
ಐಪಿಎಲ್ ಟೂರ್ನಿಯ ಆರಂಭಕ್ಕೆ ಇನ್ನಿ ಇರುವುದು ಕೇವಲ 6 ದಿನಗಳು ಮಾತ್ರ. ಮುಂದಿನ ಶನಿವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುವ ಮೂಲಕ ಟೂರ್ನಿ ಭರ್ಜರಿ ಆರಂಭವನ್ನು ಪಡೆಯಲಿದೆ. ಆದರೆ ಈ ಹಂತದಲ್ಲಿ ಮಹಾರಾಷ್ಟ್ರ ಸರ್ಕಾರ ಕಠಿಣ ನಿರ್ಧಾರವೊಂದನ್ನೆ ತೆಗೆದುಕೊಳ್ಳುವ ಸಂಭವವಿದ್ದು ಇದು ಅಧಿಕೃತವಾದಲ್ಲಿ 15ನೇ ಆವೃತ್ತಿಯ ಐಪಿಎಲ್ಗೆ ಭಾರೀ ಹಿನ್ನಡೆಯಾದಂತಾಗುತ್ತದೆ.
ಕೊರೊನಾವೈರಸ್ನ ಮೂರನೇ ಅಲೆಯ ಬಳಿಕ ದೇಶಾದ್ಯಂತ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವ ಕಾರಣ 50 ಶೇಕಡಾ ಪ್ರೇಕ್ಷಕರ ಲಭ್ಯತೆಯೊಂದಿಗೆ ಟೂರ್ನಿಯನ್ನು ಆಯೋಜಿಸಲು ನಿರ್ಧರಿಸಿಲಾಗಿದೆ. ಲೀಗ್ ಹಂತದ ಎಲ್ಲಾ ಪಂದ್ಯಗಳು ಮುಂಬೈ ಹಾಗೂ ಪುಣೆಯಲ್ಲಿ ನಡೆಯಲಿರುವ ಕಾರಣ ಮಹಾರಾಷ್ಟ್ರ ಸರ್ಕಾರ 50 ಶೇಕಡಾ ಪ್ರೇಕ್ಷಕರಿಗೆ ಅನುಮತಿಯನ್ನು ನೀಡಿದೆ. ಆದರೆ ಈಗ ಮತ್ತೊಮ್ಮೆ ಕೊರೊನಾ ಆತಂಕದ ಕಾರಣದಿಂದಾಗಿ ಈ ಅನುಮತಿಯನ್ನು ಮಹಾರಾಷ್ಟ್ರ ಸರ್ಕಾರ ವಾಪಾಸ್ ಪಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹೀಗಾದಲ್ಲಿ ಮತ್ತೊಮ್ಮೆ ಪ್ರೇಕ್ಷಕರ ಅಲಭ್ಯತೆಯಲ್ಲಿಯೇ ಟೂರ್ನಿ ಆಯೋಜನೆಯಾಗುವ ಅನಿವಾರ್ಯತೆ ಉಂಟಾಗಲಿದೆ.
ಮಹಾರಾಷ್ಟ್ರ ಸರ್ಕಾರದಲ್ಲಿ ಹೊಸ ಕೊರೊನಾ ಪ್ರಕರಣಗಳ ಆತಂಕದ ವಿಚಾರವಾಗಿ ಕೇಂದ್ರ ಸರ್ಕಾರ ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಈ ಬೆಳವಣಿಗೆ ಐಪಿಎಲ್ ಟೂರ್ನಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರದ ಎಚ್ಚರಿಕೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಪ್ರೇಕ್ಷಕರಿಗೆ ನೀಡಿದ್ದ ಅನುಮತಿಯನ್ನು ವಾಪಾಸ್ ಪಡೆಯುವ ಸಾಧ್ಯತೆಯೂ ಇಲ್ಲದಿಲ್ಲ.
ಈ ಬೆಳವಣಿಗೆಯ ಬಗ್ಗೆ ಮಹಾರಾಷ್ಟ್ರ ಸರ್ಕಾರದ ಆರೋಗ್ಯ ಸಚಿವ ರಾಜೇಶ್ ಟೋಪೆ ಸ್ಪಷ್ಟಪಡಿಸಿದ್ದಾರೆ. "ಯೂರೋಪ್ ದೇಶಗಳಲ್ಲಿ, ದಕ್ಷಿಣ ಕೊರಿಯಾ ಹಾಗೂ ಚೀನಾದಲ್ಲಿ ಹೊಸ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಳುಹಿಸಿದ ಎಚ್ಚರಿಕೆಯ ಪತ್ರವನ್ನು ನಾವು ಸ್ವೀಕರಿಸಿದ್ದೇವೆ" ಎಂದಿದ್ದಾರೆ.
ಮುಂದುವರಿದು ಮಾತನಾಡುರುವ ಅವರು "ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಹೆಚ್ಚೆಗಳನ್ನು ಇಟ್ಟಿದ್ದೇವೆ. ಐಪಿಎಲ್ ವಿಚಾರವಾಗಿ ಈ ಹಂತದಲ್ಲಿ ನಾವು ಪ್ರತಿಕ್ರಿಯೆಗಳನ್ನು ನೀಡಲು ಬಯಸುವುದಿಲ್ಲ" ಎಂದಿದ್ದಾರೆ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ.
ಈ ಬಾರಿಯ ಐಪಿಎಲ್ ಟೂರ್ನಿಯ ಲೀಗ್ ಹಂತದ ಎಲ್ಲಾ 70 ಪಂದ್ಯಗಳನ್ನು ಮಹಾರಾಷ್ಟ್ರದಲ್ಲಿ ಆಯೋಜಿಸಲಾಗುತ್ತಿದೆ. ಮುಂಬೈ ಹಾಗೂ ಪುಣೆಯ ನಾಲ್ಕು ಕ್ರೀಡಾಂಗಣಗಳಲ್ಲಿ ಟೂರ್ನಿ ಆಯೋಜಿಸಲಾಗುತ್ತದೆ. ಐಪಿಎಲ್ ಆಡಳಿತ ಮಂಡಳಿ ಹಾಗೂ ಮಹಾರಾಷ್ಟ್ರ ಸರ್ಕಾರ ಚರ್ಚಿಸಿ ಟೂರ್ನಿಗೆ 50 ಶೇಕಡಾ ಪ್ರೇಕ್ಷಕರಿಗೆ ಅವಕಾಶ ನೀಡಲು ಅನುಮತಿ ನೀಡಿದೆ. ಮುಂದಿನ ದಿನಗಳಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖಯ್ ಮತ್ತಷ್ಟು ಇಳಿಕೆಯಾದರೆ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರಿಗೆ ಅನುಮತಿ ನೀಡುವ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿತ್ತು.