RCB vs RR: ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ಸಿಬಿ ಹೀನಾಯ ಸೋಲಿಗೆ ಈ 6 ಆಟಗಾರರೇ ಕಾರಣ!

ಕಳೆದ ಮಾರ್ಚ್ ತಿಂಗಳಲ್ಲಿ ಆರಂಭವಾಗಿದ್ದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹೊಸ ನಾಯಕ ಹಾಗೂ ಹೊಸ ಹುರುಪಿನೊಂದಿಗೆ ಕಣಕ್ಕಿಳಿದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಟ್ರೋಫಿ ಎತ್ತಿ ಹಿಡಿಯಬಹುದಾದ ತಂಡಗಳಲ್ಲೊಂದು ಎನಿಸಿಕೊಂಡಿತ್ತು.
ಪ್ಲೇ ಆಫ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಳೆದ ಎಲಿಮಿನೇಟರ್ ಪಂದ್ಯದಲ್ಲಿ ಬಲಿಷ್ಠ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದು ಭರವಸೆಯನ್ನು ಮತ್ತಷ್ಟು ಹೆಚ್ಚು ಮಾಡಿತ್ತು. ಆದರೆ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹೀನಾಯವಾಗಿ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೂರ್ನಿಯಿಂದ ಹೊರಬಿದ್ದು, ಈ ಬಾರಿಯೂ ಕೂಡ ಅಪಾರ ಅಭಿಮಾನಿಗಳ ಕನಸನ್ನು ಕನಸಾಗಿಯೇ ಉಳಿಯುವಂತೆ ಮಾಡಿದೆ.
ಹೌದು, ನಿನ್ನೆ ( ಮೇ 27 ) ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಕಲೆಹಾಕಿ ಎದುರಾಳಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 158 ರನ್ಗಳ ಗುರಿಯನ್ನು ನೀಡಿತು. ಆದರೆ ಈ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 18.1 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 161 ರನ್ ಬಾರಿಸಿ 7 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿ ಫೈನಲ್ ಸುತ್ತಿಗೆ ಲಗ್ಗೆ ಇಟ್ಟಿತು. ಇತ್ತ ಸತತ ಮೂರನೇ ಬಾರಿ ಪ್ಲೇ ಆಫ್ ಪ್ರವೇಶಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯೂ ಸಹ ಫೈನಲ್ ಪ್ರವೇಶಿಸಲಾಗದೇ ಮುಗ್ಗರಿಸಿತು. ಇನ್ನು ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿಗೆ ಈ ಕೆಳಕಂಡ 6 ಆಟಗಾರರೇ ಪ್ರಮುಖ ಕಾರಣ ಎನ್ನಬಹುದು.

1. ಜೋಸ್ ಬಟ್ಲರ್
ರಾಜಸ್ಥಾನ್ ರಾಯಲ್ಸ್ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ಜೋಸ್ ಬಟ್ಲರ್ 60 ಎಸೆತಗಳಲ್ಲಿ 106 ರನ್ ಕಲೆಹಾಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ಗಳನ್ನು ಕಾಡಿದರು. 10 ಬೌಂಡರಿ ಮತ್ತು 6 ಸಿಕ್ಸರ್ ಚಚ್ಚಿದ ಬಟ್ಲರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್ಗಳ ಯಾವುದೇ ತಂತ್ರಕ್ಕೂ ಮಣಿಯದೇ ಅಜೇಯರಾಗಿ ಉಳಿದುಕೊಂಡು ಫಾಫ್ ಡು ಪ್ಲೆಸಿಸ್ ಪಡೆಯ ಸೋಲಿಗೆ ಪ್ರಮುಖ ಕಾರಣರಾದರು. ಪಂದ್ಯದಲ್ಲಿ ಅಬ್ಬರಿಸಿದ ಬಟ್ಲರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

2. ಪ್ರಸಿದ್ಧ್ ಕೃಷ್ಣ ಮತ್ತು ಒಬೆದ್ ಮೆಕಾಯ್
ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ಗಳಾದ ಪ್ರಸಿದ್ಧ್ ಕೃಷ್ಣ ಮತ್ತು ಒಬೆದ್ ಮೆಕಾಯ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಲ್ಪ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ತಲಾ 3 ವಿಕೆಟ್ ಪಡೆದ ಈ ಜೋಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿಗೆ ಕಾರಣರಾದರು. ಪ್ರಸಿದ್ಧ್ ಕೃಷ್ಣ ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ ಮತ್ತು ವನಿಂದು ಹಸರಂಗ ಅವರ ವಿಕೆಟ್ ಪಡೆದರೆ, ಒಬೆದ್ ಮೆಕಾಯ್ ಫಾಫ್ ಡು ಪ್ಲೆಸಿಸ್, ಮಹಿಪಾಲ್ ಲೊಮ್ರಾರ್ ಮತ್ತು ಹರ್ಷಲ್ ಪಟೇಲ್ ಅವರ ವಿಕೆಟ್ ಪಡೆದರು. ಅದರಲ್ಲಿಯೂ ಅಂತಿಮ 3 ಓವರ್ಗಳಲ್ಲಿ ಹೆಚ್ಚು ರನ್ ಕಲೆ ಹಾಕಲು ಅವಕಾಶ ನೀಡದ ಈ ಜೋಡಿ 18 ನೇ ಓವರ್ನಲ್ಲಿ 7 ರನ್ ನೀಡಿ 1 ವಿಕೆಟ್, 19ನೇ ಓವರ್ನಲ್ಲಿ 8 ರನ್ ನೀಡಿ 2 ವಿಕೆಟ್ ಪಡೆದು ಅಂತಿಮ ಓವರ್ನಲ್ಲಿ ಕೇವಲ 3 ರನ್ ಬಿಟ್ಟುಕೊಟ್ಟರು.

3. ಕೈಕೊಟ್ಟ ಕೆಜಿಎಫ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೆಜಿಎಫ್ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಈ ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆ ಹಾಕದೇ ವಿಫಲವಾದದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಬಹುದು. ಈ ಮೂವರಲ್ಲಿ ಯಾರಾದರೊಬ್ಬರು ದೊಡ್ಡ ಇನ್ನಿಂಗ್ಸ್ ಕಟ್ಟಿ ಬೃಹತ್ ಗುರಿಯನ್ನು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ನೀಡಿ ಒತ್ತಡವನ್ನು ಹೇರಿದ್ದರೆ ಫಲಿತಾಂಶದಲ್ಲಿ ಬದಲಾವಣೆ ನಿರೀಕ್ಷಿಸಬಹುದಿತ್ತು. ವಿರಾಟ್ ಕೊಹ್ಲಿ 7 ರನ್ ಗಳಿಸಿ ಔಟ್ ಆದರೆ, ಫಾಫ್ ಡು ಪ್ಲೆಸಿಸ್ 25 ರನ್ ಗಳಿಸಿ ವಿಕೆಟ್ ಒಪ್ಪಿಸಿದರು ಮತ್ತು 2 ಸಿಕ್ಸರ್ ಸಿಡಿಸಿ ಕೊಂಚ ಅಬ್ಬರಿಸಿದ ಮ್ಯಾಕ್ಸಿ 24 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications