
ಈ ಬಾರಿಯ ಐಪಿಎಲ್ನಲ್ಲಿ ಸೋಲಿನ ಮೇಲೆ ಸೋಲು ಅನುಭವಿಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮತ್ತೋರ್ವ ಆಟಗಾರ ಟೂರ್ನಿಯಿಂದ ಹೊರಬಿದ್ದಿದ್ದಾರೆ. ನ್ಯೂಜಿಲೆಂಡ್ ಮೂಲದ ವೇಗಿ ಆಡಮ್ ಮಿಲ್ನೆ ಗಾಯಗೊಂಡ ಕಾರಣ ಸಂಪೂರ್ಣ ಐಪಿಎಲ್ 2022 ರ ಆವೃತ್ತಿಯಿಂದ ಹೊರಗುಳಿಯಬೇಕಾಗಿದೆ. ಈ ಆಟಗಾರನಿಗೆ ಬದಲಿ ಬೌಲರ್ನನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಘೋಷಣೆ ಮಾಡಿದೆ.
ಆಡಮ್ ಮಿಲ್ನೆ ಈ ಬಾರಿಯ ಆವೃತ್ತಿಯಲ್ಲಿ ಸಿಎಸ್ಕೆ ಪರವಾಗಿ ಕೇವಲ ಒಂದು ಪಂದ್ಯವನ್ನು ಮಾತ್ರವೇ ಆಡಿದ್ದರು. ನಂತರ ಮಂಡಿರಜ್ಜು ಗಾಯಕ್ಕೆ ಒಳಗಾದ ಅವರು ಆಡುವ ಬಳಗದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಇದೀಗ ಸಂಪೂರ್ಣ ಟೂರ್ನಿಯಿಂದ ಹೊರಗುಳಿಯುವುದು ಅನಿವಾರ್ಯವಾಗಿದೆ. ಹೀಗಾಗಿ ಶ್ರೀಲಂಕಾದ ವೇಗಿಯನ್ನು ಸಿಎಸ್ಕೆ ತೆಕ್ಕೆಗೆ ಹಾಕಿಕೊಂಡಿದೆ.
ಶ್ರೀಲಂಕಾದ 19ರ ಹರೆಯದ ವೇಗದ ಬೌಲರ್ ಮಥೀಶ ಪತಿರಣ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಆಟಗಾರನಾಗಿದ್ದಾರೆ. ನಾಲ್ಕು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿರುವ ಮಥೀಶ ಪತಿರಣ ಅವರ ಮೂಲಬೆಲೆ 20 ಲಕ್ಷ ರೂಪಾಯಿ. ಈ ಮೂಲಕ ಮತ್ತೋರ್ವ ಶ್ರೀಲಂಕಾ ಆಟಗಾರ ಈ ಬಾರಿಯ ಐಪಿಎಲ್ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಭಾರೀ ಹಿನ್ನೆಡೆಯನ್ನು ಅನುಭವಿಸಿದೆ. ಈವರೆಗೆ ಆಡಿರುವ ಆರು ಪಂದ್ಯಗಳ ಪೈಕಿ 1 ಗೆಲುವು ಮಾತ್ರವೇ ಸಾಧ್ಯವಾಗಿದೆ. ಹೀಗಾಗಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಟೂರ್ನಿಯ ಆರಂಭಕ್ಕೆ ಮುನ್ನವೇ ಎಂಎಸ್ ಧೋನಿ ನಾಯಕತ್ವ ತ್ಯಜಿಸಿದ್ದು ರವೀಂದ್ರ ಜಡೇಜಾ ನಾಯಕನಾಗಿ ಜವಾಬ್ಧಾರಿ ವಹಿಸಿಕೊಳ್ಳುವ ಮೂಲಕ ತಂಡದಲ್ಲಿ ಪ್ರಮುಖ ಬದಲಾವಣೆಯಾಗಿದೆ. ಇನ್ನು ಇದಕ್ಕೂ ಮುನ್ನ ತಂಡದ ಮತ್ತೋರ್ವ ಪ್ರಮುಖ ವೇಗಿ ದೀಪಕ್ ಚಾಹರ್ ಗಾಯಗೊಂಡ ಕಾರಣ ಟೂರ್ನಿಗೆ ಸಂಪೂರ್ಣವಾಗಿ ಅಲಭ್ಯವಾಗಿದ್ದಾರೆ.
ಇನ್ನು ಸಿಎಸ್ಕೆ ತಂಡಕ್ಕೆ ಸೇರ್ಪಡೆಯಾಗಿರುವ ಮಥೀಶ ಪತಿರಣ 2020ರ ಅಂಡರ್-19 ವಿಶ್ವಕಪ್ನ ಭಾಗವಾಗಿದ್ದರು. ಶ್ರೀಲಂಕಾದ ದಿಗ್ಗಜ ವೇಗಿ ಲಸಿತ್ ಮಲಿಂಗಾ ಅವರ ಬೌಲಿಂಗ್ ಶೈಲಿಯನ್ನು ಹೊಂದಿರುವ ಕಾರಣ ಪಥಿರಣ ಸಾಕ್ಷು ಸುದ್ದಿಯಾಗಿದ್ದರು. ಇದೀಗ ಐಪಿಎಲ್ನಲ್ಲಿ ಯಾವ ರೀತಿ ಪರಿಣಾಮ ಬೀರಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.