
ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕಡೆಗೂ ನಿಟ್ಟುಸಿರುವ ಬಿಡುವಂತಾ ಸುದ್ದಿ ಲಭ್ಯವಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಭಾಗಿಯಾಗಲು ಸಜ್ಜಾಗಿದ್ದ ಮೊಯೀನ್ ಅಲಿ ವೀಸಾ ಸಮಸ್ಯೆಯ ಕಾರಣದಿಂದಾಗಿ ಭಾರತಕ್ಕೆ ಪ್ರಯಾಣಿಸಲು ಸಾಧ್ಯವಾಗಿರಲಿಲ್ಲ. ಇದೀಗ ವೀಸಾ ಸಮಸ್ಯೆ ಬಗೆಹರಿದಿದ್ದು ಮೊಯೀನ್ ಅಲಿ ಭಾರತಕ್ಕೆ ಪ್ರಯಾಣಿಸಲು ಅನುಮತಿ ದೊರೆತಂತಾಗಿದೆ. ಹಾಗಿದ್ದರೂ ಮೊಯೀನ್ ಅಲಿ ಆರಂಭಿಕ ಪಂದ್ಯದಿಂದ ಹೊರಗುಳಿಯುವುದು ಅನಿವಾರ್ಯವಾಗಿದೆ.
ಇಂಗ್ಲೆಂಡ್ ಕ್ರಿಕೆಟಿಗ ಮೊಯೀನ್ ಅಲಿ ಗುರುವಾರ ಮುಂಬೈನಲ್ಲಿ ಬಂದಿಳಿಯುವ ಸಾಧ್ಯತೆಯಿದೆ. ಆದರೆ ಮೂರು ದಿನಗಳ ಕಡ್ಡಾಯ ಕ್ವಾರಂಟೈನ್ ಪೂರೈಸಬೇಕಿರುವ ಕಾರಣ ಮೊಯೀನ್ ಅಲಿ ಶನಿವಾರ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ನಡೆಯಲಿರುವ ಈ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಲಭ್ಯವಾಗುವ ಸಾಧ್ಯತೆಯಿಲ್ಲ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ 2ನೇ ಪಂದ್ಯಕ್ಕೆ ಲಭ್ಯವಾಗಲಿದ್ದಾರೆ.
ಈ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಸಿ ವಿಶ್ವನಾಥನ್ ಮಾಹಿತಿ ನೀಡಿದ್ದಾರೆ. "ಮೊಯೀನ್ ಅಲಿ ವೀಸಾ ಸ್ವೀಕರಿಸಿದ್ದು ಗುರುವಾರ ಮಧ್ಯಾಹ್ನ ಮುಂಬೈಗೆ ತಲುಪಲಿದ್ದಾರೆ. ಮೂರು ದಿನಗಳ ಕ್ವಾರಂಟೈನ್ ಮುಗಿಸಿ ಅವರು ಎರಡನೇ ಪಂದ್ಯದಿಂದ ಲಭ್ಯವಾಗಲಿದ್ದಾರೆ" ಎಂದು ಕಾಸಿ ವಿಶ್ವನಾಥನ್ ಅವರ ಹೇಳಿಕೆಯನ್ನು ಪಿಟಿಐ ಉಲ್ಲೇಖಿಸಿದೆ.
ಪಾಕಿಸ್ತಾನಿ ಮೂಲದ ಆಟಗಾರರಿಗೆ ಪ್ರತ್ಯೇಕ ವಿಧಾನವನ್ನು ಅನುಸರಿಸುತ್ತಿರುವ ಕಾರಣದಿಂದಾಗಿ ವೀಸಾ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ ಎನ್ನಲಾಗಿದೆ. ಮೊಯೀನ್ ಅಲಿ ಅವರ ಅಜ್ಜ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಇಂಗ್ಲೆಂಡ್ಗೆ ವಲಸೆ ಬಂದವರಾಗಿದ್ದಾರೆ. ಆದರೆ ಮೊಯೀನ್ ಅಲಿ ಇಂಗ್ಲೆಂಡ್ನಲ್ಲಿಯೇ ಜನಿಸಿದ್ದು ಆಗಾಗ ಭಾರತಕ್ಕೆ ಭೇಟಿ ನೀಡುತ್ತಿರುತ್ತಾರೆ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಅಭಿಯಾವನ್ನು ಆರಂಭಿಸಲಿದೆ. ತನ್ನ ಎರಡನೇ ಪಂದ್ಯವನ್ನು ಈ ಬಾರಿಯ ಐಪಿಎಲ್ಗೆ ಮೊದಲ ಬಾರಿಗೆ ಪದಾರ್ಪಣೆ ಮಾಡುತ್ತಿರುವ ಲಕ್ಬೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಮಾರ್ಚ್ 31ರಂದು ಆಡಲಿದೆ. ಈ ಪಂದ್ಯದಕ್ಕೆ ಮೊಯೀನ್ ಅಲಿ ಲಭ್ಯವಾಗಲಿದ್ದಾರೆ.
