ್ವರು ವಿದೇಶಿ ಆಟಗಾರರನ್ನು ಕಣಕ್ಕಿಳಿಸಬಹುದಾಗಿದ್ದು, ಕಳಪೆ ಪ್ರದರ್ಶನ ನೀಡಿದರೆ ಇತರೆ ವಿದೇಶಿ ಆಟಗಾರರನ್ನು ಬಳಸಿಕೊಳ್ಳಬಹುದಾಗಿದೆ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿದೇಶಿ ಆಟಗಾರ ಫಾಫ್ ಡು ಪ್ಲೆಸಿಸ್ ಅವರನ್ನು ನಾಯಕನನ್ನಾಗಿ ನೇಮಿಸಿದ್ದು ಹಾಗೂ ಮೆಗಾ ಹರಾಜಿನಲ್ಲಿ ಹತ್ತು ಕೋಟಿಗೆ ಖರೀದಿಸಿರುವ ವನಿಂದು ಹಸರಂಗ ಆಡುವ ಬಳಗದ ಖಾಯಂ ಸದಸ್ಯನಾಗುವುದು ಖಚಿತವಾಗಿದ್ದು ತಂಡ ಕೇವಲ ಇಬ್ಬರು ವಿದೇಶಿ ಆಟಗಾರರ ಮೇಲೆ ಮಾತ್ರ ಪ್ರಯೋಗಗಳನ್ನು ಮಾಡಬಹುದಾಗಿದೆ. ಇನ್ನು ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ ಅತಿಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದರೂ ಸಹ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿದ್ದ ವಿದೇಶಿ ಆಟಗಾರ ಇಯಾನ್ ಮಾರ್ಗನ್ ಒತ್ತಡದಲ್ಲಿ ನೆಲಕಚ್ಚಿದ್ದು ಹಾಗೂ ಅದು ತಂಡದ ಮೇಲೆ ಪರಿಣಾಮ ಬೀರಿದ್ದನ್ನು ನಾವಿಲ್ಲಿ ಗಮನಿಸಬೇಕಿದೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೇವಲ ಇಬ್ಬರು ವಿದೇಶಿ ಆಟಗಾರರನ್ನು ಬದಲಿಸಲು ಅವಕಾಶಗಳು ಇರಲಿದ್ದು, ಈ ಅಂಶ ಕೂಡ ತಂಡಕ್ಕೆ ಹಿನ್ನಡೆಯನ್ನುಂಟುಮಾಡಲಿದೆ.

1. ಮಧ್ಯಮ ಕ್ರಮಾಂಕದಲ್ಲಿಲ್ಲ ಭರವಸೆಯ ಆಟಗಾರರು
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರತೀ ಆವೃತ್ತಿಯಲ್ಲಿ ಅತಿಹೆಚ್ಚಾಗಿ ಎದುರಿಸುವ ಗಂಭೀರ ಸಮಸ್ಯೆಯೆಂದರೆ ಅದು ಮಧ್ಯಮ ಕ್ರಮಾಂದ ಆಟಗಾರರ ಕಳಪೆ ಪ್ರದರ್ಶನ. ಹೌದು, ಈ ಹಿಂದಿನ ಐಪಿಎಲ್ ಟೂರ್ನಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶಿಮ್ರಾನ್ ಹೆಟ್ಮಾಯರ್, ಮೊಯಿನ್ ಅಲಿ ಹಾಗೂ ಮಾರ್ಕಸ್ ಸ್ಟಾಯಿನಿಸ್ ರೀತಿಯ ಆಟಗಾರರನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಸಿತ್ತಾದರೂ ನಿರೀಕ್ಷಿಸಿದ್ದ ಯಶಸ್ಸನ್ನು ಹೊಂದಲು ಸಾಧ್ಯವಾಗಿರಲಿಲ್ಲ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ವನಿಂದು ಹಸರಂಗ ಅವರನ್ನು ಫಿನಿಶಿಂಗ್ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿಸಲಿದ್ದು, ದೊಡ್ಡ ಮಟ್ಟದ ಐಪಿಎಲ್ ಅನುಭವವಿಲ್ಲದ ಹಸರಂಗ ಫಿನಿಶರ್ ಆಗಿ ಮಿಂಚುತ್ತಾರಾ ಎಂಬುದು ಅನುಮಾನ ಮೂಡಿಸಿದೆ. ಹಾಗೂ ಇಷ್ಟು ಆವೃತ್ತಿಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಎಬಿಡಿ ಮೇಲೆ ಅವಲಂಬಿತವಾಗುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಎಬಿಡಿ ಇಲ್ಲದೇ ಕಣಕ್ಕಿಳಿಯಲಿದ್ದು, ಮಧ್ಯಮ ಕ್ರಮಾಂಕದಲ್ಲಿ ನೆಲಕಚ್ಚಿ ನಿಲ್ಲಬಲ್ಲ ಆಟಗಾರರಿಲ್ಲ ಎಂಬ ಹಿನ್ನಡೆಯನ್ನು ಅನುಭವಿಸಲಿದೆ.


Click it and Unblock the Notifications












