
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವದ ಹೊಣೆ ಮಹೇಂದ್ರ ಸಿಂಗ್ ಧೋನಿ ಹೆಗಲೇರಿದೆ. ಸತತ ಸೋಲುಗಳ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಹೊಣೆ ಹೊತ್ತಿದ್ದ ರವೀಂದ್ರ ಜಡೇಜಾ ಮತ್ತೆ ಧೋನಿಗೆ ನಾಯಕತ್ವ ಮರಳಿಸಿದ್ದಾರೆ. ಮಾಹಿ ಮತ್ತೊಮ್ಮೆ ನಾಯಕನಾಗಿ ತಂಡವನ್ನು ಮುನ್ನಡೆಸಿದ ಮೊದಲ ಪಂದ್ಯದಲ್ಲಿಯೇ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಹತ್ವದ 2 ಅಂಕಗಳನ್ನು ಸೇರ್ಪಡೆಗೊಳಿಸಿದೆ.
ಹಾಲಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಟೂರ್ನಿಯಲ್ಲಿ ಮೂರನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಧೋನಿ ನಾಯಕತ್ವದಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡುವ ಸೂಚನೆ ನೀಡಿದೆ. ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರೇಂದ್ರ ಸೆಹ್ವಾಗ್ ಧೋನಿ ನಾಯಕತ್ವದ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ. ಧೋನಿ ನಾಯಕತ್ವದಲ್ಲಿ ಸಿಎಸ್ಕೆ ತಂಡ ಪ್ಲೇಆಫ್ಗೇರುವ ಅವಕಾಶವಿದೆ ಎಂದಿದ್ದಾರೆ.
ಕ್ರಿಕ್ ಬಜ್ ಜೊತೆಗೆ ಮಾತನಾಡಿರುವ ವಿರೇಂದ್ರ ಸೆಹ್ವಾಗ್ "ನಾನು 2005ರಿಂದ ಎಂಎಸ್ ಧೋನಿ ಜೊತೆಗೆ ಇದ್ದೇನೆ. ಆತನ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ಬದಲಾವಣೆಯಾಗಿರುವುದನ್ನು ನಾನು ಕಂಡಿದ್ದೇನೆ" ಎಂದಿದ್ದಾರೆ ವಿರೇಂದ್ರ ಸೆಹ್ವಾಗ್. "ಧೋನಿ ನಾಯಕತ್ವದಲ್ಲಿ ನಾವು ಹಲವು ಐಸಿಸಿ ಟೂರ್ನಿಗಳನ್ನು ಗೆದ್ದುಕೊಂಡಿದ್ದೇವೆ. ನಾವು ಹಿಂದೆ ಸೋಲುತ್ತಿದ್ದ ಪಂದ್ಯಗಳನ್ನು ಧೋನಿ ನಾಯಕತ್ವದಲ್ಲಿ ಗೆಲ್ಲಲು ಆರಂಭಿಸಿದ್ದೆವು. ಅದನ್ನೆಲ್ಲಾ ದೃಷ್ಟಿಯಲ್ಲಿಟ್ಟುಕೊಂಡು ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂದಿನ 6 ಪಂದ್ಯಗಳಲ್ಲಿ ಆರನ್ನೂ ಗೆಲ್ಲುವುದು ಸಾಧ್ಯವಿದೆ ಎಂದಿದ್ದಾರೆ ವಿರೇಂದ್ರ ಸೆಹ್ವಾಗ್.
ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಆಡಿರುವ 9 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಮಾತ್ರವೇ ಗೆದ್ದುಕೊಂಡಿದ್ದು 6 ಅಂಕಗಳನ್ನು ಖಾತೆಯಲ್ಲಿ ಹೊಂದಿದೆ. ಹೀಗಾಗಿ ಪ್ಲೇಆಫ್ ಹಂತಕ್ಕೇರುವ ಅವಕಾಶ ಹೊಂದಬೇಕಾದರೆ ಉಳಿದ ಎಲ್ಲಾ ಪಂದ್ಯಗಳನ್ನು ಕೂಡ ಗೆಲ್ಲಲ್ಲೇ ಬೇಕಿದೆ. ಹಾಗಿದ್ದಾಗ ಮಾತ್ರವೇ ಚಾಂಪಿಯನ್ ಪಟ್ಟವನ್ನು ರಕ್ಷಿಸಿಕೊಳ್ಳುವ ಅವಕಾಶ ದೊರೆಯಲಿದೆ.
ಧೋನಿ ನಾಯಕತ್ವದಲ್ಲಿ ಗೆಲುವು ಸಾಧಿಸಿರುವ ಹುಮ್ಮಸ್ಸಿನಲ್ಲಿರು ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಮುಂದಿನ ಪಂದ್ಯವನ್ನು ಆರ್ಸಿಬಿ ವಿರುದ್ಧ ಆಡಲಿದೆ. ಮೇ 4 ಬುಧವಾರದಂದು ಈ ಪಂದ್ಯ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೊಸಿಯೇಶನ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇತ್ತ ಆರ್ಸಿಬಿ ಕೂಡ ಟೂರ್ನಿಯಲ್ಲಿ ಭಾರೀ ಹಿನ್ನಡೆ ಅನುಭವಿಸುತ್ತಿದೆ. ಉತ್ತಮ ಪ್ರದರ್ಶನ ನಿಡುತ್ತಿದ್ದ ಫಾಫ್ ಪಡೆ ಕಳೆದ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಒಮದು ವಾರದ ಅಂತರದಲ್ಲಿ ಆರ್ಸಿಬಿ ತಂಡ ಸನ್ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ವಿರುದ್ಧ ಸೋಲು ಅನುಭವಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಶಿವಂ ದುಬೆ, ಎಂಎಸ್ ಧೋನಿ (ನಾಯಕ/ ವಿಕೆಟ್ ಕೀಪರ್), ಡ್ವೇನ್ ಬ್ರಾವೋ, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ತುಷಾರ್ ದೇಶಪಾಂಡೆ, ಕ್ರಿಸ್ ಜೋರ್ಡಾನ್, ರಾಜವರ್ಧನ್ ಹಂಗರ್ಗೇಕರ್, ಮಹೇಶ್ ತೀಕ್ಷಣ, ಹರಿ ನಿಶಾಂತ್, ಎನ್ ಜಗದೀಸನ್, ಸುಭ್ರಾಂಶು ಸೇನಾಪತಿ, ಪ್ರಶಾಂತ್ ಸೋಲಂಕಿ, ಮುಖೇಶ್ ಚೌಧರಿ, ಕೆಎಂ ಆಸಿಫ್, ಸಿಮರ್ಜೀತ್ ಸಿಂಗ್, ಭಗತ್ ವರ್ಮಾ, ಮೊಯಿನ್ ಅಲಿ, ಡ್ವೈನ್ ಪ್ರಿಟೋರಿಯಸ್