ಕಳೆದ ಆವೃತ್ತಿಯಲ್ಲಿಯೂ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡಿದ್ದ ಮೊಯೀನ್ ಅಲಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ತನ್ನ ಆಲ್ರೌಂಡರ್ ಆಟದ ಕಾರಣದಿಂದಾಗಿ ಚೆನ್ನೈ ತಂಡ ನಾಲ್ಕನೇ ಬಾರಿ ಚಾಂಪಿಯನ್ ಪಟ್ಟಕ್ಕೇರುವಲ್ಲಿಯೂ ಅಲಿ ಮಹತ್ವದ ಕೊಡುಗೆ ನೀಡಿದ್ದರು. ಈ ಪ್ರದರ್ಶನದ ಕಾರಣದಿಂದಾಗಿ ಸಿಎಸ್ಕೆ ಫ್ರಾಂಚೈಸಿ ನಾಯಕ ಎಂಎಸ್ ಧೋನಿ, ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ಋತರಾಜ್ ಗಾಯಕ್ವಾಡ್ ಅವರೊಂದಿಗೆ ಮೊಯೀನ್ ಅಲಿ ಅವರನ್ನು ಕೂಡ ರೀಟೈನ್ ಮಾಡಿಕೊಂಡಿದೆ.
ಕಳೆದ ವರ್ಷದ ಐಪಿಎಲ್ ಟೂರ್ನಿಯಲ್ಲಿ 15 ಪಂದ್ಯಗಳಲ್ಲಿ ಆಡಿದ್ದ ಮೊಯೀನ್ ಅಲಿ 357 ರನ್ಗಳನ್ನು ಗಳಿಸಿದ್ದರು. ಇನ್ನು ಬೌಲಿಂಗ್ನಲ್ಲಿಯೂ ಮಿಂಚಿದ್ದ ಅಲಿ 6 ವಿಕೆಟ್ ಪಡೆದಿದ್ದಾರೆ.
ಸಿಎಸ್ಕೆ ತಂಡದ ಸಂಪೂರ್ಣ ಸ್ವ್ಕಾಡ್: ರವೀಂದ್ರ ಜಡೇಜಾ, ಎಂಎಸ್ ಧೋನಿ, ಮೊಯಿನ್ ಅಲಿ, ಋತುರಾಜ್ ಗಾಯಕ್ವಾಡ್, ಡ್ವೇಯ್ನ್ ಬ್ರಾವೋ, ಅಂಬಾಟಿ ರಾಯುಡು, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ಸುಭ್ರಾಂಶು ಸೇನಾಪತಿ, ಆಡಮ್ ಮಿಲ್ನೆ, ಮುಖೇಶ್ ಚೌಧರಿ, ಸಿ ಹರಿ ನಿಶಾಂತ್, ಪ್ರಶಾಂತ್ ಸೋಲಂಕಿ, ಎನ್ ಜಗದೀಶ್, ಕ್ರಿಸ್ ಜೋರ್ಡಾನ್, ಕೆ ಭಗತ್ ವರ್ಮಾ, ರಾಬಿನ್ ಉತ್ತಪ್ಪ, ದೀಪಕ್ ಚಹಾರ್, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಕೆಎಂ ಆಸಿಫ್, ಶಿವಂ ದುಬೆ, ಮಹೇಶ್ ತೀಕ್ಷಣ, ರಾಜವರ್ಧನ್ ಹಂಗರ್ಗೇಕರ್, ಸಮರ್ಜಿತ್ ಸಿಂಗ್, ಡೆವೊನ್ ಕಾನ್ವೇ.